ನಿರ್ವಾತದ ಕಣ್ಣ ಬೆಳಕಲ್ಲಿ
ನನ್ನೊಳಗೆ
ಸುಳಿವಿಲ್ಲದೇ ಸುಳಿದಿಹ
ನಿರ್ವಾತದ
ಹೆಜ್ಜೆಗಳಿಗೆ
ಬೆಕ್ಕಸ ಬೆರಗಾಗಿದ್ದೇನೆ
ಕಣ್ಣರಳಿಸಿ
ಮೈಮರೆಸಿ
ನಿಲ್ದಾಣಗಳು
ಕೊನೆಗೊಳ್ಳದಿರಲೆಂದು
ಪ್ರಾರ್ಥಿಸುವಾಗ
ಒಂದೊಮ್ಮೆ
ನೆರಳಿಗೂ
ನಿರ್ವಾತದ
ಹೆಜ್ಜೆಗಳಿಗೂ
ಜೋತುಬೀಳುತ್ತೇನೆ
ದೊರಕಿಯಾವೆಂದು
ಕೈಗೆಟುಕದಿರುವಾಗ
ಕಸುವನ್ನು ಕಸಿಯದಿರಲೆಂದು
ಧೇನಿಸುತ್ತ
ಖಾಲಿ ಜೋಳಿಗೆ
ಖಾಲಿತನವ ಹೊದ್ದಿರುವಾಗ
ಮೂರ್ತದಲ್ಲಿ
ಅಮೂರ್ತ
ಬಿಕ್ಕಳಿಸುತ್ತಿರುವಾಗ
ನಿರ್ವಾತವೂ
ಉಸಿರೆತ್ತದಿರುವಾಗ
ಕಾಲದ ನಿರುತ್ತರಗಳ
ಎದುರುಗೊಳ್ಳಲೇ?
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

