ಹಾಗೆ ಮುಂದೆ ಸಾಗುತ್ತಾ ಬಲಬದಿಯ ರಸ್ತೆ ಯೊಂದನ್ನು ತೋರಿಸಿ “ಇಲ್ಲೊಂದು ಮಜಾ ಇತ್ತು ಕಣಯ್ಯಾ. ಹೀಗೆ ಇಲ್ಲಿ ಒಮ್ಮೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದೆ. ಆಗೆಲ್ಲ ಅಂಬಾಸಿಡರ್ ಮಾತ್ರ ಇದ್ವು. ಸಾರ್ ಈ ದಾರಿ ಚಿಕ್ಕಮಗಳೂರಿಗೆ ಹೋಗುತ್ತೆ ಷಾರ್ಟ್ ಕಟ್ ಅಂದ. ಸರಿ ನೋಡೇ ಬಿಡೋಣ ಎಂದು ಹೊರಟೆವು. ಹೋಗ್ತೀವಿ ಬರಿ ಅಪ್ಪು ಕಣೋ. ಕಾರ್ ಬೇರೆ ಹತ್ತಂಗಿಲ್ಲ ಸಾಕಾಗಿ ಹೋಯ್ತು. ನಾನು ಕಾರ್ ಇಳಿದು ವಾಪಾಸ್ ಬಾರದಿರಲು ಚಪ್ಪಡಿ ಕಲ್ಲು ಹಿಡಿದುಕೊಂಡು ಹಿಂದೆ ಕಲ್ ಇಡೋದು, ಡ್ರೈವರ್ ಹತ್ಸದು, ಸಾಕಾಗಿ ಹೋಯ್ತು ಕಣಯ್ಯ.”
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ
ರಸ್ತೆಗಳು ಆಗಿದ್ದ ಸ್ಥಿತಿ ಈಗಿದ್ದ ಸ್ಥಿತಿಗೂ ವ್ಯತ್ಯಾಸ ಹೇಳುತ್ತ. ಚಿಕ್ಕಮಗಳೂರು ಜನ ಈಗ ಸಾಕಷ್ಟು ಬದಲಾಗಿದ್ದಾರೆ. ಎಲ್ಲ ಹಣದ ಹಿಂದೆ ಬಿದ್ದಿದ್ದಾರೆ ಎಂದರು. ಕುವೆಂಪು ಸ್ಮಾರಕ ನಿರ್ಮಾಣ ಸಂದರ್ಭ ವಾರಕ್ಕೆರಡು ಬಾರಿ ಈ ಭಾಗದಲ್ಲಿ ಓಡಾಡಿದ್ದು ಮತ್ತು ಇಲ್ಲಿನ ಜನಕ್ಕೆ ತೀರ ಹತ್ತಿರವಾಗಿದ್ದನ್ನು ನೆನಪಿಸಿಕೊಂಡರು.
ರಸ್ತೆಯಿಂದಲೇ ಕಾಣುತ್ತಿದ್ದ ಮುಳ್ಳಯ್ಯನ ಗಿರಿ ಬೆಟ್ಟದ ಶ್ರೇಣಿಗಳನ್ನು ಆಸ್ವಾದಿಸುತ್ತಿದ್ದ ನಮಗೆ ಆಕಾಶ, ಕಾಡು, ಮನುಷ್ಯನ ಬಗ್ಗೆ ಹೇಳುತ್ತಿದ್ದರು.
ಮಧ್ಯೆ ಮಧ್ಯೆ ಡ್ರೈವರ್ಗೆ “ಲೋ ನೀನು ಆ ಕಡೆ ನೋಡಬೇಡ ಕಣೋ” ಎಂದು ಎಚ್ಚರಿಸುತ್ತಿದ್ದಿದ್ದು ನಮಗೆ ತುಸು ನಗುವಿನ ಜತೆ ಕೆಟಿ ಬಗ್ಗೆ ಇದ್ದ ಜೀವನ ಪ್ರೀತಿಯ ಬಗ್ಗೆ ಕುತೂಹಲ ಹುಟ್ಟಿಸುತ್ತಿತ್ತು.
ಈ ಭಾಗದ ಎಸ್ಟೇಟುಗಳಲ್ಲಿ ಸಾಕಷ್ಟು ಮನೆಗಳನ್ನು ಆರ್ಕಿಟೆಕ್ಟ್ ಮಾಡಿರುವ ಕೆಟಿ, ಈ ಭಾಗದ ವ್ಯಕ್ತಿಯೊಬ್ಬ ‘ನನ್ನ ಫೋಟೋ ಟಿವಿಲಿ ಅಥವಾ ಪೇಪರಲಿ ಕಂಡಿದ್ದೇ ಫೋನ್ ಮಾಡುತ್ತಾನೆ’ ಎಂದು ನೆನಪಿಸಿಕೊಂಡರು.
ಮಾರ್ಗ ಮಧ್ಯೆ “ಲೋ ರಮೇಶ್ ಸ್ವೀಟ್ ತಗಳ್ಳೋ” ಎಂದು ಡ್ರೈವರನ್ನ ಕಳಿಸಿದರು. ಕಾರ್ ರಸ್ತೆಯ ಪಕ್ಕ ನಿಲ್ಲಿಸಿದ್ದ ಸಂದರ್ಭ ಹದಿನೈದು ವರ್ಷದ ಹುಡುಗನೊಬ್ಬ ಕಾರಿನ ಕಿಟಕಿಯಲ್ಲಿ ಇಣುಕಿ ನೋಡಿ `ಸಾರ್ ದರ್ಬೆಗುಂಡಿಗೆ ಹೋಗ್ತಿರಾ..?’ ಎಂದ.
ಆ ಜಾಗ ಯಾವುದೆಂದೇ ಗೊತ್ತಿರದ ನಾನು ಇಲ್ಲ ಎಂದೆ. ಹುಡುಗನ ಮುಖ ಏನನ್ನೋ ಕೇಳುವಂತೆ ಚಡಪಡಿಸುತ್ತಿತ್ತು. ಮುಖದಲ್ಲಿ ಆತಂಕ ಇತ್ತು. ಅಷ್ಟರಲ್ಲಿ ಕೆಟಿ ಯಾವ ದರ್ಬೆಗುಂಡಿಯೋ ಎಂದು ಆತನನ್ನೇ ಕೇಳಿದರು. ಅವನು ಮುಖ ಬಾಡಿತ್ತು. ಅವನು ಮಾತನಾಡಲಿಲ್ಲ.
ಈ ನಡುವೆ ಸ್ವೀಟ್ ತಂದ ಡ್ರೈವರ್ ಕಾರು ಸ್ಟಾರ್ಟ್ ಮಾಡಿದ. ಕೆ.ಟಿ. ಎಂದಿನಂತೆ ತುಟಿ ತೆರೆದು ಒಳಗೆ ಇಟ್ಟುಕೊಂಡವರೇ ಏನನ್ನಿಸಿತೋ ಏನೋ ಆ ಹುಡುಗನತ್ತ ನೋಡಿ ‘ಲೋ ಬಾರೋ ಇಲ್ಲಿ’ ಎಂದರು. ಅವನು ತಕ್ಷಣ ಓಡಿ ಬಂದ. ಜೋಬಿನಿಂದ ನೂರು ರೂ. ತೆಗೆದು ನಡಿ ಎಂದರು. ಹುಡುಗನ ಮುಖ ಅರಳಿತು.
ಒಮ್ಮೆ ಆತನ್ನನು ನೋಡಿದ ಕೆಟಿ “ಎನಫ್ ಕಣೋ ಅವನ ನಗು ಮುಖ ನೋಡಿದ್ಯಲ್ಲ. ಸಾಕು ಇಷ್ಟೆ ಏನು ಕಷ್ಟದಲಿದ್ದನೋ ಪಾಪ”. ಕೆಟಿ ಗೆ ಕಾಣಿಸಿದ ಹುಡುಗನ ಆ ನೋವಿನ ಮುಖ ನಮಗೆ ಕಾಣಿಸದಿದ್ದ ಕಂಡು ನನಗೆ ಒಂದು ಕ್ಷಣ ಕೀಳರಿಮೆ ಬಂದು ಯೋಚಿಸುವಂತೆ ಮಾಡಿತು.
ಹಾಗೆ ಮುಂದೆ ಸಾಗುತ್ತಾ ಬಲಬದಿಯ ರಸ್ತೆ ಯೊಂದನ್ನು ತೋರಿಸಿ “ಇಲ್ಲೊಂದು ಮಜಾ ಇತ್ತು ಕಣಯ್ಯಾ. ಹೀಗೆ ಇಲ್ಲಿ ಒಮ್ಮೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದೆ. ಆಗೆಲ್ಲ ಅಂಬಾಸಿಡರ್ ಮಾತ್ರ ಇದ್ವು. ಸಾರ್ ಈ ದಾರಿ ಚಿಕ್ಕಮಗಳೂರಿಗೆ ಹೋಗುತ್ತೆ ಷಾರ್ಟ್ ಕಟ್ ಅಂದ. ಸರಿ ನೋಡೇ ಬಿಡೋಣ ಎಂದು ಹೊರಟೆವು. ಹೋಗ್ತೀವಿ ಬರಿ ಅಪ್ಪು ಕಣೋ. ಕಾರ್ ಬೇರೆ ಹತ್ತಂಗಿಲ್ಲ ಸಾಕಾಗಿ ಹೋಯ್ತು. ನಾನು ಕಾರ್ ಇಳಿದು ವಾಪಾಸ್ ಬಾರದಿರಲು ಚಪ್ಪಡಿ ಕಲ್ಲು ಹಿಡಿದುಕೊಂಡು ಹಿಂದೆ ಕಲ್ ಇಡೋದು, ಡ್ರೈವರ್ ಹತ್ಸದು, ಸಾಕಾಗಿ ಹೋಯ್ತು ಕಣಯ್ಯ. ಹೇಳ್ದನ ಬೈಕೊಂಡು ಹೋದ್ವಿ. ಆಮೇಲೆ ಒಳ್ಳೆ ದಾರಿ ಸಿಕ್ತು ಕಣೋ. ಆಮೇಲೆ ತೂ ಬೈದ್ವಲ್ಲ ಅಂದ್ಕೊಂಡ್ವಿ”.
ಸ್ಮಾರಕ ಮಾಡುವ ಸಂದರ್ಭ ತಿಂಗಳುಗಟ್ಟಲೆ ಈ ಭಾಗದಲ್ಲಿ ನಿರಂತರವಾಗಿ ಓಡಾಡಿದ್ದನ್ನು ನೆನಪಿಸಿಕೊಂಡರು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


