Advertisement
ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

‘ಕ್ಯಾನ್ವಾಸ್’

ತನ್ನ ಅಡುಗೆ ಮುಗಿದ ಮೇಲೆ
ಧ್ಯಾನಕ್ಕೆ ಕೂರಿಸಿದ್ದಾಳೆ
ಬುದ್ಧನನ್ನು,
ಎಲೆಯುದುರಿದ್ದ ಬೋಧಿ
ವೃಕ್ಷಕ್ಕೀಗ ಹಕ್ಕಿಗಳು
ವಲಸೆ ಬರುತ್ತವೆ ಮತ್ತೆ

ಹೊರಗೆ ಬೆಣ್ಣೆ ಚೆಲ್ಲಿ
ಖಾಲಿಯಾದ ಮಡಕೆ
ಮೇಲೆ ತುಂಟ ಕೃಷ್ಣ ನೋಡಲ್ಲಿ
ಬಚ್ಚಿಟ್ಟಿದ್ದಾಳೆ ಮೊದಲೇ
ತನ್ನ ಮನೆಯ ಮುದ್ದೆ
ಕಣ್ಣುಹುಬ್ಬು ಹಾರಿಸಿದರೂ
ಕೃಷ್ಣ ಗಮನಿಸಲಿಲ್ಲ;
ಆಚೆ ಈಚೆ ಹುಡುಕುತ್ತಲೇ ಇರುವನು

ರಾಮನಿಗೆ ಇನ್ನೂ
ತುತ್ತು ಉಣಿಸಬೇಕು
ಬೇಗ ಬಾ ಚಂದ್ರ;
ಅರ್ಧ ಮೋಡ ಕರಗಿಸುವಳು..
ಬಾಗಿಲಾಚೆ ನಿಂತು
ಇಣುಕಿ ಇಣುಕಿ ನೋಡುವ
ಪುರುಷೋತ್ತಮನಿನ್ನೂ ಪುಟ್ಟ ಕಂದ

ಕೂತಲ್ಲಿ ಕೂರುವುದಿಲ್ಲ
ಕೃಷ್ಣ, ಒಮ್ಮೆ ನೋಡಿಕೊಳ್ಳಿ
ಅಂತ ಬುದ್ಧನಿಗೆ ಹೇಳುವ ಹಾಗೂ ಇಲ್ಲ
ಊಟ ಮುಗಿಸಿ ಹಾಡುವ
ಜೋಗುಳಕ್ಕೆ ಕಾಯುತ್ತಿದ್ದಾನೆ ರಾಮ
ಒಮ್ಮೆ ಅತ್ತರೆ ಮತ್ತೆ
ಸುಮ್ಮನಿರಿಸುವುದು ಕಷ್ಟ

ಎಲ್ಲರನ್ನೂ ಒಂದೇ ಕ್ಯಾನ್ವಾಸಿನ
ಬೇರೆ ಬೇರೆ ಮೂಲೆಗಳಲ್ಲಿ
ಕೂರಿಸಿ ಪೆನ್ಸಿಲ್ಲು ಬದಿಗಿಟ್ಟು ನಡೆದಳು
ರೇಖೆಗಳ ಮುಖದಲ್ಲಿ
ಚೆಂದದ ಮಂದಹಾಸ..
ಊಟದ ಬಟ್ಟಲಲ್ಲಿ ಅನ್ನ ಸಾಂಬಾರು
ಮಜ್ಜಿಗೆ ಉಪ್ಪಿನಕಾಯಿ
ದೇವರಿಗೆ ಆಕಾರ ಕೊಟ್ಟ
ಕೈಗಳೀಗ ಮನುಷ್ಯ ಲೋಕದ
ಹಸಿವು ಇಂಗಿಸುತ್ತವೆ.

ನಾಳೆ ಮತ್ತೆ ಅವಳು ಪೆನ್ಸಿಲ್ಲು
ಹಿಡಿಯುವುದನ್ನೇ ಕಾಯುತ್ತಾ
ರಾತ್ರಿ ಕಳೆಯುತ್ತಾರೆ
ಧ್ಯಾನದ ಬುದ್ಧ,
ಬೆಣ್ಣೆಯ ಕೃಷ್ಣ,
ಜೋಗುಳದ ರಾಮ…

About The Author

ಶ್ರೀ ತಲಗೇರಿ

ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು. ಸದ್ಯಕ್ಕೆ ಬೆಂಗಳೂರಿನ ನಿವಾಸಿ. ಸಾಫ್ಟ್‌ವೇರ್‌ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

5 Comments

  1. Arpitha

    ಆಹಾ, ಚೆಂದದ ಕವಿತೆ ❤️

    Reply
    • ಶ್ರೀ ತಲಗೇರಿ

      ಧನ್ಯವಾದಗಳು ತುಂಬಾ 😌

      Reply
  2. Kotresh Arsikere

    ಚೆಂದದ ಕವಿತೆ

    Reply
    • Ramesh j v

      ಚೆಂದದ ಕವಿತೆ 🍃🍃🍃

      Reply
    • ಶ್ರೀ ತಲಗೇರಿ

      ಧನ್ಯವಾದಗಳು ತುಂಬಾ 😌

      Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ