Advertisement
ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ವ್ಯಭಿಚಾರಿ ಹೂವು!

ವ್ಯಭಿಚಾರಿ ಹೂವಷ್ಟೇ;
ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,
ಮೊನ್ನೆಯಷ್ಟೇ ಅರಳಿ,
ದೇವರ ಮುಡಿಯನ್ನೇರುವ ಹೊತ್ತಿಗೆ,
ಕಿಡಿಗೇಡಿಗಳ ಕೈಯೊಳಗೆ
ಕೀಲುಬೊಂಬೆಯಂತೆ ಕಿತ್ತು, ಹರಿದ,
ಬೆಂದು, ಬಳಲಿ,
ದಳವಿಲ್ಲದೆ, ದಡ ಸೇರದೆ
ಬೀದಿ ಪುಷ್ಪವಾದ ನಾನು,
ವ್ಯಭಿಚಾರಿ ಹೂವಷ್ಟೇ..!!

ಅಲೆದವಳು….
ಅಲ್ಲಿ… ಇಲ್ಲಿ… ಬೀದಿಗಳೆನ್ನದೇ
ಹೆತ್ತೊಡಲು ಹೇಸಿ ನಿಂತಾಗ,
ಬೆಂಬಲವಿಲ್ಲದ ಬೆಂಗಾಡಿನೊಳಗೆ
ಬೆಂಡಾಗಿ ನಿಂತು,
ಹೊಟ್ಟೆ ತುಂಬಿಸಿಕೊಳ್ಳಲು
ಹೆಣಗಾಡಿದವಳು..
ತಪ್ಪಿಲ್ಲದೆ ತವರಿಗೆ ಎರವಾಗಿ
ಇದ್ದೂ ಸತ್ತವಳು!

ಹಿಂಜರಿದವಳು…
ಇನ್ನೊಬ್ಬರ ಮುಂದೆ ಕೈಚಾಚುವಲ್ಲೂ,
ಸ್ವಾಭಿಮಾನಕ್ಕೆ ಕಟ್ಟು ಬಿದ್ದವಳು.
ಹೊಟ್ಟೆ ಪಾಡಿಗಾಗಿ ಅರಿತೊ ಮರೆತೊ,
ಕೈ ಮುಂದೆ ಬಂದಾಗ,
ಜೀವ ತೆತ್ತುವುದೇ ಲೇಸೆನಿಸಿದರೂ
ಹೊಟ್ಟೆ ಮುಟ್ಟಿ ಎದೆಗಟ್ಟಿ
ಮಾಡಿಕೊಂಡವಳು.

ಗೊತ್ತಿದ್ದೂ ಬೇಡಿದುದರ ಫಲ;
ದಿಕ್ಕು ತಪ್ಪಿಸಿದ ಕೈಗಳು..
ಮಡಿಲೊಳಗಿರೊ ಹಸುಕಂದನ ಬದಿಗೊತ್ತಿ
ಉರುಳಾಡ ಬಯಸಿದ ಮೈಗಳು.
ದೌರ್ಜನ್ಯಕ್ಕೆ ಮನ ಧಿಕ್ಕಾರವೆನ್ನುತ್ತಿರಲು,
ಅಪ್ಪನಿಲ್ಲದ ಹಸುಗೂಸ ಆರೈಕೆಗಾಗಿ,
ವಿಧಿಯಿರದೆ ಒಪ್ಪಿಕೊಂಡ,
ಇನ್ನೊಬ್ಬನ ಮೈ ಅಪ್ಪಿಕೊಂಡ ನಾನು
ವ್ಯಭಿಚಾರಿ ಹೂವಷ್ಟೇ..!!

ಹೆತ್ತೊಡಲ ಹೊರೆಯೊತ್ತು,
ಹೊಟ್ಟೆಯೊರೆಯಲಷ್ಟೇ ಬದುಕಿದವಳು..
ಇನ್ನೊಬ್ಬರ ಹೊಟ್ಟೆ ಮೇಲೊಡೆವ
ಕಾಂಚಾಣಗಿತ್ತಿಯಲ್ಲ..
ಕಾಕಡದಂತೆ ಪವಿತ್ರಳೂ ಅಲ್ಲ.
ಸುಟ್ಟ ಕನಸುಗಳ ಜೊತೆ ಜೊತೆಯೇ
ಮುದುಡಿ ಬಾಡಿರೆ ನಾನು,
ವ್ಯಭಿಚಾರಕ್ಕೆ ಸಿಕ್ಕ ಹೂವಷ್ಟೇ..
ಲೋಕ ಕಂಟಕಿಯಲ್ಲ..!!

About The Author

ಮನು ಗುರುಸ್ವಾಮಿ

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಬ್ಬೆರಗು (ನಾಟಕ), ಅವಳೂ ಕತೆಯಾದಳು (ನೀಳ್ಗತೆ), ಕಲ್ಲು ದೇವರು ದೇವರಲ್ಲ (ಸಂಶೋಧನಾ ನಿಬಂಧ), ಗಾಂಧಿ ನೀ ನನ್ನ ಕೊಂದೆ (ನಾಟಕ) ಇವರ ಪ್ರಕಟಿತ ಕೃತಿಗಳು. ನಿನ್ನ ಇಚ್ಛೆಯಂತೆ ನಡೆವೆ (ಲೇಖನ ಸಂಕಲನ), ವ್ಯಭಿಚಾರಿ ಹೂವು ( ಕವನ ಸಂಕಲನ) ಅವಳು ಮತ್ತು ಸಾವು (ಗೀಚು ಬರಹ), ಹುಡುಗಿಯರ ಸೇಫ್ಟಿಪಿನ್ ಅಲ್ಲ ಹುಡುಗರು ( ವ್ಯಕ್ತಿತ್ವ ವಿಕಸನ), ಮೈಮನ ಮಾರಿಕೊಂಡವರು (ನೀಳ್ಗತೆ) ಪ್ರಕಟಣಾ ಹಂತದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ