ಕನಸು ಕಳೆದು ಹೋಯಿತು

ಬೆಳ್ಳಂಬೆಳಗ್ಗೆಯೇ ಕನಸು ಕದ ತಟ್ಟಿದಾಗ
ಕಣ್ಣುಜ್ಜುತ್ತಾ ಬಾಗಿಲು ತೆರೆದೆ
ಸರಹದ್ದಿನಾಚೆಯಿಂದ
ಕೆಲ ಮನುಷ್ಯರು ಬಂದಿದ್ದು ಕಂಡಿತು

ಅವರ ಕಣ್ಣುಗಳಲ್ಲಿ ಕನಸೇ ಇರಲಿಲ್ಲ
ಅವರ ಮುಖಗಳು ಧೂಳಿನಿಂದ ಕಳೆಗೆಟ್ಟಿದ್ದವು
ಅವರನ್ನು ಮುಖ ಕೈಕಾಲು ತೊಳೆಯಲು ಹೇಳಿ
ಅಂಗಳದಲ್ಲಿ ಕೂಡಿಸಿದೆ

ಪಟಪಟನೆ ಒಲೆಹಚ್ಚಿ ರೊಟ್ಟಿಗಳನ್ನು ಸುಟ್ಟೆ
ಹಿಂದಿನ ವರ್ಷದ ಫಸಲಿನ ಬೆಲ್ಲವನ್ನು
ಪುಟ್ಟಪುಟ್ಟ ಗಂಟುಗಳಲ್ಲಿ ಕಟ್ಟಿಕೊಂಡು
ನನ್ನ ಅತಿಥಿಗಳು ಜೊತೆಯಲ್ಲಿ ತಂದಿದ್ದರು

ಕಣ್ಣುಗಳೂ ಪಟಕ್ಕನೆ ತೆರೆದುಕೊಂಡವು
ಮನೆಯಲ್ಲಿ ಯಾರೂ ಇರಲಿಲ್ಲ
ಒಲೆಯನ್ನು ಮುಟ್ಟಿನೋಡಿದೆ
ಅದು ಇನ್ನೂ ಬೆಚ್ಚಗಿತ್ತು
ನಾಲಿಗೆ ಬೆಲ್ಲದ ರುಚಿಯನ್ನು
ಇನ್ನೂ ಚಪ್ಪರಿಸುತ್ತಿತ್ತು…

ಅದೊಂದು ಕನಸಾಗಿತ್ತು!
ಬಹುಷಃ ಕನಸೇ ಆಗಿತ್ತು!
ಅಲ್ಲಿ… ಸರಹದ್ದಿನಾಚೆಯಲಿ
ನಿನ್ನೆ ರಾತ್ರಿ ಗುಂಡುಗಳು ಸಿಡಿದವಂತೆ

ನನ್ನ ಕೆಲವು ಕನಸುಗಳು
ಕಳೆದೇಹೋದವು…

ಒಂದು ಆತ್ಮಹತ್ಯೆ

ಆ ಕವಿ ಮಹಾಮೌನಿಯಂತೆ ಕಾಣುತ್ತಿದ್ದ
ಆದರೆ ಹುಚ್ಚು ಹಿಡಿದವನಂತೆ ಮಾತನಾಡುತ್ತಿದ್ದ
ಕಿವಿಗಳನ್ನೇ ಕಣ್ಣಾಗಿಸಿಕೊಂಡಿದ್ದ ಅವನು
ಮೌನದ ನಿಶ್ಯಬ್ಧ ಸಂಗೀತವನ್ನು ಆಲಿಸುತ್ತಿದ್ದ
ಚಂದ್ರನ ನೆರಳನ್ನು ಒಟ್ಟಾಗಿಸಿಕೊಂಡು
ಬೆಳಕಿನ ಪಸೆಯನ್ನು ಬೊಗಸೆಯಲ್ಲಿ ತುಂಬಿಕೊಂಡಿದ್ದ
ಮತ್ತವುಗಳನ್ನು ಮೆಲ್ಲನೆ ತೂಗುತ್ತಿದ್ದ
ರಾತ್ರಿಯ ಶುಷ್ಕ ಸಮಯಗಳಲ್ಲಿ
ಕಳೆದುಹೋಗುವಂತಹಾ ಸಮಯದ ಕಾಡಿನಲ್ಲಿ
ಪಕ್ವ ಅಪಕ್ವ ಘಳಿಗೆಗಳನ್ನು ಧೇನಿಸಿ…
ಹೌದು
ಆ ವಿಚಿತ್ರ ಕವಿ ಅಪರಾತ್ರಿಯಲ್ಲಿ ಎದ್ದು
ಮಂಡಿಯೂರಿ ಚಂದ್ರನ ಕೆನ್ನಯನ್ನು ಚುಂಬಿಸುತ್ತಿದ್ದ
ಚಂದ್ರನಿಂದ ಬಿದ್ದು ಜೀವವನ್ನೇ ಕಳೆದುಕೊಂಡುಬಿಟ್ಟ
ಜನ ಹೇಳುತ್ತಾರೆ…
ಕವಿ ಆತ್ಮಹತ್ಯೆ ಮಾಡಿಕೊಂಡ ಎಂದು…

ನಿವೇದಿತಾ ಎಚ್‌. ಯುವರಾಜ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡೇನಿಯಲ್ ಗ್ರೀನ್ಬರ್ಗ್ ನ Free At Last ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕವನಗಳನ್ನು ಬರೆಯುವ ಹವ್ಯಾಸದ ಜೊತೆ ಆಯ್ದ ಒಂದಷ್ಟು ಇಂಗ್ಲಿಷ್ ಕವನಗಳನ್ನು ಅಕನ್ನಡಕ್ಕೆ ಅನುವಾದಿಸಿದ್ದು, ಇವರ ಲೇಖನಗಳು ಮತ್ತು ಪ್ರಬಂಧಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.