Advertisement
ದಾಟಿ ಹೋಗುವುದಷ್ಟೇ: ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

ದಾಟಿ ಹೋಗುವುದಷ್ಟೇ: ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

ದಾಟಿ ಹೋಗುವುದಷ್ಟೇ

ಎಲ್ಲಿಂದ ಬಂದಿದ್ದೇವೋ ಒಂದು ನಿಲ್ದಾಣ
ಹಾದು ಹೋಗಬೇಕು
ಠಿಕಾಣಿ ಹೂಡುವುದಕ್ಕೆ ಬರಲಿಲ್ಲ
ಹಾದು ಹೋಗಬೇಕಷ್ಟೆ ಸುಮ್ಮನೆ
ಉಳಿದು ಒಂದಿಷ್ಟು ಉಸಿರೆಳೆದುಕೊಂಡು
ಬೊಗಸೆ ನೀರು ಕುಡಿದು
ಮತ್ತು ತುಸು ವಿಶ್ರಮಿಸಿ

ಯಾವ ಮೂಢ ಹೇಳಿದನು ನಿಮಗೆ?
ಹಾದು ಹೋಗುವ ದಾರಿಯಲ್ಲಿ
ಸಿರಿ ಸಂಗ್ರಹಕ್ಕೆ, ನದಿ ಬತ್ತಿಸಲಿಕ್ಕೆ
ಹಸಿರ ಸವರಲಿಕ್ಕೆ ಮಹಲ ಹೊದ್ದುಕೊಳ್ಳಲಿಕೆ
ಹಸಿದವರ ಕೊಲ್ಲುವುದಕ್ಕೆ
ಜೀವನಿಷ್ಟ ಹಾಡಿಗೆ ಕೊಳ್ಳಿ ಇಡುವುದಕ್ಕೆ
ತೆಪ್ಪಗೆ ಹಾದು ಹೋಗದೆ ಹಗೆಯಾಗುವದಕ್ಕೆ

ಜೀವಿಸಲು ಬರುವುದಕ್ಕೂ
ವಾಸಿಸಲು ಬರುವುದಕ್ಕೂ ಅಂತರವಿದೆ
ಜೀವಿಸಿ ಹೊರಡುವ ಬದಲು
ವಾಸಿಸಿದೆವು ಬೆಂಕಿ ಹಾಸಿದೆವು
ಅತಿಥಿಗಳಷ್ಟೆ ಈ ಇಳೆಗೆ
ತೆಪ್ಪಗೆ ಹೊರಡಬೇಕಿತ್ತು
ನಿಲ್ದಾಣವ ನರಕಮಾಡಿದೆವು

ಮುಟ್ಟಿದೆಲ್ಲವೂ ಭಸ್ಮ
ಮಿಂದಲೆಲ್ಲ ಬರಡು ತಳ ಒಣಗು
ಕೊಳ್ಳುಬಾಕರ ಬಾಕುವಿಗೆ ಇಹ ನೆಲಸಮ
ನಾಳೆ ಇಲ್ಲವಾಗುವ ನಿಜ ಮರೆತ ರಕ್ಕಸತನ
ಸುಮ್ಮನೆ ಹಾದು ಹೋಗಬೇಕಾಗಿತ್ತು
ಹಗುರ ಹಿತದ ಜೀವಯಾನ ಮುಗಿಸಿ
ರಕ್ತ ಪೀಪಾಸು ನಾತ ಉಳಿಸಿ ಹೋಗುತ್ತೇವೆ

ಹಾದು ಹೋಗುವುದಷ್ಟೇ ಸತ್ಯ
ನೆಲೆ ಎಂಬುದೆಲ್ಲ ಭ್ರಮೆ

About The Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. ೨೦ ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

1 Comment

  1. Rekha rangnath

    ಅತಿಥಿಗಳಷ್ಟೇ ಈ ಇಳೆಗೆ… ನಿಜ ಸರ್.

    ಸತ್ಯತೆಯ ಸಾರುವ ಸುಂದರ ಕವಿತೆ ?

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ