Advertisement
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಅರ್ಧ ಬರೆದಿಟ್ಟ ಕವನ

ಅರ್ಧ ಕವನ ಬರೆದಿಟ್ಟ ನಾನು
ಇನ್ನರ್ಧ ಕವನ ಬರೆಯುವ
ಉಮೇದು ಕಡ ತರಲೆಂದು
ಊರು ಸುತ್ತಲು ಹೊರಟೆ

ನಾ ಬರೆದಿಟ್ಟ ಅರ್ಧ ಕವನದ
ಅಕ್ಷರ-ಪದ-ಸಾಲುಗಳೆಲ್ಲಾ
ಸಾಲುಸಾಲಾಗಿ ನನ್ನ ಬೆನ್ನಹಿಂದೆ ಹೊರಟು
ನನ್ನನ್ನೂ ಮೀರಿ ಮುನ್ನಡೆಯುತ್ತಾ
ಜನಸ್ತೋಮದ ಮುಂದೆ
ಕವಾಯತು ನಡೆಸತೊಡಗಿದವು
ಮುಂದಿನ ಅರೆತಾಸು ನಾನು ಮೌನಿ
ನನ್ನ ಅರ್ಧ ಕವಿತೆಯದ್ದೇ ಸಲ್ಲಾಪ ಆಲಾಪ

ಮಲ್ಲಿಗೆ ಮಾಲೆಯ ಮೊಳ ಅಳೆಯುತ್ತಾ
ಆಸೆಗಣ್ಣಾದ ಹರೆಯದವಳ ಹಸಿ ಎದೆಯಲ್ಲಿ
ಬಿಸಿಗನಸು ಮೂಡಿಸಿತು-
ಮತ ಪಂಥಗಳ ಬಿಸಿಯುಸಿರಲ್ಲಿ ಬೆಂದು
ಬಿಸಿನೆತ್ತಿಯಾದವನಲ್ಲಿ ತುಸು ಚಣಗಳ
ಶಾಂತತೆ ಹುಟ್ಟುಹಾಕಿತು-
ರಾವಣನೆದೆಯಲ್ಲಿ ರಾಮನನ್ನು ಸೃಜಿಸಿತು-
ದುರ್ಯೋಧನನ ಭಾವಭಿತ್ತಿಯಲಿ
ಧರ್ಮರಾಯನನ್ನು ನೆಲೆಗೊಳಿಸಿತು-
ನನ್ನ ಅರ್ಧ ಕವಿತೆ

ಬೆವರ ಹನಿಗಳಿಂದ ಮಣ್ಣ ತೇವಗೊಳಿಸಿದವರ
ಕಾಳಪಂಜರದೊಳಗೆ ಶತಶತಮಾನಗಳಿಂದ ಬಂಧಿಯಾದವರ
ತುತ್ತು ಅನ್ನಕ್ಕಾಗಿ ರಕ್ತ ಹರಿಸಿದವರ
ಕ್ಯಾಲೆಂಡರ್‌ನಲ್ಲಿ ಮಾತ್ರವೇ ಸ್ವಾತಂತ್ರ್ಯದಿನ ನೋಡಿದವರ
ಪಾಲಿನ ನಿರಾಳತೆಯ ಉಸಿರಾಯಿತು
ನನ್ನ ಅರ್ಧ ಕವಿತೆ

ಜನತೆಯ ಎದೆಯೊಳಗೆ ಹೂತ
ನನ್ನ ಅರ್ಧ ಕವಿತೆ
ಅವರ ಮೊಗದ ನಗುವಾಗಿ
ಮನದ ತೊಟ್ಟಿಲೊಳಗಿನ ಮಗುವಾಗಿ
ಕೊಂಡಾಟವಾಡತೊಡಗಿತ್ತು

ನನ್ನ ಅರ್ಧ ಕವಿತೆಯೀಗ ಸಂಪೂರ್ಣವಾಗಿತ್ತು
ನಾನು ಬರೆಯದೆಯೇ!

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

1 Comment

  1. Jayasrinivasa rao

    Enjoyed reading this poem … I like meta-poems 🌼🙂

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ