Advertisement
ಸುವರ್ಣ ಚೆಳ್ಳೂರು ಅನುವಾದಿಸಿದ ಕಮಲಾ ಭಾಸಿನ್‌ ಕವಿತೆ

ಸುವರ್ಣ ಚೆಳ್ಳೂರು ಅನುವಾದಿಸಿದ ಕಮಲಾ ಭಾಸಿನ್‌ ಕವಿತೆ

ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು…
(‘Because I am a Girl I must study’ : Kamala Bhasin)

ಅಪ್ಪ ಮಗಳಿಗೆ ಕೇಳಿದ –
ಓದ್ಬೇಕು ? ನೀ ಯಾಕ ಓದ್ತಿ ?
ಹುಡುಗಿ !
ಓದೊಕಂತಾನ ಭಾಳ
ಗಂಡಮಕ್ಕಳದಾರ ನನಗ
ನೀ ಯಾಕ ಓದ್ತಿ ?

ಮಗಳು ಅಪ್ಪನಿಗೆ ಹೇಳಿದಳು –
ನೀ ಇಷ್ಟು ಕೇಳ್ತಿಯಂದ್ರ ಹೇಳ್ತಿನಿ ಕೇಳು,
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ಭಾಳ ಹಿಂದಿನಿಂದ ಹೊಸಕಿ ಹೂತಿರೊ ಅವಕಾಶಗಳಿಗಾಗಿ, ನಾ ಓದ್ಬೇಕು.
ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿ
ಹಾರಿ ಬಿಡಾಕ‌,ನಾ ಓದ್ಬೇಕು.
ಅರಿವು ಹೊಸ ಬೆಳಕಿನ ಸೆಲೆ,
ಅದು ಪಡಿಬೇಕಂದ್ರನಾ ಓದ್ಬೇಕು.
ನಾ ಎದುರಿಸಬೆಕಾದ ಯುದ್ಧಗಳಿಗಾಗಿ
ನಾ ಓದ್ಲೇ ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ಬಡತನ ಕಳಚಾಕ, ನಾ ಓದ್ಬೇಕು.
ಸ್ವಾತಂತ್ರ್ಯ ಗೆಲ್ಲಾಕ, ನಾ ಓದ್ಬೇಕು.
ಒತ್ತಡ ಮೆಟ್ಟಿ ನಿಲ್ಲಾಕ, ನಾ ಓದ್ಬೇಕು.
ಪ್ರೇರಣೆಗಳನ್ನ ಹುಡುಕಾಕ, ನಾ ಓದ್ಬೇಕು

ಹಿಂಸೆಗಳನ್ನ ತುಳಿಯಾಕ, ನಾ ಓದ್ಬೇಕು
ನನ್ನ ಮೌನ ಮುರಿಯಾಕ, ನಾ ಓದ್ಬೇಕು.
ಪುರುಷ ಪ್ರಧಾನತೆ ಮುಂದ ನಿಲ್ಲಾಕ, ನಾ ಓದ್ಬೇಕು.
ಮೇಲು ಕೀಳುಗಳ ಗೆರೆ ಅಳಸಾಕ, ನಾ ಓದ್ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು

ಹೆಸರಿಗಷ್ಟೆ ಇರುವ ‘ನ್ಯಾಯ’ಗಳನ್ನ
ಮತ್ತೆ ರೂಪಿಸಾಕ ನಾ ಓದ್ಬೇಕು.
ನಾ ನಂಬುವಂತ ನಂಬಿಕೆಗಳ
ಅಚ್ಚೊತ್ತಿಸಾಕ, ನಾ ಓದ್ಬೇಕು
ಶತಮಾನಗಳಿಂದ ಹಿಡಿದಿರುವ
ಧೂಳನ್ನ ಗೂಡಿಸಾಕ,ನಾ ಓದ್ಬೇಕು
ಸವಾಲುಗಳನ್ನ ಎದುರುಗೊಳ್ಳಾಕ, ನಾ ಓದ್ಬೇಕು
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.

ತಪ್ಪುಗಳಿಂದ ಸರಿಗಳನ್ನ ತಿಳಿಯಾಕ, ನಾ ಓದ್ಬೇಕು.
ಗಟ್ಟಿಯಾಗಿ ನಿಲ್ಲುವ ಧ್ವನಿಗಳನ್ನ ಹುಡುಕಾಕ,
ನಾ ಓದ್ಬೇಕು.
ಸ್ತ್ರೀಯರ ಹಾಡುಗಳನ್ನ ಬರಿಯಾಕ, ನಾ ಓದ್ಬೇಕು.
ಹುಡುಗಿಯರಿಗೇ ಇರುವ ಲೋಕವನ್ನ ಕಟ್ಟಾಕ,
ನಾ ಓದ್ಬೇಕು.

ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದಲೇ ಬೇಕು.

About The Author

ಸುವರ್ಣ ಚೆಳ್ಳೂರು

ಸುವರ್ಣ ಚೆಳ್ಳೂರು  ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ 'ಕಂಬದ ಹಕ್ಕಿ' ಕಥೆಗೆ  'ಸಂಗಾತ ಕಥಾ ಪುರಸ್ಕಾರ ' (2021), 'ಕನಕಾಂಬರ' ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ 'ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ' ದೊರಕಿದೆ (2022). 'ಕನಕಾಂಬರ' ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts' India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

4 Comments

  1. Mahesh s sankannavar

    ಹೆಣ್ಣು ಯಾಕ ಸಾಲಿ ಕಲಿಬೇಕು ಅಂತ ಅವರಪ್ಪನ ಮುಂದೆ ವಾದಿಸೊ ಪದ್ಯ ಬಾಳ ಇಷ್ಟ ಆತು.ಅಭಿನಂದನೆಗಳು ಬರೆದವರಿಗೆ

    Reply
    • Sharanappa

      ಅಕ್ಕಾ ನಿಮ್ಮ ಮಾತುಗಳು ಇಂದಿನ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡಲಿ ಎಲ್ಲಾ ಹೆಣ್ಣು ಮಕ್ಕಳು ಓದಿ ಒಳ್ಳೆ ವಿದ್ಯಾವಂತರಾಗಿ ಸ್ವಂತ ದುಡಿಮೆಯ ಸ್ವಾತಂತ್ರ ನಡೆಸಲಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತುಗಳು ನಿಜವಾಗಲಿ

      Reply
  2. Iranna Kanamadi

    ಇಂದು ಅನೇಕ ಹೆಣ್ಣು ಮಕ್ಕಳಿಗೆ ಓದಬೇಕು ಅನ್ನುವ ಆಸೆ ಇದೆ ಆದರೆ ಹಲವು ಕಾರಣದಿಂದ ಸಮಾಜದ ಒತ್ತಡದಿಂದ ಶಿಕ್ಷಣ ದೊರೆಯುತ್ತಿಲ್ಲ. ಪ್ರತಿಯೊಬ್ಬ ಹೆಣ್ಣು ಮಗಳು ಈ ಕವಿತೆಯನ್ನು ಓದುವುದರ ಮೂಲಕ ಕುಟುಂಬ ಮತ್ತು ಸಮಾಜ ಕೇಳುವ ಪ್ರಶ್ನೆಗೆ ದಿಟ್ಟ ಉತ್ತರವನ್ನು ಕೊಡಬಲ್ಲಳು…….. ಧನ್ಯವಾದಗಳು ಸುವರ್ಣ

    Reply
  3. Deepa Adin

    ನಿಜಕ್ಕೂ ಒಂದು ಹೆಣ್ಣು ತನ್ನ ಅಂತಸ್ಸತ್ತ್ವ ಉಳಿಸಿಕೊಳ್ಳಲು ಈ ಸಮಾಜದ ಕೆಲ ಮೂಢ ಜನರಿಗೆ ಉತ್ತರಿಸಲೇಬೆಕಾದ ಸಾಲುಗಳು…..thank u suvarnakka… for style of sharing twist of complexity of a girl…..

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ