ಮೊದಲು ಕೊಂದುಬಿಡಿ
ಕೊಂದುಬಿಡಿ ಮೊದಲು
ಇನ್ನು ಉಳಿಸಬೇಕಾದ ಅಗತ್ಯವಿಲ್ಲ
ಉಳಿಸಿದರೆ ಏನೇನೂ ಪ್ರಯೋಜನವಿಲ್ಲ
ಹೀಗೆಯೇ ಉಳಿಸಿದರೆ
ಅಪಾಯವಿದೆ ಮುಂದಿನ ತಲೆಮಾರಿಗೆ
ಅದನ್ನು ಕೊಲ್ಲಬೇಕೆಂಬ ಬಯಕೆ
ಇಂದು ನಿನ್ನೆಯದ್ದಲ್ಲ
ಇದೆ ಶತಮಾನದಿಂದಲೂ
ತಲೆ- ತಲೆಮಾರಿಗೆ ಮರಣವನ್ನಿಕ್ಕಿ
ಮೆರೆಯುತ್ತಿದೆ ಅದು
ಅದನ್ನು ಉಳಿಸಿ ಮಾಡುವುದಾದರೂ ಏನಿದೆ!
ಕೊಲ್ಲುವುದು ತಪ್ಪೆಂಬ
ಅರಿವಿದೆ ನನಗೆ
ಅರಿವನ್ನಿರಿಸಿಕೊಂಡೇ ಹೇಳುತ್ತಿದ್ದೇನೆ
ಕೊಲ್ಲಿ ಕೊಲ್ಲಿ
ಇನ್ನು ಉಳಿಸಬೇಡಿ
ಯಾವುದೇ ಕಾರಣಕ್ಕೂ
ಮತ್ತೆ ಹೇಳುತ್ತಿದ್ದೇನೆ
ಮತ್ತೆ ಮತ್ತೆ ಹೇಳುತ್ತಿದ್ದೇನೆ
ಮೆತ್ತಗಿನದ್ದಲ್ಲದ ಧ್ವನಿಯಲ್ಲಿ
ಕೊಂದುಬಿಡಿ ಈಗಲೇ
ದಯಮಾಡಿ ಉಳಿಸದಿರಿ
ಎದುರುಬಂದವರನ್ನು
ಎದ್ದುನಿಂತವರನ್ನು
ಕೊಂದುಮುಗಿಸುವುದೇ
ನಿಜವಾದ ಗಂಡಸ್ತನ
ಎಂಬ ಭಾವವನ್ನು
ಈಗಲೇ ಕೊಂದುಬಿಡಿ
ದೊಡ್ಡ ಮನಸ್ಸು ಮಾಡಿ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
