ಚಿವಾಯ್ಲಾಫ಼್ ಅವರ ಅನೇಕ ಕವಿತೆಗಳು ಆ ಭೂಮಿಯಲ್ಲಿ ರೂಪಕಾತ್ಮಕವಾಗಿ ವಾಸಿಸುವ ತುರ್ತು ಬಯಕೆಗೆ ಸಾಕ್ಷಿಯಾಗಿವೆ. ಅವರ ಬುಡಕಟ್ಟಿನ ಪೂರ್ವಜರ ಮರೆತುಹೋದ ಅಥವಾ ನಿಗ್ರಹಿಸಲ್ಪಟ್ಟ ಉಪಸ್ಥಿತಿಯನ್ನು ಮಾತ್ರವಲ್ಲದೆ, ‘ಮಾಪುಚೆ’ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಮತ್ತು ಸಾಂಪ್ರದಾಯಿಕ ಮಾಪುಚೆ ಭೂಮಿಯಲ್ಲಿ ಕೈಗಾರಿಕಾ ಯೋಜನೆಗಳಿಂದ ಹೆಚ್ಚಾಗಿ ಬೆದರಿಕೆಗೆ ಒಳಗಾಗುವ ಪ್ರಕೃತಿಯ ಧ್ವನಿಯನ್ನು ಸಹ ಅವರು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚಿಲೆ (Chile) ದೇಶದ ಮಾಪುಚೆ ಬುಡಕಟ್ಟಿಗೆ ಸೇರಿದ ಮಾಪುಜುಗುನ್ (Mapuzugun) ಭಾಷಾ ಕವಿ ಎಲಿಕುರಾ ಚಿವಾಯ್ಲಾಫ಼್–ರವರ (Elicura Chihuailaf, 1953) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಎಲಿಕುರಾ ಚಿವಾಯ್ಲಾಫ಼್ ಅವರು (Elicura Chihuailaf) 1953-ರಲ್ಲಿ ಚಿಲೆ (Chile) ದೇಶದ ‘ಕೌತೀನ್’ (Cautín) ಪ್ರಾಂತ್ಯದ ‘ಕ್ವೆಚುರೆವೆ’ (Quechurewe) ಸ್ಥಳೀಯ ಸಮುದಾಯದಲ್ಲಿ ಜನಿಸಿದರು. ಒಬ್ಬ ಪ್ರಸಿದ್ಧ ‘ಮಾಪುಚೆ’ (Mapuche) ಕವಿಯಾದ ಚಿವಾಯ್ಲಾಫ಼್ ಅವರು ಆ ಬುಡಕಟ್ಟಿನ ಮುಖ್ಯಸ್ಥರ ಮೊಮ್ಮಗ. ಗ್ರಾಮೀಣ ಸ್ಥಳೀಯ ಪರಿಸರದಲ್ಲಿ ಬೆಳೆದ ಅನುಭವ ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಅವರ ದ್ವಿಭಾಷಾ ಬರವಣಿಗೆಯ ಮೂಲಕ (ಸ್ಪ್ಯಾನಿಷ್ ಮತ್ತು ಮಾಪುಜುಗುನ್-ನಲ್ಲಿ [Mapuzugun]), ಚಿವಾಯ್ಲಾಫ಼್ ತಮ್ಮ ಜನರ ಸ್ಥಳೀಯ ಸಂಸ್ಕೃತಿಯನ್ನು ಕಾಪಾಡುತ್ತಾರೆ, ಪುನರ್ ಪರಿಶೀಲಿಸುತ್ತಾರೆ, ಮತ್ತು ಪ್ರಸಾರ ಮಾಡುತ್ತಾರೆ.
ಚಿವಾಯ್ಲಾಫ಼್ ಅವರ ಅನೇಕ ಕವಿತೆಗಳು ಆ ಭೂಮಿಯಲ್ಲಿ ರೂಪಕಾತ್ಮಕವಾಗಿ ವಾಸಿಸುವ ತುರ್ತು ಬಯಕೆಗೆ ಸಾಕ್ಷಿಯಾಗಿವೆ. ಅವರ ಬುಡಕಟ್ಟಿನ ಪೂರ್ವಜರ ಮರೆತುಹೋದ ಅಥವಾ ನಿಗ್ರಹಿಸಲ್ಪಟ್ಟ ಉಪಸ್ಥಿತಿಯನ್ನು ಮಾತ್ರವಲ್ಲದೆ, ‘ಮಾಪುಚೆ’ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಮತ್ತು ಸಾಂಪ್ರದಾಯಿಕ ಮಾಪುಚೆ ಭೂಮಿಯಲ್ಲಿ ಕೈಗಾರಿಕಾ ಯೋಜನೆಗಳಿಂದ ಹೆಚ್ಚಾಗಿ ಬೆದರಿಕೆಗೆ ಒಳಗಾಗುವ ಪ್ರಕೃತಿಯ ಧ್ವನಿಯನ್ನು ಸಹ ಅವರು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ.
ಚಿವಾಯ್ಲಾಫ಼್ ಅವರ ಕಾವ್ಯದಲ್ಲಿ ಕಂಡುಬರುವ ಇತರ ಮಾಪುಚೆ ಸಾಂಸ್ಕೃತಿಕ ಸಂಪ್ರದಾಯಗಳೆಂದರೆ ಮೌಖಿಕತೆ (orality), ಹಿರಿಯರ ವಿವೇಕ ಹಾಗೂ ಲೋಕಜ್ಞಾನವನ್ನು ಗೌರವಿಸುವುದು, ಮತ್ತು, ಮನುಷ್ಯರಲ್ಲದವರು ಮತ್ತು ಮನುಷ್ಯರಿಗಿಂತ ಮೇಲಾಗಿರುವವರಿಗೆ ನೀಡಲಾಗುವ ಮೌಲ್ಯದಿಂದ ಒತ್ತಿಹೇಳಲಾಗುವ ಪ್ರಕೃತಿಯೊಂದಿಗೆ ಕಲ್ಪನೆಯ ನಿಕಟ ಸಂಬಂಧವನ್ನು ಬೆಳೆಸುವುದು.

Recado Confidencial a los Chilenos ಎಂಬ ತಮ್ಮ ಪುಸ್ತಕದಲ್ಲಿ, ಅವರು ರಾತ್ರಿಯಲ್ಲಿ ಬೆಂಕಿಯ ಸುತ್ತ ಕೂತು ಕಳೆದ ಬಾಲ್ಯದ ಬಗ್ಗೆ ಮಾತನಾಡುತ್ತಾರೆ, ಅದರಲ್ಲಿ ಅವರು ಸಂಭಾಷಣೆಯ ಕಲೆಯನ್ನು (nvtram) ಮತ್ತು ಹಿರಿಯರ ಸಲಹೆಯನ್ನು (gulam) ಕಲಿತರು. ಅದೇ ರೀತಿ, ಪ್ರಕೃತಿಯು ತನ್ನ ವೈವಿಧ್ಯತೆಯಿಂದ ಅವರಿಗೆ ಲೋಕಚೈತನ್ಯವನ್ನು ಕಲಿಸಿತು. ಅವರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವ್ಯಕ್ತಪಡಿಸುವ ಈ ಅಗತ್ಯವು, ಸ್ವತಃ ವೈವಿಧ್ಯಮಯವಾಗಿದ್ದು, ಅವರನ್ನು ಒಬ್ಬ Oralitor-ಆಗಿ ಮಾಡಿತು, ಅಂದರೆ, ಮಾಪುಚೆ ಹಿರಿಯರ ಮೌಖಿಕ ಅಭಿವ್ಯಕ್ತಿಯ ವಾಹಕ.
“ಒಬ್ಬ ಮನುಷ್ಯ, ಒಂದು ಜೀವಂತ ಪ್ರಾಣಿ, ಮತ್ತು ನಿರ್ಜೀವ ವಸ್ತುವಾದ ಒಂದು ಕಲ್ಲು – ಎಲ್ಲವೂ ಒಂದು ನೆಲೆಗೆ ಸೇರಿದ್ದು ಮತ್ತು ಒಂದು ngen-ನ್ನು, ಒಂದು ಚೈತನ್ಯವನ್ನು ಹೊಂದಿರುವುದು. ಈ ngen ಸಹ ಮಾನವನಂತೆಯೇ ಒಂದೇ ನೆಲೆಗೆ ಸೇರಿದ್ದು, ಮತ್ತು ಅವರಿಬ್ಬರೂ ಅದನ್ನು ಹಂಚಿಕೊಳ್ಳುವುದರಿಂದ ಪರಸ್ಪರ ವಿನಿಮಯದ, ಪರಸ್ಪರ ಅವಲಂಬನೆಯ ಸಂಬಂಧವಿದೆ. ಅದ್ದರಿಂದ ಇದು ಹೊರಗಿಡುವಿಕೆ ಮತ್ತು ವಿಘಟನೆ ಇಲ್ಲದೆ ಸಂಪೂರ್ಣತೆಯ ಪ್ರತೀಕವಾಗಿದೆ,” ಎಂದು ಚಿವಾಯ್ಲಾಫ಼್ ಒಂದು ಕಡೆ ಹೇಳುತ್ತಾರೆ.
ಚಿವಾಯ್ಲಾಫ಼್ ಅವರು ಪಾಬ್ಲೋ ನೆರುಡಾ ಅವರಂತಹ ಇತರ ಕವಿಗಳ ಕೃತಿಗಳನ್ನು ಮಾಪುಜುಗುನ್ ಭಾಷೆಗೆ ಅನುವಾದಿಸಿದ್ದಾರೆ. ಅವರ ಪ್ರಕಟಿತ ಕೃತಿಗಳಲ್ಲಿ En el país de la memoria (1988), El invierno, su imagen y otros poemas azules (1991), and De sueños azules y contrasueños (1995), Recado confidencial a los chilenos (1999), Kallfv (2006), A orillas de un sueño azul (2010), La vida es una nube azul(2019), ಹಾಗೂ El azul del tiempo que nos sueña (2020) ಸೇರಿವೆ. 2020-ರಲ್ಲಿ ಅವರಿಗೆ ಚಿಲಿಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ ಈ ಗೌರವವನ್ನು ಪಡೆದ ಮೊದಲ ಮಾಪುಚೆ ಸಾಹಿತಿಯೆಂಬ ಕೀರ್ತಿ ಪಡೆದದರು. ಈ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪ್ರತಿಷ್ಟಿತ ಸನ್ಮಾನಗಳು ಹಾಗೂ ಗೌರವಗಳನ್ನು ಪಡೆದ ಚಿವಾಯ್ಲಾಫ಼್ ಅವರನ್ನು ಇಂದಿನ ಮಾಪುಚೆ ಕಾವ್ಯದ ‘ಲೋಂಕೊ’ (lonco) ಅಥವಾ ಮುಖ್ಯಸ್ಥ ಎಂದು ಕರೆಯಲಾಗಿದೆ.

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಎಲಿಕುರಾ ಚಿವಾಯ್ಲಾಫ಼್-ರವರ ಏಳು ಕವನಗಳಲ್ಲಿ ಮೊದಲ ಕವನವನ್ನು ಜಾನ್ ಬಿಯರ್ಹೊರ್ಸ್ಟ್ (John Bierhorst), ಮುಂದಿನ ಎರಡು ಕವನಗಳನ್ನು ಕ್ಯಾಮಿಲಾ ಐವರ್ (Camila Yver), ಹಾಗೂ ನಂತರದ ನಾಲ್ಕು ಕವನಗಳನ್ನು ಆರ್ಥರ್ ಮಾಲ್ಕಮ್ ಡಿಕ್ಸನ್ (Arthur Malcolm Dixon) ಅವರು ಚಿವಾಯ್ಲಾಫ಼್ ಅವರೇ ಮೂಲ ಮಾಪುಜುಗುನ್ ಭಾಷೆಯಿಂದ ಸ್ಪ್ಯಾನಿಷ್ ಭಾಷೆಗೆ ಮಾಡಿದ ಅನುವಾದಗಳಿಂದ ಇಂಗ್ಲಿಷಿಗೆ ಅನುವಾದಿಸಿರುವರು.
* ‘ಕಾನೇಲೊ’ ಅಥವಾ ‘ಫೊಯೆ’ (Foye) ಎಂಬುದು ಮಾಪುಚೆ (Mapuche) ಬುಡಕಟ್ಟು ಜನಾಂಗದವರ ಪವಿತ್ರ ಮರ. ಈ ಮರವನ್ನು ಅವರು ‘ಒಳಿತು,’ ‘ಶಾಂತಿ’ ಮತ್ತು ‘ನ್ಯಾಯ’-ದ ಪರಿಕಲ್ಪನೆಗಳೊಂದಿಗೆ ಜೋಡಿಸುತ್ತಾರೆ. ಇದನ್ನು ಹೆಚ್ಚಾಗಿ ವಿಶೇಷ ಕೂಟಗಳಲ್ಲಿ ನೆಡಲಾಗುತ್ತದೆ. ಕಾನೇಲೊ ಮರ ಚಿಲಿ ಮತ್ತು ಆರ್ಜೆಂಟೀನಾದ ಮೆಗೆಲ್ಲಾನಿಕ್ ಮತ್ತು ವಾಲ್ಡಿವಿಯನ್ ಸಮಶೀತೋಷ್ಣ ಕಾಡುಗಳಿಗೆ (Magellanic and Valdivian temperate forests) ಸ್ಥಳೀಯವಾಗಿದ್ದು, ಅಲ್ಲಿನ ಕರಾವಳಿಯ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮುಖ್ಯ ಮರವಾಗಿದೆ. ಮಾಪುಚೆ ಜನಾಂಗದವರ ಸ್ಥಳೀಯ ಧರ್ಮದ ಪುರೋಹಿತರನ್ನು ‘ಫೊಯೆವೆಯ್’ ಅಥವಾ ‘ಬೊಕ್ವಿಬುಯೆ,’ (foyeweye or boquibuye) ಅಂದರೆ “ಫೊಯೆ ಮರದ ಸೇವಕ” ಎಂದು ಕರೆಯಲಾಗುತ್ತದೆ.
* ‘ಗೆನೆಚೆನ್’ – ಮಾಪುಚೆ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಧರ್ಮದ ಬಹು ಮುಖ್ಯ ‘ನ್ಗೆನ್’ (Ngen) ದೈವ, ಹಾಗೂ ಮಾಪುಚೆ ಜನರ ಈಗಿನ ನಂಬಿಕೆಗಳ ಪ್ರಮುಖ ದೇವತೆ. ಮೂಲತಃ ‘ಗೆನೆಚೆನ್’ ಮಾಪುಚೆ ಜನರ ಒಂದು ‘ನ್ಗೆನ್ ದೈವ’ ಮಾತ್ರವಾಗಿದ್ದು, ಅವರ ಸೃಷ್ಟಿಕರ್ತ ದೇವರಾಗಿರಲಿಲ್ಲ. ಆದರೆ ನಂತರ ಬಂದ ಕ್ಯಾಥಲಿಕ್ ಧರ್ಮದ ಜತೆಗಿನ ಸಂಕರದ ಫಲವಾಗಿ ಹಾಗೂ ‘ಅಬ್ರಹಾಮಿಕ್’ ಧರ್ಮಗಳ ಏಕದೇವತಾವಾದಿ ನಂಬಿಕೆಗಳಂತೆ ‘ಗೆನೆಚೆನ್’ ಈಗ ಮಾಪುಚೆ ಜನರ ‘ಸರ್ವೋಚ್ಚ ದೇವರು’ ಸಹ ಆಗಿದ್ದಾರೆ.
* ‘ಕೂಲ್ಟ್ರೂನ್’ (Cultrun) – ಮಾಪುಚೆ ಜನಾಂದವರ ಸಾಂಪ್ರಾಯಿಕ ಆಚರಣೆಗಳಲ್ಲಿ ಬಳಸುವ ಒಂದು ದುಡಿ, ಹಾಗೂ ಮಾಪುಚೆ ಸಂಸ್ಕೃತಿಯ ಅತ್ಯಂತ ಪ್ರಮುಖ ಸಂಗೀತ ವಾದ್ಯ. ಇದನ್ನು ಮಾಪುಚೆ ಜನರ ‘ಮಾಚಿ’-ಯವರು (machi – ವೈದ್ಯರು ಅಥವಾ ಮಾಂತ್ರಿಕರು) ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗಾಗಿ ಬಳಸುತ್ತಾರೆ. ಈ ದುಡಿಗೆ ಸರಿಸುಮಾರು 35 ರಿಂದ 40 ಸೆಂಟಿಮೀಟರ್ ವ್ಯಾಸವಿದ್ದು, 12 ರಿಂದ 15 ಸೆಂಟಿಮೀಟರ್-ರಷ್ಟು ಉದ್ದವಾಗಿರುತ್ತೆ.
* ಮಾಪುಚೆ ಭಾಷೆಯಲ್ಲಿ, ‘ವಿಂಕಾ’ ಎಂದರೆ ‘ವಿದೇಶಿ,’ ‘ಆಕ್ರಮಣಕಾರ,’ ಅಥವಾ ‘ವಸಾಹತುಶಾಹಿ’ ಎಂದರ್ಥ, ಮತ್ತು ಸ್ಥಳೀಯ ಮಾಪುಚೆಯವರು ಈ ಪದವನ್ನು ಮಾಪುಚೆ ಅಲ್ಲದ, ಬಿಳಿ ಚಿಲಿಯರು ಮತ್ತು ಅರ್ಜೆಂಟೀನಾದವರನ್ನು ಉಲ್ಲೇಖಿಸಲು ಬಳಸುತ್ತಾರೆ. ಈ ಪದ ‘ಇನ್ಕಾ’ (Inca) ಆಕ್ರಮಣಕಾರರನ್ನು ಹಾಗೂ ನಂತರ ಇವರನ್ನು ತಮ್ಮ ವಶಕ್ಕೆ ತೆಗೆದುಕೊಂಡ ಹೊಸ ಸ್ಪ್ಯಾನಿಷ್ ಆಕ್ರಮಣಕಾರರನ್ನು ಉಲ್ಲೇಖಿಸುತ್ತದೆ.

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ. ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ ‘ಬಾಲ್ಟಿಕ್ ಕಡಲ ಗಾಳಿ’ ಇತ್ತೀಚೆಗೆ ಪ್ರಕಟವಾಗಿದೆ.
