Advertisement
ಕರುಣೆ: ಡಾ.ನಾ. ಮೊಗಸಾಲೆ ಬರೆದ ಈ ದಿನದ ಕವಿತೆ

ಕರುಣೆ: ಡಾ.ನಾ. ಮೊಗಸಾಲೆ ಬರೆದ ಈ ದಿನದ ಕವಿತೆ

ಕರುಣೆ

ಹೇಗೆ ನಿಂತಿದೆ ನೋಡಿ ಆ ಮರ
ಅಣಕಿಸುವಂತೆ ನನ್ನ!
ಕೊಂಬೆ ರೆಂಬೆಗಳಲ್ಲಿ ಹರಡಿ
ಫಲಪುಷ್ಪಗಳಲ್ಲಿ ಅಡಗಿ!

ಹೋಗಿದ್ದೆ ನಿನ್ನೆ ಇದರ ನೆರಳಿಗೆ
ಕಡು ಬಿಸಿಲು ತಡೆಯಲಾಗದೆ
ಬೀಸುವ ಗಾಳಿ ಕರೆಯದೇ ಬಂತು
ಅದೇ ಆದಂತೆ ಬೀಸಣಿಗೆ

ಇದ್ದೆ ಸುಮಾರಾಗಿ ಕೆಲಹೊತ್ತು
ಬಿದ್ದೀತೇ ಒಂದು ಹಣ್ಣು ಕೆಳಗೆ
ಎನ್ನುತ್ತಿದ್ದಂತೆ ಬಿತ್ತು ಹಣ್ಣು ಹಣ್ಣಾಗಿ
ಹಣ್ಣೇ ಕೃಪೆ ತೋರಿದಂತೆ

ಬಳಿ ಸಾರಿದರೆ, ಆ ಹಣ್ಣು
ಒಡೆದು ಹೋಗಿತ್ತು ಭಾಗವಾಗಿ
ನಿನಗಲ್ಲ ಎಂಬಂತೆ, ಆದರೂ
ಭೃಂಗಗಳು ಬಂದುವು ಬೆನ್ನೇರಿ

ಸಿಟ್ಟು ಕಣ್ಣಲಿ ಹುಟ್ಟಿ ಎದ್ದು ನಿಂತವ ನಾನು
ಒದ್ದೆ ಬಲವಾಗಿ ಮರಕ್ಕೆ
ಬೀಳಲೇ ಇಲ್ಲ ಒಂದೂ ಹಣ್ಣು
ಕ್ರೂರಿ ಅಲ್ಲವೆ ಇಡೀ ಮರವೆ!

ಹೊರಟೆ, ತಿರಸ್ಕರಿಸುವಂತೆ ಆ ಮರವ
ಆಕಾಶ ನೋಡುತ್ತ ಮೆಲ್ಲ
ಆಗ ಬೀಳಬೇಕೇ ಒಂದು ಹಣ್ಣು
ಎತ್ತಿ ಕೊಡುವಂತೆ ಮುತ್ತು.

About The Author

ಡಾ. ನಾ. ಮೊಗಸಾಲೆ

ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ