Advertisement
ನೀನು ಎಂದರೆ ಏನು ನನಗೆ?:ನಕ್ಷತ್ರ ಬರೆದ ದಿನದ ಕವಿತೆ

ನೀನು ಎಂದರೆ ಏನು ನನಗೆ?:ನಕ್ಷತ್ರ ಬರೆದ ದಿನದ ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರ ಬರೆದ ದಿನದ ಕವಿತೆ.

ನೀನು ಎಂದರೆ ಏನು ನನಗೆ?

ಯಾರೂ ಏಳಬಾರದ ಸಮಯ
ಓಣಿಗಳಲ್ಲಿ ಯಾರೂ ಬರದಂತೆ
ಗಿಡದ ನೆರಳು ಅಡಗಿಸಿದೆ
ತಿರುವುಗಳು ದಾರಿ ಮಾಡುತ್ತಿದೆ
ಮೇಲೆ ತುದಿಯ ಬಾಗಿಲಿಲ್ಲದ ಕೋಣೆಗೆ
ಈಗಷ್ಟೇ ತಿಳಿಗಾಳಿ ಪರಿಮಳದ
ಸುಳಿವು ಹತ್ತಿದೆ

ನಾವು ಕೂಡುವುದನ್ನು ಹೇಗೆ
ಎಲ್ಲಿಂದ ಎಂದರೆ ಏನನ್ನುವುದು?
ಒಂದಷ್ಟು ಆಕಾಶವಾದರೆ ಸಾಕು
ನಾನು ಹೂವಾಗುವೆ
ಹರಿದು ಹೋಗುವ ಹಾಲು
ನಮ್ಮ ನೆರಳಿನ ಓಣಿಯಲ್ಲಿ
ಹೊರಳಿ ಹೊರಳಿ ಬಾ ನನ್ನ
ಪಕಳೆಯೊಳಗೆ ಮತ್ತೆ ಮೊಗ್ಗಾಗುವೆ
ತಿಂದು ತೇಗಿ ಕುಡಿದು
ಭಾರದ ಒಂಟಿತನ
ಹೇಗೆ ಬಂದಿತ್ತು ನಿನಗೆ?

ಇಲ್ಲಿ ಹೀಗೆ ಗಲಿಬಿಲಿಯಾಗಿ
ಎಲ್ಲಾ ಎಸೆದು ದಬ್ಬಿ ಹೊರ ಹಾಕಿರುವೆ
ನೀನು ಎಂದರೆ ಏನು ನನಗೆ?
ಒಂದು ಚಂದದ ಮಳೆ, ದೂರದ ಮೋಡ
ದೀರ್ಘ ಅಲೆದಾಟ, ಅರ್ಧ ಮರೆತ ಕನಸು?
ಅಥವಾ ನಿನ್ನ ಪಕ್ಕದಲ್ಲಿ ಕವಿತೆಯಾಗಿ
ಕುಳಿತಿರುವುದೇ?

About The Author

ನಕ್ಷತ್ರ

ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ. ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ. ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ!

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ