ಬೇಗುದಿ

ಅವಳೆದೆಯ ಬೇಗುದಿ
ಆರದೊಲೆಯ ಕೆಂಡದಂತೆ
ದಹಿಸಿದೆ ಭಾವಗಳ ಇಂಚಿಂಚಾಗಿ
ಕಣ್ಣೀರಿನ ಒರತೆಯೂ ಬತ್ತಿರುವಾಗ
ಅವಳಿಗೀಗ ಜಗವೇ ಬರಡು
ಎದೆಯ ಭೂಮಿಯಲ್ಲಿ ಬರಿಯ
ಬಿರುಕುಗಳು…
ಅವಳ ದನಿಯೇಕೋ
ಈಗ ಗುನುಗುಲಾರದು
ಹಾಡಿಗೆ ನೋವು ಬಿಡಿಸಲಾರದ ಅಂಟು
ಆಸೆಯ ಹಕ್ಕಿಗಳು
ಹಾರಲಾರವೀಗ
ಮನವೇ ಪಂಜರದ ಗೂಡು
ಮಾಸಬಾರದು ಮುಖವೆಂದು
ಜನರ ಮೆಚ್ಚಿಸಲು
ಹುಸಿ ನಗೆಯ ಲೇಪಿಸುತ್ತಾಳೆ ತುಟಿಗೆ
ತನ್ನ ನಗುವಿಗೆ‌ ತಾನೇ
ಶಪಿಸಿ ಸುಮ್ಮನಾಗುವಂತೆ
ಪ್ರೀತಿಯ ಮೊಗೆಮೊಗೆದು
ಎರೆದವಳೀಗ ಅನಾಥೆ
ಬದುಕಾಗಿದೆ ಒಂಟಿ ಸಂತೆ
ಬಿಕರಿಗೆ ಭಾವಗಳಿಲ್ಲದೆ….

ಭವ್ಯ ಟಿ.ಎಸ್. ಕನ್ನಡ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ, ಶಿವಮೊಗ್ಗ