ಮನೆ ಕಟ್ಟುವ ಕಾರ್ಯಕ್ರಮ ಪ್ರಾರಂಭವಾಯಿತು. ಒಂದು ದಿನ ಮೇಸ್ತ್ರಿ ಬಂದವನೇ, ‘ಸೆಂಟರ್ ಲೈನ್’ ಕೊಡಿ ಎಂದ. ನನಗೋ ಹಾಗಂದರೆ ಏನು ಎಂದು ಗೊತ್ತಿಲ್ಲ. ತೇಜಸ್ವಿಯವರನ್ನು ಕೇಳಿದೆ. ‘ನನಗೂ ಗೊತ್ತಿಲ್ಲ ಶಿವ’ ಎಂದರು. ಬೇರೆಯವರನ್ನು ಕೇಳಿದರೆ ಎಲ್ಲಿ ಏನಂದುಕೊಳ್ಳುತ್ತಾರೋ ಎಂಬ ನಾಚಿಕೆ. ಮೇಸ್ತ್ರಿಯನ್ನು ಕರೆದು ಕೂರಿಸಿಕೊಂಡು ಒಂದು ವಾರ ತಡೆಯಿರಿ ಎಂದೆ. ಸಾಕಷ್ಟು ಪುಸ್ತಕ ರೆಫರ್ ಮಾಡಿಕೊಂಡೆ. ನಾನು ಕೂಡ ಎಂಜಿನಿಯರ್ ಓದಿದ್ದರಿಂದ ಬೇಗ ಕಂಡು ಹಿಡಿದುಕೊಂಡೆ. ಅವರ ಕಲ್ಪನೆಯಂತೆ ಮನೆ ಶುರು ಮಾಡಿ ಬೇಗವೇ ಮುಗಿಸಿದೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ
ಕಳೆದ ವಾರ ತೇಜಸ್ವಿ ಮನೆ ಕಟ್ಟುವ ಸಂದರ್ಭದ ಕೆಲ ಘಟನೆಗಳನ್ನು ಇಲ್ಲಿ ಕೆಟಿ ನೆನಪಿಸಿಕೊಂಡರು.
‘ಮನೆ ಕಟ್ಟುವ ನಿರ್ಧಾರವಾಯಿತು. ನಾನು, ತೇಜಸ್ವಿ ಕುಳಿತು ಮನೆ ಹೇಗೆ ಮಾಡಬೇಕು ಎಂದು ಸಾಕಷ್ಟು ಚರ್ಚೆ ಮಾಡಿದೆವು. ಅಲ್ಲೊಬ್ಬ ಮುತ್ತುಸ್ವಾಮಿ ಎಂಬ ಮೇಸ್ತ್ರಿ ಇದ್ದ. ದೊಡ್ಡ ಕೆಲಸಗಾರ. ಅವನ ಬಗ್ಗೆ ಒಂದು ಕುತೂಹಲಕಾರಿ ಕತೆಯೇ ಇದೆ.
ಅವನಿಗೆ ಇಬ್ಬರು ಹೆಂಡತಿಯರು. ಕುತೂಹಲಕಾರಿ ಅಂಶ ಎಂದರೆ. ಇಡೀ ಕುಟುಂಬ ಇವನ ವೃತ್ತಿಗೆ ಬೆಂಬಲವಾಗಿ ನಿಂತಿತ್ತು. ಇಡೀ ಕುಟುಂಬ ಕೆಲಸ ಮಾಡುತ್ತಿದ್ದರಿಂದ ಆತ ಯಾರನ್ನೂ ಅವಲಂಬಿಸುವ ಅಗತ್ಯ ಇರಲಿಲ್ಲ. ಅದೊಂದು ವರ್ಕಿಂಗ್ ಫೋರ್ಸ್. ಹೀಗೆ ಒಮ್ಮೆ ಆತ ಊರ ಗೌಡನಿಗೆ ಸಾಲ ಕೊಟ್ಟಿದ್ದ. ಆದರೆ ಸಾಕಷ್ಟು ತಿಂಗಳಾದರೂ ವಾಪಾಸ್ ಕೊಟ್ಟಿರಲಿಲ್ಲ. ಗೌಡನ ಮನೆಗೆ ಅಲೆದು ಅಲೆದು ಸುಸ್ತಾಗಿದ್ದ. ಒಂದು ದಿನ ಈತನ ಪತ್ನಿ ನೇರ ಗೌಡರ ಮನೆಗೆ ಹೋದವಳೇ ‘ನೀವು ತಿರುಗಿ ಸಾಲ ಕೊಡುವುದು ಬೇಡ ನಿನ್ನ ಮಗಳನ್ನು ನನ್ನ ಗಂಡನಿಗೆ ಕೊಟ್ಟು ಮದುವೆ ಮಾಡು’ ಎಂದಳಂತೆ. ಈ ವಿಷಯ ಎಲ್ಲರ ಬಾಯಿಂದ ಬಾಯಿಗೆ ಹರಡಿತ್ತು. ಅಂದರೆ ಮೇಸ್ತ್ರಿ ಕುಟುಂಬಕ್ಕೆ ಕೆಲಸ ಮಾಡಲು ಮತ್ತೊಬ್ಬರು ಸೇರಿದಂತೆ ಆಗುತ್ತಿತ್ತು. ‘ಇಂತಹವರನ್ನು ಕಟ್ಟಿಕೊಂಡು ಕೆಲಸ ಮಾಡಬೇಕು ಶಿವಾ’ ಎಂದು ತೇಜಸ್ವಿ ನಕ್ಕಿದ್ದರು.
ಮನೆ ಕಟ್ಟುವ ಕಾರ್ಯಕ್ರಮ ಪ್ರಾರಂಭವಾಯಿತು. ಒಂದು ದಿನ ಮೇಸ್ತ್ರಿ ಬಂದವನೇ, ‘ಸೆಂಟರ್ ಲೈನ್’ ಕೊಡಿ ಎಂದ.
ನನಗೋ ಹಾಗಂದರೆ ಏನು ಎಂದು ಗೊತ್ತಿಲ್ಲ. ತೇಜಸ್ವಿಯವರನ್ನು ಕೇಳಿದೆ. ‘ನನಗೂ ಗೊತ್ತಿಲ್ಲ ಶಿವ’ ಎಂದರು. ಬೇರೆಯವರನ್ನು ಕೇಳಿದರೆ ಎಲ್ಲಿ ಏನಂದುಕೊಳ್ಳುತ್ತಾರೋ ಎಂಬ ನಾಚಿಕೆ. ಮೇಸ್ತ್ರಿಯನ್ನು ಕರೆದು ಕೂರಿಸಿಕೊಂಡು ಒಂದು ವಾರ ತಡೆಯಿರಿ ಎಂದೆ. ಸಾಕಷ್ಟು ಪುಸ್ತಕ ರೆಫರ್ ಮಾಡಿಕೊಂಡೆ. ನಾನು ಕೂಡ ಎಂಜಿನಿಯರ್ ಓದಿದ್ದರಿಂದ ಬೇಗ ಕಂಡು ಹಿಡಿದುಕೊಂಡೆ. ಅವರ ಕಲ್ಪನೆಯಂತೆ ಮನೆ ಶುರು ಮಾಡಿ ಬೇಗವೇ ಮುಗಿಸಿದೆವು. ಅಲ್ಲಿಂದ ನಾನು ಮನೆಗೆ ಆರ್ಕಿಟಿಕ್ಟ್ ಮಾಡಲು ಶುರು ಮಾಡಿದ್ದು. ಇನ್ನೂರಕ್ಕಿಂತ ಹೆಚ್ಚು ಮನೆಗಳನ್ನು ಆರ್ಕಿಟೆಕ್ಟ್ ಮಾಡಿದ್ದೇನೆ. ಬಹುಶಃ ನಾನು ಆರ್ಕಿಟೆಕ್ಟ್ ಮಾಡಲು ಕಾರಣರಾದವರೂ ಕೂಡ ತೇಜಸ್ವಿ ಎಂದರೆ ತಪ್ಪಿಲ್ಲ. ಈ ಮಧ್ಯೆ ತೇಜಸ್ವಿ ಚಿದಂಬರ ರಹಸ್ಯ ಬರೆಯಲು ಶುರು ಮಾಡಿದರು. ಇಷ್ಟರಲ್ಲಾಗಲೇ ತೇಜಸ್ವಿ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ್ದರು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


