Advertisement
ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ದಿನದ ಕವಿತೆ: ಮೆಜೆಸ್ಟಿಕ್ ಮೇನಕೆಯರು

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ದಿನದ ಕವಿತೆ: ಮೆಜೆಸ್ಟಿಕ್ ಮೇನಕೆಯರು

ಮೆಜೆಸ್ಟಿಕ್ ಮೇನಕೆಯರು

ತೀಡಿಕೊಳ್ಳುತ್ತಾರವರು ಘಳಿಗೆಗೊಮ್ಮೆ
ಬಾಯಿಬಿಟ್ಟ ವ್ಯಾನಿಟಿ ಬ್ಯಾಗಿನಿಂದ
ತೆಗೆದ ಪುಟ್ಟ ಕನ್ನಡಿಯಲ್ಲಿ
ಸೀಳುದುಟಿ ಕಾಣದಂತೆ

ಹಸಿವೆಗೆ ಕಚ್ಚಿದವನ
ಹಸಿವಾದರೂ ತೀರೀತೆ?
ನೋವಿನಲ್ಲಿ ಕೊನೆಗಾಣುವ ಸುಖ ;
ಸುಖದಗುಂಟ ಹರಿವ ಫಲಿತದ ನೋವು
ಅವಳಿ ಜವಳಿಗಳೆ?
ಸಣ್ಣ ಗಾಯದ ನೋವಿನ ಉರಿಗೆ
ಮೆತ್ತಿದಷ್ಟು ಲಿಪ್‌ಸ್ಟೀಕಿನ ಮುಲಾಮು
ಬಣ್ಣಕೆ ಗುಣವಾಗಿಸುವ ಕಲೆ ಎಲ್ಲಿದೆ?

ಕಂಡೀತೆಷ್ಟು ಬಿಂಬ ಸಂಜೆಗತ್ತಲೆಯಲಿ
ಆದರೂ ತಾನು ಸುಂದರಿಯೆ!
ಸ್ವಗತಕ್ಕೊಂದು ಕಾಮಾs..
ಹುಸಿನಗು ಸುರಿದು
ಹುಡುಕುತ್ತವೆ ಕಣ್ಣುಗಳು
ಹೊಸ ಗಿರಾಕಿಯ ಕಡೆಗೆ

ಕಸಿವಿಸಿಗೊಳ್ಳುತ್ತಾಳವಳು
ಇನ್ನೂ ಸಿಕ್ಕದ ಆ ಭೇಟಿಗೆ
ಕಳೆದುಕೊಂಡಂತೆ ತನ್ನನೇ!
ಎತ್ತಿ ಕಟ್ಟುತ್ತಾಳೆ ಎದೆಯ
ಹೊಸ ತಂತ್ರ ಹೂಡಿದಂತೆ!
ಕಣ್ಕುಕ್ಕುವಂತೆ
ಜಾರಿಸುತ್ತಾಳೊಮ್ಮೊಮ್ಮೆ

ಕಂಗಾಲಾಗುತ್ತಾಳೆ ನೆರಿಗೆಗಳ ಕಂಡರೆ
ವಯಸ್ಸಾಯಿತೇನೊ ತಳಮಳ‌..
ತಾನೀಗ ರೇಟು ಕುದುರಿದ ಮಾಲು
ಸುಖದ ನಡಿಗೆಯೂ ಇಲ್ಲಿ
ತಾಳ ತಪ್ಪಿದಂತೆ ಜೋಲು
ಅಸಲಿಗೆ ಡೇಟ್ ಆಫೇ ಆದ ಭರ್ತಿಗೆ
ಎಣಿಕೆ ಎಷ್ಟೊಂದು ಸಲೀಸು
ಗಹಗಹಿಸಿ ನಗುತ್ತಾಳೆ ಅವಳು
ನೆರಿಗೆಗೆ,
ಹುಟ್ಟಿಗೆ,
ಲೆಕ್ಕಕ್ಕೆ,
ಮತ್ತೂ
ಹುಟ್ಟಿಸಿದವರೆಂಬ
ಜೀವಗಳಿಗೆ..

ಬದಲಾಯಿಸುತ್ತಾಳೆ ಅವಳು
ಮೂರ್ನಾಲ್ಕು ಭಾಷೆಗಳ ಆಗಿಂದಾಗ್ಗೆ
ಬಲ್ಲವಳಂತೆ ಭಾವದಲಿ ಬಳುಕಿ
ಕೊನೆಗೊಂದು ಕಣ್ಣ ಸನ್ನೆ ಗೆಲ್ಲುತ್ತದೆ
ಎಲ್ಲ ಭಾಷೆಗಳ ಹಿಂದಿಕ್ಕಿ

ಕುಶಲದ ನಗುವಿಲ್ಲದಿದ್ದರೂ
ಆಗಂತುಕನಿಗೆ ರೇಟಿನದೆ ಚಿಂತೆ
ಎಷ್ಟು? ಎಷ್ಟು?
ಬೆರಳಂಕಿಯಲ್ಲೆ ಮಡಚಿ
ಅನುವಾದಿಸಿದ ಸಂಖ್ಯೆ
ಎಂದೂ ನಿಕ್ಕಿಯಾಗುವುದೇ ಇಲ್ಲ
ಅದರಲ್ಲೆರಡು ಸೋತರೆ ಮಾತ್ರ ಗೆದ್ದಂತೆ

ಬದಲಿಸಿಕೊಳ್ಳುತ್ತಾಳೆ ಮಾಮೂಲಿಯಂತೆ
ಗಿರಾಕಿಗೊಮ್ಮೆ ತನ್ನ ಹೆಸರು
ಅಥವಾ
ನಡೆಯುತ್ತಾಳೆ
ಅವರೇ ಕರೆದ ಹೆಸರನುಟ್ಟು
ಹೊಂದಿಕೊಳ್ಳುವುದೆ ಆಕೆಯ ನಿಟ್ಟುಸಿರು
ಶುರುವಿನಿಂದ ಶುಭಂವರೆಗೂ

ಮಲಗಿಬಿಡುತ್ತದೆ ಕ್ಷಣ ಕಾಲದಲ್ಲೆ
ಹಸಿದ ಆರ್ಭಟದ ಆಹಾಃಕಾರ
ಪಡೆದೆನೆಂಬ ಹುಕಿ ಮರೆತು
ಥೇಟ್ ಮಗುವಿನಂತೆಯೇ !

ಮುದ್ದಿಸಲನುವಾಗುತ್ತಾಳವಳು ಆಗ
ನಿತ್ಯ ಹಡೆವ ಆ ಕ್ಷಣದ ಮುಗ್ಧತೆಗೆ
ಶಾಂತ ಸ್ವರೂಪಿ ಬಿಕ್ಕಳಿಕೆಗೆ
ಗಂಡೆಂಬ ಅಂಹಕಾರವ ಬೆತ್ತಲೆ ಮಲಗಿಸಿ
ಎಣಿಸುತ್ತಾಳೆ ಉಂಟೆಷ್ಟು ಹೆಣ್ಣಿಗೆ?

ಕಾಸು ಕೊಟ್ಟ ಆಗಂತುಕರಿಗೆ
ಅವರು ಕೊನೆಗೂ ದಕ್ಕುವುದೇ ಇಲ್ಲ!
ಅರ್ಥವಂತೂ ಬಲುದೂರ..

About The Author

ರಟ್ಟೀಹಳ್ಳಿ ರಾಘವಾಂಕುರ

ರಟ್ಟೀಹಳ್ಳಿ ರಾಘವಾಂಕುರ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಗ್ರಾಮದವರು. ಸಧ್ಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ  ಅಧ್ಯಯನ. ಪ್ಲಾಟ್ ಫಾರಂ ನಂ 3(ಕಿರುಕಾದಂಬರಿ) ಹಾಗೂ ಹಿಂಗಂದ್ರ ಹ್ಯಾಂಗ(ಕವನ ಸಂಕಲನ) ಪ್ರಕಟಿತ ಕೃತಿಗಳು. ಫೋಟೋಗ್ರಫಿ, ಸಾಹಿತ್ಯ, ಸಿನಿಮಾ, ಮುಖಪುಟ ವಿನ್ಯಾಸ ಆಸಕ್ತಿ ಕ್ಷೇತ್ರಗಳು.

7 Comments

  1. ಡಾ. ಚಾಮರಾಜ

    ಕೊನೆಗೊಂದು ಕಣ್ಣು ಸನ್ನೆ ಗೆಲ್ಲುತ್ತದೆ
    ಎಲ್ಲ ಭಾಷೆಗಳ ಹಿಂದಿಕ್ಕಿ

    ಭಾವನೆಗಳೇ ಭಾಷೆ …..

    ಅತ್ಯುತ್ತಮ ಕವನ, ಉತ್ತಮ ಶೀರ್ಷಿಕೆ ????

    Reply
  2. Vijaya

    ಮದುವೆ ಆಗಿ ಹೊಸದಾಗ ಮನೆಯವರ ಜೊತೆ ಹೋಗಿದ್ದೆ, ರಾತ್ರಿ ಬೆಂಗಳೂರ ನೋಡಬೇಕು ಅನ್ನೋ ನನ್ನ ಹುಚ್ಚು ಬಯಕೆಗೆ ಮನೆಯವರು ಬೇಡಾ ಅಂದರೂ ಮೆಜೆಸ್ಟಿಕ್ ನೋಡಬೇಕು ಎಂಬ ಹುಚ್ಚುತನಕ್ಕೆ ಹೊರಬಿದ್ದಾಗ ಕಂಡದ್ದು ಈ ಮೇನಕೆಯರೆ, ಅಲ್ಲಿಯವರೆಗೂ ಬರಿಯ ಸಿನೆಮಾದಲ್ಲಿ ಮಾತ್ರ ಈ ರೀತೀ ಸನ್ನಿವೇಶ ನೋಡಿದ ನನಗೆ ಅವರನ್ನು ನೋಡಿ ಅಚ್ಚರಿ ಆಗಿತ್ತು… ದಾವಣಿ ಮೈ ತುಂಬ ಹೊದ್ದುಕೊಂಡು ಮನೆಯವರನ್ನು ಗಟ್ಟಿಯಾಗಿ ಹಿಡಿದುಕೊಂಡು ನಡೀರೀ ಹೋಗೋಣು ಎಂದಿದ್ದೆ… ಇದು ೨೦೦೦ ರ ವಿಷಯ ನಾನು ಹೇಳಿದ್ದು..

    Reply
  3. Nren

    Ditta, sundara kavithe!

    Reply
  4. ಚಂದ್ರಮತಿ ಸೋಂದಾ

    ಹೊಟ್ಟೆ ಹಸಿವಿಗೆ ಅದೆಷ್ಟು ಆಹುತಿಗಳೋ ಲೆಕ್ಕವಿಟ್ಟವರಾರು?

    Reply
  5. Mohana Kuntar

    ಮೆಜೆಸ್ಟಿಕ್ ಮೇನಕೆಯರ ಬದುಕಿನ ಧ್ವನಿಪೂರ್ಣ ಚಿತ್ರಣ. ಧನ್ಯವಾದ ಗಳು. ಮೋಹನ ಕುಂಟಾರ್

    Reply
  6. Sunanda Kadame

    ನಡೆಯುತ್ತಾಳೆ
    ಅವಳೇ ಕರೆದ ಹೆಸರನುಟ್ಟು..
    ವಾಸ್ತವ ಚಿತ್ರಣ ಗಾಢವಾದ ವಿಷಾದ ಭಾವವನ್ನು ಮಡುಗಟ್ಟಿಸುತ್ತದೆ ರಾಘವಾಂಕುರ..

    Reply
  7. Gururaj benni

    Realistic lines…

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ