Advertisement
ಸಿ.ಬಿ. ಐನಳ್ಳಿ ಬರೆದ ಎರಡು ಕವಿತೆಗಳು

ಸಿ.ಬಿ. ಐನಳ್ಳಿ ಬರೆದ ಎರಡು ಕವಿತೆಗಳು

1. ಅವ್ವನ ಉತ್ತರಾರ್ಧ

ಬಳಲಿ ಬಾಗಿದೆ ಬೆನ್ನು
ಅರ್ಧ ಶತಮಾನ ಕತ್ತೆಯಂತೆ ಹೊತ್ತ
ಆತನ ನಾಗರಿಕತೆಯ ಹೆಣಭಾರಕ್ಕೆ
ಅನಕ್ಷರಸ್ಥ ಹೆಣ್ಣಿಗೆ ಅಕ್ಷರಗಳು
ದಾಟಲಾಗದ ಗೆರೆ
ಮಾಯ್ಕಾರನ ಕೈಯ ಗುರಾಣಿ
ಅನಾಯಾಸವಾಗಿ ಬೇರಲಿ ಹರಿವ
ಆದಿಮ ಅನುಭೂತಿಗೆ ತಾಗಿಯೂ ತಾಗದ
ದಾಂಪತ್ಯದ ಸೋಂಕು ಆಗಾಗ
ಆಡಿಸುತ್ತದೆ ಗೌಡತಿಯಂತೆ
ಬೇರುಗಳಲೂ ಚಿಕ್ಕ ಬಿರುಕುಗಳಿದ್ದಾವು
ಬಲ್ಲವರಾರು?
ನಡೆವಾಗಂತೂ ಎಡವಿದ್ದು ವಿರಳ
ಎದೆಕದ ತಟ್ಟಿದ್ದು ಸರಳ
ಬೆಂಕಿ ಬೇಗುದಿಗಳಲ್ಲಿದ್ದವರೆಲ್ಲ
ಬಂದು ಎದೆ ಬಸಿದುಕೊಳ್ಳುತ್ತಾರೆ
ಕಿವಿಗೊಟ್ಟು ಕೇಳುತ್ತಾಳೆ ಎಲ್ಲರ ಪಾಡು
ಕಣ್ಣಷ್ಟೇ ಚೂರು ಮಂದ
ಅರೆಯುತ್ತಾಳೆ ನೋವಿಗೆ ತಕ್ಕ ಔಷಧಿ
ನೇಮಗಳಿಲ್ಲದ್ದಕ್ಕೇ ನಿಂದಿತಳಾದವಳಿಗೆ
ನಿತ್ಯಪೂಜೆಯ ಲಿಂಗಪತಿಯ ಆತ್ಮವೂ
ಮುಪ್ಪಿನಲಿ ಒಳಗೊಳಗೇ ಬಾಗುತಿದೆ
ತಿಳಿದಿರಬೇಕೇನೋ ಕೊನೆಕೊನೆಗೆ ಇದು
ಮಂಟೇಸ್ವಾಮಿಯ ಒಕ್ಕಲೆಂದು
ಪಠಿಸುತ್ತಾರವರು ವಚನ ತಪ್ಪಿಲ್ಲದೆ
ಬದುಕುತ್ತಾಳಾಕೆ ತಾನಷ್ಟೇ ಸರಿ ಎನ್ನದೆ
ಸುಮ್ಮನೇ ಶಾಸ್ತ್ರಕ್ಕೆಂದು ತಲೆ ಬಾಗುವುದಿಲ್ಲ
ನಡೆವಾಗ ನೆಲವಷ್ಟೇ ಕಾಣುವುದಿಲ್ಲ
ಮುಪ್ಪಿಗೂ ಮೊದಲೇ ಬಾಗಿತ್ತೇನೋ ಆತ್ಮ

2. ಸಂಕಲನ ಸೇರದ ಕವಿತೆ

ಎದೆದನಿಯ ವ್ಯಾಕರಣದಂತೆ ಕಾವ್ಯದ
ಪರದೆಯ ಮೇಲೆ ಮೂಡುವ ಸಾಲು
ಇಹವಲ್ಲ ಪರವೂ ಅಲ್ಲ
ಮನದಾಳದಲಿ ಸಂಚಯಿಸಿದ
ಬಯಕೆ ಬೇಗುದಿಗಳು ಕಾಲನ ಕೂಡಿ
ಮೂಡುವ ದಾರಿಮೀರುವ ಹಾಡು

ಧ್ವನಿಯಾಗಿ ಮೂಡುವ
ಅಲಕ್ಷಿಸಿದರೆ ಮರೆಯಾಗುವ
ಈ ಮಿಂಚಲಿ ಮಿಸುಕುತ್ತದೆ ಬಾಗಿಲಲಿ ನಿಂತ
ಖಾಲಿಚೀಲದ ಜಂಗಮನ ದರ್ಶನ
ಶಾಶ್ವತ ಸಜೆ ನೀಡಿ ಬಂಧಿಸಬೇಡ
ಇರಲಾರೆ ನಾ ಆತ್ಮಸಾಕ್ಷಿ ಅಳಿಸಿ

ಹರಿವುದರಲ್ಲೇ ಅರಿವು ಕಂಡ
ತಂತುಗಳನು ಸ್ಥಿರಗೊಳಿಸಬೇಡ
ಅಕ್ಷರಗಳ ಕಿರೀಟ ತೊಟ್ಟು ಪಟ್ಟಾಭಿಷೇಕ
ನಡೆಸಿಕೊಳ್ಳುವ ನಿನ್ನ ಬಯಕೆ
ನನ್ನ ಮಣ್ಣಿನ ಕೈಗೆ ಬಲು ಭಾರ
ಅಳಿಯುತ್ತಲೇ ಅರಳಬೇಕಾದ ನನ್ನನ್ನು
ಶಾಸನವಾಗಿಸೇನು ಫಲ?
ಕಳೆಯುತ್ತಲೇ ಹೊಳೆಯುವೆ

About The Author

ಡಾ. ಸಿ. ಬಿ. ಐನಳ್ಳಿ

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ