Advertisement
ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ಋತುದೊಲುಮೆ…

ಅವನಿಲ್ಲ ಇಲ್ಲಿ ಎಲ್ಲೂ
ಪಡಸಾಲೆ ಹಜಾರ ಮತ್ತು ಅಂಗಳದಲ್ಲೂ
ಬರಬಹುದು ನಾಳೆ ಕಳೆದು
ನಾಡಿದ್ದು ಸರಿಯುವ ಮುನ್ನವೇ!

ಸೋಲಬೇಕಾದ ಕಾಲು ಸೋತಿಲ್ಲ
ಕಾಡಬೇಕಾದ ಕಿಬ್ಬೊಟ್ಟೆ
ಕಾಡಿಲ್ಲ
ಬೆನ್ನಿನ ಚಳಕು ಬಾಯಿಬಿಟ್ಟಿಲ್ಲ.
ಒಳಗೆ ಕೆಂಪು ಮಳೆ ಸುರಿದು ದಿನವಾದರೂ
ಇಲ್ಲಿ ಯಾವ ಗುರುತೂ ಉಳಿದಿಲ್ಲ..

ಹಂಡೆಯೊಳಗೆ ಕುದಿಸಿಟ್ಟುಹೋದ
ನೀರು ಆರಿಲ್ಲ
ಸೀಗೆ ಸಾಬೂನು ಟವಲು ಅವನ
ಮಾತು ಮೀರಿ ಕದಲಿಲ್ಲ
ಅಂವ ದೇವರ ಮುಂದೆ ಹಚ್ಚಿಟ್ಟು
ಹೋದ ಹಣತೆ ಇನ್ನೂ ಆರಿಲ್ಲ..
ಬಿಡಿಸಿ ದೇವರಿಗೆ ಮುಡಿಸಿ ಹೋದ
ಹೂವೂ ಬಾಡಿಲ್ಲ..

ಬಿಡೊ.. ಒಮ್ಮೆಯಾದರೂ
ನುಂಗುವೆ
ಹಿಂಡುವ ಹೊಟ್ಟೆಯ ನೋವನ್ನು
ಬೆನ್ನ ಎಳೆತವನ್ನ
ರೆಪ್ಪೆ ಮೇಲೆ ಕೂರುವ ದಣಿವನ್ನ
ಅಂದರೂ..
ಬಿಡುವುದಿಲ್ಲ ಅವನ ತಾಕೀತುಗಳು!
ಅವನಿಲ್ಲದೆಯೂ ಮನೆ ಹಬ್ಬವಾಗುತ್ತದೆ
ಮತ್ತು ನನ್ನ ಮುಟ್ಟೂ
ಅವನ ತಾಕೀತುಗಳೇ ಹಾಗೆ!
ರೂಢಿಯಾಗಿ ಬಿಡುತ್ತವೆ..

ನಾಡಿದ್ದು ಅಂವ ಬಂದಾಗ
ಬಾಗಿಲು ತೆರೆದ ತಕ್ಷಣ ಅವನ ಮುಖ
ನೋಡುತ್ತೇನೆ
ನೋವು ಉಂಡ ಕುರುಹು ಕಾಣುತ್ತದೆ
ನಿಜಕ್ಕೂ,
ನನ್ನ ನೋವನ್ನು ಅವ ಅಲ್ಲೇ ಉಣ್ಣುತ್ತಾನೆ;
ಅವನ ಖುಷಿಯನ್ನು ನಾನಿಲ್ಲಿ!
ಅದು ನೋವಲ್ಲ‌ ಒಲುಮೆ
ಅನ್ನುತ್ತಾನೆ, ಪಾಪ ಮುಗ್ಧ..!
ಹಾಂ, ನೆನಪಾಯ್ತು
ಋತುಸ್ರಾವ ಎಂದರೆ ಬೈಯುತ್ತಾನೆ
ಅದು ಋತುಸ್ರಾವ ಅಲ್ಲ ‘ಋತುದೊಲುಮೆ’
ಎಂದು ತಪ್ಪು ಅಕ್ಷರ ಬರೆದ ಮಗುವನ್ನು
ತಿದ್ದುವಂತೆ ತಿದ್ದಿ
ಒಂದು ಮುತ್ತಿಡುತ್ತಾನೆ…

About The Author

ಸದಾಶಿವ ಸೊರಟೂರು

ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಹೆಸರಿಲ್ಲದ ಬಯಲು' ಮತ್ತು ' ತೂತು ಬಿದ್ದ ಚಂದಿರ' (ಕವನ ಸಂಕಲನ)  ಹಾಗೂ  ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ