ಮಾನವನ ಜೀವನ ಸುಖ-ದುಃಖಗಳ ಮಿಶ್ರಣ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು ಇವೆರಡನ್ನೂ ಸಮಾನವಾಗಿ ಕಾಣಬೇಕೆಂಬುದೇ ಬೇವು-ಬೆಲ್ಲ ಸೇವನೆಯ ಸಂಕೇತ. ಭಗವದ್ಗೀತೆಯಲ್ಲಿಯೂ ಸಹ “ಸುಖದುಃಖೇ ಸಮೇಕೃತ್ವಾ” ಎಂದು ಉಪದೇಶಿಸಲಾಗಿದೆ. ಕೆಲವರ ಜೀವನದಲ್ಲಿ ಬೆಲ್ಲ ಹೆಚ್ಚಾಗಿರಬಹುದು. ಆದರೂ ಈ ದ್ವಂದ್ವಗಳನ್ನು ಸಂಭ್ರಮದಿಂದಲೇ ಸ್ವೀಕರಿಸಬೇಕು. ಬೇವು ದುಃಖದ ಸಂಕೇತವಾದರೆ ಬೆಲ್ಲ ಸುಖದ ಸಂಕೇತ. ಇದನ್ನು ಸಮಪ್ರಮಾಣದಲ್ಲಿ ಸ್ವೀಕರಿಸಬೇಕು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

“ನವ ಸಂವತ್ಸರ ಭೂಮಿಗೆ ಬಂದು
ಸುರಲೋಕದ ಸುರನದಿಯಲಿ ಮಿಂದು
ನವ ಸಂವತ್ಸರ ಭೂಮಿಗೆ ಬಂದು
ಕರೆಯುತ್ತಿದೆ ನಮ್ಮನ್ನು ಇಂದು
ಮಾವಿನ ಬೇವಿನ ತೋರಣಕಟ್ಟಿ
ಬೇವು ಬೆಲ್ಲಗಳ ಒಟ್ಟಿಗೆಕುಟ್ಟಿ
ಜೀವನವೆಲ್ಲ ಬೇವು ಬೆಲ್ಲ…”

ಎಂಬ ಕುವೆಂಪು ಸಾಲಿನಂತೆ ಮತ್ತೊಂದು ಸಂವತ್ಸರದ ಸ್ವಾಗತಕ್ಕೆ ನಾವೆಲ್ಲ ಸಜ್ಜಾಗಿದ್ದೇವೆ. ಏಪ್ರಿಲ್ 9 ಯುಗಾದಿ ಹಬ್ಬ ಅಂದು ನಾವು ಶೋಭನ ಸಂವತ್ಸರಧಾಟಿ ಕ್ರೋಧಿ ಸಂವತ್ಸರಕ್ಕೆ ಕಾಲಿಡುತ್ತೇವೆ. ಇದು 60 ಸಂವತ್ಸರಗಳಲ್ಲಿ 38 ನೆಯದು. ಇಂತಹ ಸಂವತ್ಸರ ಚಕ್ರವು ಹಿಂದೆಷ್ಟೋ ಕಳೆದುಹೋಗಿವೆ. 60 ಸಂವತ್ಸರಗಳಿಗೆ ಒಂದು ಸಂವತ್ಸರಚಕ್ರ ಮುಕ್ತಾಯವಾಗುತ್ತದೆ. ಪ್ರಭವನಾಮ ಸಂವತ್ಸರ ಮೊದಲನೆಯದಾದರೆ ಅಕ್ಷಯ ಸಂವತ್ಸರ ಕಡೆಯದು.

“ಚೈತ್ರ ಬಂದಿಹಳು
ಚೈತನ್ಯ ತಂದಿಹಳು
ಗಾನಕೋಗಿಲೆ ಕೂಗಿ ಕರೆದಿದೆ
ಚೈತ್ರಮಾಸವನಿಲ್ಲಿಗೆ”

ಎಂದು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಸ್ಥಾನವಿರುವ ಯುಗಾದಿ ಬಗ್ಗೆ ಒಂದಷ್ಟು ಮಾತು. ಭಾರತೀಯರ ಹೊಸ ವರ್ಷ ಯುಗಾದಿಯಿಂದಲೇ ಪ್ರಾರಂಭವಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ತೀವ್ರವಾಗಿರುವ ಈ ದಿನಮಾನಗಳಲ್ಲಿ ಭಾರತೀಯ ಹಬ್ಬಗಳ ಹಾಗು ಅವುಗಳ ಸಾಂಸ್ಕೃತಿಕ ಆಯಾಮಗಳನ್ನು ಅವಲೋಕನ ಮಾಡುವುದು ಮುಖ್ಯವಾಗಿದೆ.

ಭಾರತೀಯ ಹಬ್ಬಗಳಿಗೆ ಪುರಾಣ ಪರಂಪರೆಯೇ ಪ್ರಧಾನವಾಗಿದೆ ಅದರಲ್ಲಿ ಯುಗಾದಿ ಹಾಗು ಸಂಕ್ರಾಂತಿಯಂತಹ ಹಬ್ಬಗಳು ಪುರಾಣದಕಥೆ ಅವಲಂಬನೆಯ ಜೊತೆಗೆ ಕಾಲಘಟ್ಟದ ಪ್ರಮುಖ ತಿರುವುಗಳಾಗಿ ಬೆಳೆದುಕೊಂಡು ಬಂದಿವೆ ‘ಯುಗ’ ಮತ್ತು ‘ಆದಿ’ ಸೇರಿ ಯುಗಾದಿ ಆಗಿದೆ. ಯುಗಾದಿ ಮೂಲತಃ ಸಂಸ್ಕೃತ ಪದ. ಇದರ ತದ್ಭವವೇ ‘ಉಗಾದಿ’. ಯುಗವೆಂದರೆ ಕಾಲ, ವರ್ಷ ಇಂತಹ ವರ್ಷದ ಆರಂಭವೇ ಯುಗಾದಿ ಎನ್ನಬಹುದು.

“ಯಗಾದಿ”ಯನ್ನು ಆಯನಗಳ ಜೋಡಿ ಎಂದು ಕರೆಯವುದು’ಯುಗ’ ಪದಕ್ಕೆ ‘ಜೋಡಿ’ ‘ಜೊತೆ’ ಎಂಬ ಅರ್ಥವೂ ಇದೆ. ಹಾಗಿದ್ರೆ ಯಾವ ಜೊತೆ ಎಂದು ಯೋಚಿಸಿದರೆ ನಮಗೆ ತಕ್ಷಣಕ್ಕೆ ‘ಉತ್ತರಾಯಣ’ ಮತ್ತು ‘ದಕ್ಷಿಣಾಯನಗಳೆಂಬ’ ಎರಡು ಆಯನಗಳ ಜೋಡಿ ನೆನಪಾಗುತ್ತದೆ. ಈ ಆಯನಗಳ ಜೋಡಿ ಕಳೆದು ಹೊಸ ಜೋಡಿ ಪ್ರಾರಂಭವಾಗುವುದರಿಂದ ಇದು ಯುಗಾದಿ.

‘ಯುಗ’ ಪದಕ್ಕಿರುವ ಮತ್ತೊಂದು ಅರ್ಥ ದ್ವಂದ್ವ ಅರ್ಥಾತ್ ಸುಖ-ದುಃಖಗಳೆಂಬ ದ್ವಂದ್ವ. ‘ಯುಗಾದಿ’ ಆಡು ಮಾತಿನಲ್ಲಿ ‘ಉಗಾದಿ’ ಆಗಿದೆ. ಚೈತ್ರ ಶುದ್ಧ ಪಾಡ್ಯದಂದೇ ಏಕೆ ಈ ಹಬ್ಬ ಆಚರಿಸಬೇಕು? ಅದಕ್ಕೂ ಕಾರಣವಿದೆ ಕೇಳಿ; ಜಗತ್ತು ಸೃಷ್ಠಿಯಾದದ್ದು ಚೈತ್ರ ಶುದ್ಧ ಪಾಡ್ಯದಂದೇ ಎಂದು ಬ್ರಹ್ಮಾಂಡ ಪುರಾಣದಲ್ಲಿ ವ್ಯಕ್ತವಾಗಿದೆ. ಬ್ರಹ್ಮಚೈತ್ರ ಮಾಸದ ಶುಕ್ಲಪಕ್ಷದ ಪ್ರಥಮ ದಿನದಂದು ಸೂರ್ಯೋದಯದ ವೇಳೆಯಲ್ಲಿ ಗ್ರಹ, ಋತು, ತಿಂಗಳು ಅಧಿಪತಿಗಳನ್ನೊಳಗೊಂಡಂತೆ ಸಮಸ್ತ ಲೋಕವನ್ನು ಸೃಷ್ಠಿಸಿದರು, ಕಾಲದಗಣನೆಯನ್ನೂ ಸಹ ಅಂದಿನಿಂದಲೇ ಆರಂಭಿಸಲಾಯಿತು. ಈ ಕಾರಣದಿಂದಾಗಿ ಚೈತ್ರ ಶುದ್ಧ ಪಾಡ್ಯವೇ ವರ್ಷದ ಮೊದನ ದಿನವೆಂದು ಪರಿಗಣನೆಯಾಯಿತು.

ಪ್ರಪಂಚದಲ್ಲಿ ಯುಗಾದಿ ಹಬ್ಬದ ಆಚರಣೆ ತುಂಬಾ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಕ್ರಿ.ಪೂರ್ವದಲ್ಲಿ ಮೆಸpಟೋಮಿಯಾದಲ್ಲೂ ಯುಗಾದಿ ಆಚರಣೆಯಿತ್ತು ಎಂದು ಹೇಳುವುದಿದೆ. ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು, ಆದಿ ತೀರ್ಥಂಕರನ ಮಗ ಭರತ ದಿಗ್ವಿಜಯ ಸಾಧಿಸಿದ್ದು ಯುಗಾದಿ ದಿನವಾದ್ದರಿಂದ ಜೈನರಿಗೂ ಯುಗಾದಿ ಮಹತ್ವದ ದಿನವೇ.

ಯುಗಾದಿಯ ಮೊದಲ ತಿಂಗಳಿಗೆ ಚೈತ್ರ ಎಂಬ ಹೆಸರು ಬರಲೂ ಕಾರಣವಿದೆ. ಹುಣ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದೊಂದಿಗೆ ಇರುತ್ತಾನೋ ಅದನ್ನು ಅನುಸರಿಸಿ ಆ ತಿಂಗಳನ್ನು ಹೆಸರಿಡುತ್ತಾರೆ. ಚಿತ್ತ ನಕ್ಷತ್ರದಿಂದ ಚೈತ್ರಮಾಸ, ವಿಶಾಖ ನಕ್ಷತ್ರದಿಂದ ವೈಶಾಖ ಮಾಸ, ಜ್ಯೇಷ್ಠಾ ನಕ್ಷತ್ರದಿಂದ ಜ್ಯೇಷ್ಠ ಮಾಸ ಇತ್ಯಾದಿ. ನವಸಂವತ್ಸರದ ಆಗಮದ ದ್ಯೋತಕವೆಂದರೆ ಪ್ರಕೃತಿಯ ಹಸಿರು ಸೀರೆಯನ್ನು ನವ ವಧುವಿನಂತೆ ಮಲ್ಲಿಗೆ ಮಾಲೆ ಮುಡಿದು ಹೂ ಹಣ್ಣುಗಳಿಂದ ತುಂಬಿ ತುಳುಕುತ್ತಿರುತ್ತಾಳೆ. ಮಾವು ಮಲ್ಲಿಗೆಯ ಕಂಪಿನೊಂದಿಗೆ ಬೇವಿನ ಕಂಪು ಸೇರಿಸಿ ಎಲ್ಲೆಡೆಯೂ ಕಾಜಾಣ ಕೋಗಿಲೆಗಳ ಸಡಗರವಿರುತ್ತದೆ. ಮನೆಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಹೆಂಗಳೆಯರು ಸಂಭ್ರಮಿಸುತ್ತಾರೆ. ಎಲ್ಲೆಲ್ಲೂ ಧವನ, ಮರುಗ, ಮೈಸೂರು ಮಲ್ಲಿಗೆಯ ಪರಿಮಳದ್ದೇ.

ಯುಗಾದಿಯ ದಿನ ಉಷಾ ಕಾಲಕ್ಕೆ ಎದ್ದು ತೈಲಾಭ್ಯಂಗ ಮಾಡಿ, ನೂತನ ಪಂಚಾಂಗವನ್ನು ಪೂಜಿಸಿ ನಂತರ ಬೇವು-ಬೆಲ್ಲ ಸ್ವೀಕರಿಸಿ, ಮಂತ್ರಾಕ್ಷತೆ, ಗಂಧ ಇತ್ಯಾದಿಗಳನ್ನು ಪಂಚಾಂಗಕ್ಕೆ ಅರ್ಪಿಸಿ ಸಂವತ್ಸರದ ಫಲ ಕೇಳಬೇಕೆಂಬುದಾಗಿ ಹೇಳುತ್ತಾರೆ. ಯುಗಾದಿ ಅಂದರೆ “ನಿಂಬಕದಳ ಭಕ್ಷಣ” ಯುಗಾದಿ ದಿನ ಆಚರಿಸುವ ಕರ್ತವ್ಯಗಳಲ್ಲಿ ಒಂದು ಅಂದರೆ ಬೇವು-ಬೆಲ್ಲಗಳ ಸೇವನೆ.

ಇದಕ್ಕೇನು ಕಾರಣ? ಅಂದರೆ ಮಾನವನ ಜೀವನ ಸುಖ-ದುಃಖಗಳ ಮಿಶ್ರಣ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು ಇವೆರಡನ್ನೂ ಸಮಾನವಾಗಿ ಕಾಣಬೇಕೆಂಬುದೇ ಬೇವು-ಬೆಲ್ಲ ಸೇವನೆಯ ಸಂಕೇತ. ಭಗವದ್ಗೀತೆಯಲ್ಲಿಯೂ ಸಹ “ಸುಖದುಃಖೇ ಸಮೇಕೃತ್ವಾ” ಎಂದು ಉಪದೇಶಿಸಲಾಗಿದೆ. ಕೆಲವರ ಜೀವನದಲ್ಲಿ ಬೆಲ್ಲ ಹೆಚ್ಚಾಗಿರಬಹುದು. ಆದರೂ ಈ ದ್ವಂದ್ವಗಳನ್ನು ಸಂಭ್ರಮದಿಂದಲೇ ಸ್ವೀಕರಿಸಬೇಕು. ಬೇವು ದುಃಖದ ಸಂಕೇತವಾದರೆ ಬೆಲ್ಲ ಸುಖದ ಸಂಕೇತ. ಇದನ್ನು ಸಮಪ್ರಮಾಣದಲ್ಲಿ ಸ್ವೀಕರಿಸಬೇಕು.

ಬೇವೇ ಏಕೆ? ಮಾವು ಏಕಾಗಬಾರದು? ಎಂಬುದಕ್ಕೂ ಕಾರಣವಿದೆ. ಬಿಲ್ವ, ಅಶ್ವತ್ಥ ಮುಂತಾದ ವೃಕ್ಷಗಳ ಆರಾಧನೆ ನಮ್ಮಲ್ಲಿ ಬಹು ಹಿಂದಿನಿಂದಲೂ ನಡೆದು ಬಂದಿದೆ. ಅಂತಹ ಪೂಜಾರ್ಹ ವೃಕ್ಷಗಳಲ್ಲಿ ಬೇವೂ ಒಂದು. ಬೇವಿನ ಚಿಗುರು, ಹೂ, ಎಲೆ, ತೊಗಟೆ, ಬೀಜ, ಎಣ್ಣೆ ಬೇರು ಕಾಂಡಗಳು ರೋಗಪರಿಹಾರಕ ಮತ್ತು ಶಕ್ತಿವರ್ಧಕವೆಂದು ಆಯುರ್ವೇದದಲ್ಲಿ ಉಕ್ತವಾಗಿದೆ.

ಯುಗಾದಿ ದಿನ ಬೇವಿನ ಎಸಳುಗಳನ್ನು ಭಕ್ಷಿಸುವಾಗ ಹೇಳು ಶ್ಲೋಕವೇ ಇದಕ್ಕೆ ಸಾಕ್ಷಿ

ಶತಾಯುರ್ವಜ್ರದೇಹಾಯ
ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಂಕಂದಳ ಭಕ್ಷಣಂ

ಬೇವಿನೊಂದಿಗೆ ಬೆಲ್ಲವೇ ಏಕೇ? ಇದಕ್ಕೂ ಆಯುರ್ವೇದೀಯ ಕಾರಣವಿದೆ. ಸಿಹಿ ಸುಖದ ಸಂಕೇತ. ಆದರೆ ಸಕ್ಕರೆಯೂ ಸಿಹಿಯೇ ಅಲ್ಲವೇ? ಸಕ್ಕರೆ ‘ಶರ್ಕರ’ ಎಂಬ ಹೆಸರಿನಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ.

“ತಾನಾಃ, ಶಿವಾಃ ಶರ್ಕರಾಃ ಸಂತು ಸರ್ವಾಃ” ಎಂಬ ವೇದೋಕ್ತವಚನವೇ ಇದಕ್ಕೆ ಸಾಕ್ಷಿ ಆದರೂ ಬೆಲ್ಲವನ್ನೇ ಏಕೆ ಬಳಸಬೇಕು ಎಂದರೆ ಆರೋಗ್ಯದ ದೃಷ್ಠಿಯಿಂದ ಇಲ್ಲಿ ಸಕ್ಕರೆಗಿಂತಲೂ ಬೆಲ್ಲವೇ ಶ್ರೇಷ್ಠ, ಬೆಲ್ಲ ಆಯಾಸ ನಿವಾರಕ ಹಾಗು ಕ್ರಿಮಿನಾಶಕ. ಸಕ್ಕರೆಗೆ ಈ ಗುಣವಿಲ್ಲ. ಹಾಗಾಗಿ ಸಂಕ್ರಾಂತಿಯಲ್ಲೂ ಎಳ್ಳಿನ ಸಂಗಡ ಬೆಲ್ಲವನ್ನೇ ಮಿಶ್ರಣ ಮಾಡುವ ಪದ್ಧತಿ ಇಲ್ಲಿ ಉಲ್ಲೇಖನೀಯ. ಶತಾವರಿಗುಡ, ಶುಂಠಿಗುಡ, ಚ್ಯವನಪ್ರಾಶ, ಕೂಸ್ಮಾಂಡ ಲೇಹ್ಯ. ದ್ರಾಕ್ಷಾದಿರಸಾಯನ ಇತ್ಯಾದಿ ಆಯುರ್ವೇದಿಯ ಔಷಧಿಗಳಲ್ಲಿ ಬೆಲ್ಲವೇ ಮುಖ್ಯ ಸಾಮಾಗ್ರಿಯಾಗಿರುತ್ತದೆ. ವರ್ಷದ ಹಬ್ಬಗಳಿಗೆ ಮುನ್ನುಡಿ ಬರೆಯುವ ಯುಗಾದಿ ನಿಸರ್ಗದ ಮರು ಹುಟ್ಟನ್ನು ಸಂಕೇತಿಸುತ್ತದೆ. ಬೇಂದ್ರೆಯವರ ಗೀತೆ ಹೇಳುವಂತೆ…

“ಯುಗಯುಗಾದಿ ಳೆದರೂ ಯುಗಾದಿ ಮರಳಿ ಬರುತಿದೆ
ಹೊ ವರುಷಕೆ ಹೊಸ ಹರುಷವ ಹೊಸತು ಹೊಸತು
ಹೊಸತು ತರುತಿದೆ”

ನಿದ್ದೆಗೊಮ್ಮೆ ನಿತ್ಯ ಮರಣ. ಎದ್ದ ಸಲ ನವೀನ ಜನನ ಸಾಲುಗಳನ್ನು ಕೇಳಿದಷ್ಟು ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನ್ನಿಸುತ್ತದೆ. ಚಂದ್ರನ ಚಲನೆಯಗತಿಯನ್ನು ಆಶ್ರಯಿಸಿ ಚಾಂದ್ರಮಾನಯುಗಾದಿ ಸೂರ್ಯನ ಚಲನೆಯಗತಿಯನ್ನು ಆಶ್ರಯಿಸಿ ಸೌರಮಾನ ಯುಗಾದಿ ಎಂದು ನಿರ್ಧಾರ ಮಾಡುವುದಿದೆ. ಕರ್ನಾಟಕದಲ್ಲಿ ಚೈತ್ರ ಶುದ್ಧ ಪ್ರತಿಪದೆಯಿಂದ ಫಾಲ್ಗುಣ ಮಾಸದ ಅಮವಾಸ್ಯೆಯವರೆಗೆ ಹನ್ನೆರಡು ತಿಂಗಳುಗಳ ಅವಧಿ ಚಾಂದ್ರವತ್ಸರವೆನಿಸುತ್ತದೆ. ಕರ್ನಾಟಕ ಆಂಧ್ರಗಳಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆಯಾದರೆ ತಮಿಳುನಾಡು ಕೇರಳಗಳಲ್ಲಿ ಸೌರಮಾನ ಯುಗಾದಿಯ ಆಚರಣೆ… ತುಳುನಾಡಿನವರು ಬಿಸು ಹಬ್ಬ ಎಂಬ ಹೆಸರಿನಿಂದ ಸೌರಮಾನ ಯುಗಾದಿಯನ್ನೇ ಆಚರಿಸುತ್ತಾರೆ.

ಭಾರತೀಯ ಹಬ್ಬಗಳಿಗೆ ಪುರಾಣ ಪರಂಪರೆಯೇ ಪ್ರಧಾನವಾಗಿದೆ ಅದರಲ್ಲಿ ಯುಗಾದಿ ಹಾಗು ಸಂಕ್ರಾಂತಿಯಂತಹ ಹಬ್ಬಗಳು ಪುರಾಣದಕಥೆ ಅವಲಂಬನೆಯ ಜೊತೆಗೆ ಕಾಲಘಟ್ಟದ ಪ್ರಮುಖ ತಿರುವುಗಳಾಗಿ ಬೆಳೆದುಕೊಂಡು ಬಂದಿವೆ ‘ಯುಗ’ ಮತ್ತು ‘ಆದಿ’ ಸೇರಿ ಯುಗಾದಿ ಆಗಿದೆ.

ಯುಗಾದಿಯನ್ನು ಶ್ರೀಮಂತ ಬಡವ ಎಂಬ ಭೇದವಿಲ್ಲದೆ, ಪಟ್ಟಣಿಗ ಹಳ್ಳಿಗನೆಂಬ ತಾರತಮ್ಯವಿಲ್ಲದೆ ಎಲ್ಲರೂ ಆಚರಿಸುತ್ತಾರೆ. ಅನಕ್ಷರಸ್ಥರು ಅವರು ಕಂಡ ಯುಗಾದಿಗಳ ಆಧಾರದ ಮೇಲೆ ತಮ್ಮ ವಯಸ್ಸನ್ನು ಹೇಳುವುದಿತ್ತು.
ಯುಗಾದಿಯನ್ನು ಕುರಿತಂತೆ ಜನಪದ ಮಹಿಳೆ

“ಊರಾಗ ಉಗಾದಿ ಉಂಡ್ಹೋಗ ಅಣ್ಣಯ್ಯ
ಶಾವೀಗಿ ಆಗಿ ಗುಳಿಗ್ಯಾಗಿ! ಮ್ಯಾಲೀನ
ಬಾನ ಬಸಿಯೋದು ತಡವಿಲ್ಲ…” ಎಂದು ಹೇಳಿಕೊಳ್ಳುತ್ತಾಳೆ.

ಇಲ್ಲಿ ಹಬ್ಬದಲ್ಲಿ ಮಾಡುವ ಅಡುಗೆಗಳ ಪರಿಚಯವೂ ಆಗುತ್ತದೆ.

ಬೇವಿನ ಹೂವಿನ ಹುಡಿಯ ಗಂಧ
ಮಾವಿನ ಮಿಡಿಗಾಯಿ ಬಲು ಚಂದ ಎಂಬಂತೆ ಕರ್ನಾಟಕದಲ್ಲಿ ಬೇವಿನ ಹೂಗಳನ್ನು ಸೇರಿಸಿ ಚಟ್ನಿಯನ್ನು ಮಾಡುವುದಿದೆ.

ಬೇಳೆ ಹೋಳಿಗೆ
ಹೋಳಿಗೆ ಸಾಂಬಾರು
ಮಾವಿನ ಕಾಯಿ ಚಿತ್ರಾನ್ನ
ಹುಳಿ ಅನ್ನ… ಎಂತಹವರ ಬಾಯಲ್ಲೂ ನೀರೂರಿಸುತ್ತವೆ.

ಆಂಧ್ರದಲ್ಲಿ ಬೇವು-ಬೆಲ್ಲ ಹುಣಸೆಹುಳಿ, ಖಾರ ಸೇರಿಸಿ ಪಚಡಿ ಮಾಡಿ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಕೊಡುತ್ತಾರೆ. ಇಲ್ಲಿ ಸೇರುವ ಷಡ್ರಸಗಳು ಜೀವನದ ಅಂಶಗಳನ್ನು ಸಂಕೇತಿಸುತ್ತದೆ. ವಸಂತ ಋತುವಿನ ಕಾಯಿಲೆಗಳನ್ನು ತಡೆಯಲು ಬೇವು-ಬೆಲ್ಲ ಅತ್ಯಂತ ಸಹಕಾರಿ. ಆಯುರ್ವೇದದ ಪ್ರಕಾರ ಮುಂಜಾನೆ ಖಾಲಿ ಹೊಟ್ಟೆಗೆ ಬೇವನ್ನು ತಿಂದರೆ ಕಫಕ್ಕೆ ಸಂಬಂಧಿಸಿದ ತೊಂದರೆಗಳು ಗುಣವಾಗುತ್ತವೆ ಎನ್ನುತ್ತಾರೆ. ಯುಗಾದಿ ಆರಂಭದಿಂದ ಎರಡು ತಿಂಗಳು ಕಹಿ ಮತ್ತು ಒಗರುಗಳಿಂದ ಕೂಡಿದ ತರಕಾರಿಗಳನ್ನು ಸೇವಿಸಬೇಕು ಎನ್ನುತ್ತಾರೆ. ಹಾಗಲ, ಹೀರೆ, ಪಡುವಲ, ಸೋರೆ, ಒಂದೆಲಗ(ಬ್ರಾಹ್ಮಿ) ಮೆಂತೆ, ಬೂದಿಕುಂಬಳ ಇತ್ಯಾದಿ ಇತ್ಯಾದಿ… ಅದರಲ್ಲೂ ಹಾಗಲಕಾಯಿ, ಹೀರೆಕಾಯಿ, ಪಡುವಲಕಾಯಿಗೆ ಮೊದಲ ಆದ್ಯತೆ.

ಈ ಋತುವಿನಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ರವ ಹೆಚ್ಚಾಗುತ್ತದೆ. ಹೇಗೆ ಗಿಡ ಮರಗಳು ಚಿಗುರುತ್ತವೆಯೋ ಹಾಗೆ ನಮ್ಮ ಚರ್ಮವೂ ಲವಲವಿಕೆಯನ್ನು ಪಡೆದುಕೊಳ್ಳುತ್ತದೆ. ಅಂಥ ಚರ್ಮಕ್ಕೆ ಶ್ರೀಗಂಧ, ಲಾವಂಚ, ಅರಿಶಿಣ ಮುಂತಾದವುಗಳಿಂದ ತಯಾರಿಸಿದ ಚೂರ್ಣದಿಂದ ಸ್ನಾನ ಮಾಡಬೇಕೆನ್ನುತ್ತಾರೆ. ಇಲ್ಲವೆ ಬೇವಿನ ಎಲೆಗಳನ್ನು ಅದರ ತೊಗಟೆ ಸಹಿತ ಬಿಸಿನೀರಿನಲ್ಲಿ ಹಾಕಿ ಸ್ನಾನ ಮಾಡಿದರಂತೂ ಚರ್ಮಕಾಯಿಲೆಗಳಿಗೆ, ಬೆನ್ನುನೋವಿನಂತಹ ಸಮಸ್ಯೆಗಳಿಗೆ ರಾಮಬಾಣ ಎನ್ನುತ್ತಾರೆ ಹಿರಿಯರು.

ಈ ಋತುವಿನಲ್ಲಿ ಬಿಸಿಲಿನ ಝಳ ಹೆಚ್ಚಾಗುವ ಕಾರಣದಿಂದ ಮೊಸರಿನ ಬದಲು ಮಜ್ಜಿಗೆಯನ್ನು, ಕುದಿಸಿ ಆರಿಸಿದ ನೀರನ್ನು ಯಥೇಚ್ಛವಾಗಿ ಸೇವಿಸಬೇಕು. ಇದರಿಂದ ನಿರ್ಜಲೀಕರಣ ಜೀರ್ಣಾಂಗಕ್ಕೆ ಸಂಬಂಧಿಸಿದ ವ್ಯಾದಿಗಳನ್ನು ದೂರವಿಡಬಹುದು ಎನ್ನುತ್ತಾರೆ.

‘ಉಗಾದಿ ಉಂಡು ಚಂದ್ರನನ್ನು ನೋಡಬೇಕು’ ಎಂಬ ಮಾತು ಬಳಕೆಯಲ್ಲಿದೆ. ‘ಯುಗಾದಿ’ ಈ ಪದ ಚಲನಶೀಲತೆಗೂ ನಾಂದಿ ಹಾಡುತ್ತದೆ. ಮಹಾಲಯ ಅಮವಾಸ್ಯೆ ಶರನ್ನವರಾತ್ರಿ ಸಂಕೇತಿಸಿದರೆ ಯುಗಾದಿ ಅಮವಾಸ್ಯೆ ವಸಂತ ನವರಾತ್ರಿಯನ್ನು ಸಂಕೇತಿಸುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ಊರ ಉತ್ಸವ, ದೇವತೆಗಳ ಉತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತದೆ. ರಥೋತ್ಸವ, ಮಹನೀಯರ ಜಯಂತಿಗಳ ಪರ್ವ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಹೋಳಿ ಹುಣ್ಣಿಮೆ ಕಳೆದು 15 ದಿನಕ್ಕೆ ಉಗಾದಿ ಹಬ್ಬ. ಉಗಾದಿ ಹಬ್ಬ ಕಳೆದು ಒಂಭತ್ತನೇ ದಿನಕ್ಕೆ ಶ್ರೀ ರಾಮನವಮಿ. ಮುಂದಿನ ಅಮವಾಸ್ಯೆ ಕಳೆದು ಮೂರನೆ ದಿನಕ್ಕೆ ಅಕ್ಷಯತದಿಗೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬಾಗೀವಾಳು ಗ್ರಾಮದಲ್ಲಿ ಯುಗಾದಿ ದಿನವೇ ಕರಗ ಮಹೋತ್ಸವ ಜರುಗುತ್ತವೆ. ಉಳಿದಂತೆ ನಾಡನಾದ್ಯಂತ ದೊಣ್ಣೆವರಸೆ, ತೆಂಗಿನಕಾಯಿ ಒಡೆಯುವ ಸ್ಪರ್ಧೆ ಮುಂತಾದ ಗ್ರಾಮೀಣ ಕ್ರೀಡೆಗಳು ಜರಗುತ್ತವೆ.

ವಸಂತಋತು ಎಂದರೆ “ಋತುಗಳ ರಾಜ ಅದಕ್ಕೆ ವಸಂತ ಬಂದ ಋತುಗಳ ರಾಜ ತಾ ಬಂದ” ಎಂದು ಹಾಡಿರುವುದು. ಈ ಮಾಸ ಆಸೆ ಚೈತನ್ಯಗಳ ಹೊರೆಯನ್ನೇ ಹೊತ್ತುತ್ತಿರುತ್ತದೆ. ಹೊಸ ಸಂವತ್ಸರದಲ್ಲಿ ರೈತರು ಹೊನ್ನಾರು ಉತ್ಸವದ ಹೆಸರಿನಲ್ಲಿ ಬೇಸಾಯ ಪ್ರಾರಂಭಿಸುವುದೂ ಇದೆ. ಇದಕ್ಕೆ ಚಿನ್ನದ ಉಳುಮೆ, ಮೊದಲ ಉಳುಮೆ ಎಂತಲೂ ಕರೆಯುತ್ತಾರೆ.

ದನಕರುಗಳಿಗೆ ಶೃಂಗಾರ ಮಾಡಿ ನೇಗಿಲು, ನೊಗ ಮುಂತಾದ ಕೃಷಿ ಪರಿಕರಗಳನ್ನು ಒಪ್ಪವಾಗಿ ಜೋಡಿಸಿ ಅದಕ್ಕೆ ಪೂಜೆ ಮಾಡಿ ಮಾಡಿದ ಹಬ್ಬದಡುಗೆಯನ್ನು ಜಾನುವಾರುಗಳಿಗೆ ತಿನ್ನಿಸುವುದಿದೆ, ನಂತರ ಊರ ಪ್ರಮುಖರು ಮೆರವಣಿಗೆಯಲ್ಲಿ ಹೋಗಿ ಭೂದೇವಿಗೂ ಪೂಜೆ ಸಲ್ಲಿಸಿ ಉಳುಮಗೆ ನಾಂದಿಹಾಡುತ್ತಾರೆ. ಇಲ್ಲಿ ಸೆಗಣಿಯ ಬೆನವನನ್ನುಇಟ್ಟು ನೇಗಿಲು ಮತ್ತು ಭೂಮಿಯನ್ನು ಪೂಜಿಸುತ್ತಾರೆ. ಫಲವತ್ತತೆಯ ಸೆಗಣಿ, ಸಸ್ಯ ಸಂಕುಲದ ಸಂಕೇತ ಗರಿಕೆ ಈ ಎರಡರ ಸಮತೂಕದ ಸಂಯೋಜನೆ, ಹೊಸವರ್ಷದ ಹೊಸ ಬೇಸಾಯಕ್ಕೆ ನಾಂದಿಯಾಗುತ್ತದೆ. ಹೊಸಮನೆ ಕಟ್ಟಲು ಪ್ರಾರಂಭಿಸುವವರು ಇದೇ ದಿನ ಗುದ್ದಲಿ ಪೂಜೆ ಪ್ರಾರಂಭಿಸುತ್ತಾರೆ. ದಾನಕೊಡುವ ಪದ್ಧತಿ, ವರ್ಷತೊಡಕು ಆಚರಣೆ ಸಂಪೂರ್ಣ ವರ್ಷದತೊಡಕು ನಿವಾರಿಸಲಿ ಎಂದು ಕೊಳವುದು. ಪಂಚಾಂಗ ಅಂದರೆ ವಾರತಿಥಿ, ನಕ್ಷತ್ರ, ಕರಣಯೋಗ ಮಳೆ ಬೆಳೆ, ಧನಾಧಿಪತಿ, ಸಸ್ಯಾಥಿಪತಿ, ಗ್ರಹಣ, ಜಾತ್ರೆ, ಉತ್ಸವ. ಮದುವೆ, ಮುಂಜಿ, ನಾಮಕರಣ ಇತ್ಯಾದಿಗಳಿಗೆ ನಾವು ಯುಗಾದಿಯ ಹೊಸ ಪಂಚಾಂಗವನ್ನೇ ಆಶ್ರಯಿಸತ್ತೇವೆ.

ಮತೊಮ್ಮೆ ಯುಗಾದಿ ಬಂದಿದೆ… ಮಾವು ಬೇವುಗಳ ಸಂಚಯನದೊಂದಿಗೆ ನವವರ್ಷ ಆಚರಿಸೋಣ. ಹೊಸ ಉಲ್ಲಾಸದಿಂದ ನವ ಯುಗಾದಿಯನ್ನು ಸ್ವಾಗತಿಸೋಣ.