Advertisement
ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ

ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ

ಹೊಲಿಗೆಯವ

ತನ್ನ ಹಳೆಯ ಹೊಲಿಗೆ ಯಂತ್ರದಲ್ಲೇ
ಹೊಸ ಹೊಸ ಪ್ರಯೋಗ ಮಾಡಿ
ಲಂಗ, ಫ್ರಾಕು, ಪೆಟ್ಟಿಕೋಟ್ ಅಂತಾ
ಹೊಲಿಯುವಾಗ, ಏನಾದರೂ
ವಿಶೇಷ ಇರಲಿ ಎಂದು
ಉಳಿದ ಬಟ್ಟೆ ಚೂರಲ್ಲಿ ಗುಲಾಬಿ
ಹೂ ಬಿಡಿಸಿ, ಕೊರಳಪಟ್ಟಿಗೆ ಅಂಟಿಸಿ,
“ಹೇಗಿದೆ?” ಎನ್ನುತ್ತ ಸೂಜಿಯಂಥ
ಕಿರಿಕಣ್ಣುಗಳನ್ನು ಬಿಡುತ್ತಿದ್ದವನು

ಹತ್ತಾರು ಹಳೆಸಿನಿಮಾ ಹಾಡುಗಳ
ತಾನೇ ಸೃಷ್ಟಿಸಿದ ಬೆಳ್ಳಿತೆರೆಯ ಮೇಲೆ
ಕಲ್ಪನೆಯ ನಾಯಕಿಯರ ಜತೆ
ಟೇಪುಗಟ್ಟಲೆ ಯುಗಳಗೀತೆ
ಹಾಡುವ-
ವನಂತೆ, ಅಥವಾ
ಸ್ವರ-ಸಂಯೋಜನೆಯ
ಹಿಕ್ಮತ್ತುಗಳ ಜಾಡು ಹಿಡಿದವನಂತೆ
ಸಿಳ್ಳಿನಲಿ ಶುರು ಮಾಡಿದನೆಂದರೆ-
ಹೊಲಿಗೆ ಯಂತ್ರಕ್ಕೂ, ಅವನ ಸಿಳ್ಳಿಗೂ
ಉಸಿರು ಬಿಡದಂತೆ ಪಕ್ಕವಾದ್ಯ!

ಕಿವಿ ಮೇಲೆ ಪೆನ್ಸಿಲ್
ಬಿಟ್ಟ ಮೇಲೆ, ಕಿವಿಯೊಳಗೆ-
ಯಂತ್ರ-ಗಿಂತ್ರ ಯಾಕೆಂದು
ಬಿಂದಾಸಾದವನು

ಮುಸ್ಸಂಜೆ ಮನೆ ಹೊರಗೆ
ಗದ್ದೆಹಾಳಿಯ ಮೇಲೆ
ಬಿದ್ದುಗಿದ್ದುಬಿಟ್ಟಾನೆಂದು
ಆತಂಕದಿಂದ ಹಿಂದೆ-ಹಿಂದೆಯೇ
ಬೇಡವೆಂದರೂ ಬಂದ
ಮಗನ ಕೈಗೆ,
ಅಂಗಡಿಯಲ್ಲಿ ಕೊಂಡ
ಇನ್ನೊಂದು ಬಿಸಿ ಬೋಂಡದ ಪೊಟ್ಣ ಕೊಟ್ಟು
ಉಫ್ ಎಂದು ಊದುತ್ತ,
ವಾರ್ಧಕ್ಯದ ಊದಿಕೊಂಡ ಕಾಲುಗಳಿಗೆ
ಸವಾಲೊಡ್ಡಿದ್ದವನು

ಬಹು ದಿನಗಳಿಂದ ಕಾಣದೇ
ಬೇಜಾರಾಗಿದೆಯೆಂದು
ಬೆಳಿಗ್ಗೆ-ಬೆಳಿಗ್ಗೆಯೇ ಬಂದು
ಸಂಗೀತ ಹಾಡು-
ಯಾವುದಾದ್ರೂ- ಎಂದು
ಮೈಯೆಲ್ಲ ಕಿವಿಯಾಗಿಸಿಕೊಂಡು
ಹೊಟ್ಟೆತುಂಬ ಹಾಡು ಕುಡಿದವನಂತೆ
ಓಲಾಡಿ ಹೊಂಟವನು

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ