Advertisement
ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ಈ ದಿನದ ಕವಿತೆ

ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ಈ ದಿನದ ಕವಿತೆ

ಎಸಿ ಬಸ್ಸಿನ ಗುಣ
ಸುಲಭಕ್ಕೆ ಗೋಚರಿಸದ
ಪ್ರಮೇಯ
ಸಮೀಕರಣಕ್ಕೆ ಸಾಲದು
ಗಣಿತದ ಸೂತ್ರಗಳ ಹಾಸುಹೊಕ್ಕು

ಒಳಹೊಕ್ಕಾಗಲೇ
ನೆತ್ತಿ ನೇವರಿಸುವ ತಂಪು
ಉಸಿರಿಗೊಂದು ಮಂದ್ರ ಲಯ
ಮನಸಿಗೊಂದು ಸ್ಥಾಯೀಭಾವದ ಸ್ಥಾಪನೆ

ಕಿಟಕಿಗಳೋ
ಬೃಹದಾಕಾರ
ನಿಚ್ಚಳ ನೀಲಿ ಆಕಾಶದ ದೊಡ್ಡ ತುಂಡನ್ನೇ
ಕನಸು ನೇಯಲು
ಕುಸುರಿ ಮಾಡಲು
ಚಾದರದಂತೆ ಒದಗಿಸುವ
ಮಹಾನುಭಾವ ಬಸ್ಸಿನ
ಮನಸು ಸುಪ್ತ ಕ್ಯಾಪಿಟಲಿಸಂನ ಛಾಯಾಪಾತ್ರೆ

ಸುತ್ತಲಿನ ಗಾಜಿನ ಪರದೆ
ವಿಸ್ತಾರದ ವಿರುದ್ಧ
ಸಂಕುಚಿತ
ಬೆಳಕಿಗೆ ಮಾತ್ರ ಒಳಬರುವ ಅನುಮತಿ
ಗಾಳಿ, ಮಳೆಗೆ ತಡೆ, ಇಲ್ಲ ಸಮ್ಮತಿ

ಕೆಸರಿನ ಪಾದ, ದುಡಿಮೆಯ ಬೆವರ ಗಂಧಕ್ಕೆ ಜಾಣಕುರುಡು.
ದ್ವೀಪದಂತಹ ಜನರಿಗೆ
ತಮ್ಮದೇ ಬಬಲ್ ಎನಿಸುವ
ಈ ಗಾಲಿಯ ಮೇಲಿನ ಜಗತ್ತು,
ಹೊರಹಾಕುವ ಬಿಸಿಗಾಳಿಗೆ ಬಿಗಿಮೌನದ ಕಟ್ಟಪ್ಪಣೆ!

About The Author

ಕ್ಷಮಾ ವಿ. ಭಾನುಪ್ರಕಾಶ್

ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ