Advertisement
ಜಿತೇಂದ್ರ ಬೇದೂರು ಬರೆದ ‘ಆಷಾಢ’ದ ಕವಿತೆ

ಜಿತೇಂದ್ರ ಬೇದೂರು ಬರೆದ ‘ಆಷಾಢ’ದ ಕವಿತೆ

ಆಷಾಢದ ಚಿತ್ರಗಳು

ಶೃತಿ ಹಿಡಿದು ಸುರಿಯುತ್ತಿದೆ ಆಷಾಢದ ಮಳೆ,
ಕಂಬಳಿಯ ತುದಿಯಿಂದ ತೊಟ್ಟಿಕ್ಕುವ ಹನಿಯ ಹಿಮ್ಮೇಳ,
ಹೊಡಸಲಿನ ನಿಗಿ ನಿಗಿ ಕೆಂಡದ ಮೇಲಿನ
ಬೂದಿಯ ಕೆದರುತ ಕುಳಿತ ಅವನು!

ಗೋಡೆ ಮೇಲೆ ತೆವಳುತಿದೆ ಬಸವನಹುಳು,
ಕೊನೆ ಕಾಣದ ಅಂಟು ರೇಖೆಯ ರಂಗವಲ್ಲಿ,
ಬಸವನ ಹುಳುವಿಗೆ ಸೆಡ್ಡು ಹೊಡೆದಂತೆ
ಆಷಾಢವೂ ತೆವಳುತಿದೆ.

ಹೂವಿಲ್ಲ, ಮಂಕಾಗಿದೆ,
ಬೇಲಿ ಸಾಲಿನ ದಾಸವಾಳ,
ಮೂಲೆಯಲ್ಲಿ ಮುರುಟುತಿದೆ
ಒದ್ದೆ ರೆಕ್ಕೆಯ ಒಂಟಿ ಪಾರಿವಾಳ.

ಊರಾಚೆ ಹೊಳೆಯ ತುಂಬಾ
ಕೆಂಪು ನೀರಿನ ಹರಿವು,
ದಂಡೆಯುದ್ದಕ್ಕೂ ನೆನಪುಗಳದೇ ರಾಶಿ.
ನಡುಮನೆಯ ಹಸೆ ಚಿತ್ತಾರ,
ಮುಸಿ ಮುಸಿ ನಕ್ಕಂತೆ ಭಾಸವಾಗುವುದೇಕೆ?

ಒಂದೇ ಸಮನೆ ಸುರಿಯುತಿದೆ
ಆಷಾಡದ ಮಳೆ, ರಚ್ಚೆ ಹಿಡಿದಂತೆ.
ವಿರಹದಿ ತೊಯ್ದ ಆ ಮನಸಿನ ಪ್ರಶ್ನೆ ಒಂದೇ,
ಈ ಆಷಾಢ ಮುಗಿಯುವುದೆಂದು?

ಜಿತೇಂದ್ರ ಬೆದೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರಿನವರು
ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಔಷಧೀಯ ಸಂಸ್ಥೆಯಲ್ಲಿ ಉದ್ಯೋಗ.
ಸಾಹಿತ್ಯದಲ್ಲಿ ಆಸಕ್ತಿ. ಹಲವು ಜಾಲತಾಣಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ