Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಅವಳು ಮತ್ತು ಅವನು

ರಾತ್ರಿಯ ನಿರನಿರ ನೀರವತೆಯಲ್ಲಿ
ಅವಳು ಅವನನ್ನು ಕಾಣುತ್ತಾಳೆ
ಕಾಣುವಿಕೆ ಪರಿಶೀಲನೆಯಾಗಿ
ಪರಿಶೀಲನೆಯೇ ದರ್ಶನವಾಗಿ ಮಾರ್ಪಡುತ್ತದೆ

ಹೊಳಪಿದ್ದರೂ ಶಾಂತವಾಗಿರುವ
ಅವನ ಸಂಪರ್ಕದಲ್ಲಿ
ಅವಳೂ ಶಾಂತಳಾಗುತ್ತಾಳೆ
ಇಬ್ಬರ ದೃಷ್ಟಿಮಿಲನ ನಿಲ್ಲುವುದೇ ಇಲ್ಲ

ಅವನ ಲೌಕಿಕತೆಗಿಂತಲೂ
ಅಲೌಕಿಕತೆಯೆ ಅವಳ ಸೊತ್ತಾಗಿ, ಸೊಗಸಾಗಿ
ಅವಳ ನಿಟ್ಟುಸಿರಿನ ಮುಕ್ತತೆಗೆ
ರಹದಾರಿಯನ್ನು ಒದಗಿಸಿಕೊಡುತ್ತದೆ

ಸೌಂದರ್ಯ ಎಲ್ಲಿದೆ
ಎಂದವಳು ಪ್ರಶ್ನಿಸಿಕೊಳ್ಳುತ್ತಾಳೆ
ಅವನ ನಿಗೂಢತೆಯಲ್ಲೋ?
ತನ್ನ ವಿಶಾಲತೆಯಲ್ಲೋ?
ಕಾಲಾತೀತವಾದ ಸಮ್ಮಿಲನದಲ್ಲೋ?
ಉತ್ತರವಂತೂ ಅವಳಿಗೆ ಹೊಳೆಯುವುದೇ ಇಲ್ಲ

ಹಿನ್ನೆಲೆಯ ಕತ್ತಲೆಯೇ ರಂಗಪರದೆಯಾಗಿ
ಅವನ ವೈಭವವನ್ನು ಇಮ್ಮಡಿಯಾಗಿಸುತ್ತದೆ
ರಾತ್ರಿಯ ವಿಸ್ತಾರದಲ್ಲಿ ಕಂಡ
ಭರವಸೆಯ ಬೆಳಕು
ಸಾಂತ್ವನದ ಅಪ್ಪುಗೆಯಂತೆ
ಗೋಚರವಾಗುತ್ತದೆ ಅವಳಿಗೆ
ಜೀವನದ ಜಟಿಲತೆಯನ್ನು ಮೀರುವ
ಪರಮರಹಸ್ಯವನ್ನು ಕಂಡುಕೊಳ್ಳುತ್ತಾಳವಳು
ಮೈ ಮನಸ್ಸು ತಂಪಗಾದ ಆ ರಾತ್ರಿಯಲ್ಲಿ

ಕಳೆಯುತ್ತಲೇ ಇದೆ ಕತ್ತಲು
ಅವನಿಗೆ ಎಳೆತನವನ್ನು ದಯಪಾಲಿಸುತ್ತಾ
ಅವಳ ಆತ್ಮದೊಳಗಿನ ಅಂಧಕಾರವ ಇನ್ನಿಲ್ಲವಾಗಿಸುತ್ತಾ
ಮುಕ್ತತೆ- ಜೀವಂತಿಕೆಗಳನ್ನು ಒದಗಿಸಿಕೊಡುತ್ತಾ
ಕಳೆದುಹೋಗುತ್ತಲೇ ಇದೆ ಕತ್ತಲು…

ತನ್ನವನಿಗೆ ಸಾವಿಲ್ಲ ಎಂಬ
ಅವಳ ಗಾಢ ನಂಬಿಕೆ
ಹೊತ್ತು ಕಳೆದಂತೆಲ್ಲಾ ಸುಳ್ಳಾಗಿ
ಹೊತ್ತು ಏರಿದಂತೆ ಮತ್ತೆ ನಿಜವಾಗಿ
ಹುಟ್ಟುತ್ತದೆ…ಸಾಯುತ್ತದೆ…
ಆ ನಂಬಿಕೆಯ ಹುಟ್ಟು ಸಾವು
ಕೊನೆಗಾಣುವುದೇ ಇಲ್ಲ

ಭೂಮಿಯೊಂದಿಗಿನ ಚಂದ್ರನ ಮಿಲನ
ಅಂತ್ಯ ಕಾಣುವುದೇ ಇಲ್ಲ

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ