Advertisement
ಗೋರವಿ ಆಲ್ದೂರು ಬರೆದ ದಿನದ ಕವಿತೆ

ಗೋರವಿ ಆಲ್ದೂರು ಬರೆದ ದಿನದ ಕವಿತೆ

ನರನರಗಳನ್ನು ಎಣಿಕೆ ಮಾಡಿ
ನೂರು ಪರದೆಯಾಚೆ
ನೆತ್ತರ ಶಾಯಿ ಚೆಲ್ಲಿ
ಮೂರು ಪದದಲ್ಲಿ
ಮಾರುದ್ದುದ ಕವಿತೆ ಬರೆದ
ಭೂಮಿಯನ್ನೆ ಹೃದಯವಾಗಿಸಿಕೊಂಡ
ಶಾಸ್ತ್ರಗಳನ್ನು ಶಸ್ತ್ರಗಳನ್ನು
ಸಮಾನವಾಗಿ ಕಂಡವನ
ಪುಣ್ಯದ ಕಣ್ಣಿಗೆ ಸೂರ್ಯ-ಚಂದ್ರ ನಕ್ಷತ್ರವೆಲ್ಲವು ಧೂಳಾಗಿ ನಾಶವಾದಂತೆ ಕಾಣುವ
ಖಗೋಳಶಾಸ್ತ್ರಜ್ಞನ ಸಮಾಧಿಯ
ಕೇವಲ ನಾಲ್ಕು ಅಡಿ ಆಳದ ಭೂಮಿಯಲ್ಲಿ
ಹೂತುಹೋದವನ ಹೆಬ್ಬೆರೆಳು
ಆಕಾಶಮುಖಿಯಾಗಿ ನಿಶ್ಚಲವಾದ ಘಳಿಗೆ
ಸಮುದ್ರದಿಂದ ಖಂಡ ಖಂಡಗಳಾಗಿ
ಭಾಗವಾದ ಭೂಮಿಯೆಲ್ಲ
ಮರು ಸೇರ್ಪಡೆಯಾಗಲಿ
ಕರಿಯ ಬಿಳಿಯ ನರುಗೆಂಪು ತೊಗಲ
ಜನರ ಹೆಗಲ ಮೇಲೆ
ತೂಕದ ಯಂತ್ರ ಕೆಲಸ ಮಾಡಲಿ

ನೈಲ್ ನದಿಯ ತುದಿಗೆ ಕಾವೇರಿಯ
ಬೇರು ತಾಕಲಿ
ಭಾರತದ ರಕ್ತ ಎಲ್ಲಿಯೂ ಹನಿಯುವುದು ಬೇಡ
ಸಮಾಧಿಗಳಿಗೆ ಸೌಧಕಟ್ಟಿದ ದೇಶದ
ಅಗಾಧ ದಡ್ಡತನ
ಪಾಮರರ ಶವದ ರಸ ಹೀರಿ
ಬೆಳೆದ ಆಲದ ಮರ ಅಣಕಿಸಲಿ

ಗಾಳಿಯ ನಿರಾಕರಿಸಲ್ಪಟ್ಟ ಸಮುದ್ರ
ಹೆಪ್ಪಾಗಿ ಉಪ್ಪಾಗಿ
ಅಲೆಗಳಾಗದೆ ನರಳುವಾಗ
ಹೆಪ್ಪಿನಡಿಯಲ್ಲಿ ಸತ್ತ ಮೀನುಗಳು
ಬೀಜವಾಗಲಿ, ಬೆಳೆದು ಅರಣ್ಯವಾಗಲಿ
ಮರಣಕ್ಕೆ ಹೊಸ ದಿಕ್ಕು ಬರಲಿ
ಎದೆ ಎದೆಯ ಸೂಕ್ಷ್ಮದರ್ಶಕದ
ಧೂಳು ಸರಿದು
ಖಗೋಳಶಾಸ್ತ್ರಜ್ಞನ ಮಿದುಳ ತುಂಬಾ
ಹೊಸ ಗ್ರಹಗಳು ಮೂಡಲಿ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಮೂಲದ ಗೋರವಿ ತರುಣ ಕವಿ.
‘ಮಡಿಲ ನೂಲಿನ ಕೌದಿ’ ಇವರ  ಚೊಚ್ಚಲ ಕವನ ಸಂಕಲನ
ಸದ್ಯ ಕನ್ನಡ ಚಲನಚಿತ್ರ ರಂಗದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ.

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ