Advertisement
ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ಕೆಂಪು ರಂಗೋಲಿ..

ನೀನು ಮುಟ್ಟು ಅಂದಿದ್ದೆ
ನಾನು ಮುಟ್ಟಿರಲಿಲ್ಲ
ಇಬ್ಬರೂ ಸುಮ್ಮನೆ ಕೂತಿದ್ದು
ಹೋಗಿದ್ದವು

ಎಂದೊ ಒಮ್ಮೆ ನೀ ಕೇಳಿದ್ದೆ
ಅಂದು ನೀ ಏಕೆ ಮುಟ್ಟಲಿಲ್ಲ?
‘ನೀ ಮುಟ್ಟು ಅನ್ನದೆ,
ನಾನು ಮುಟ್ಟಬೇಕು ಅನಿಸದೆ
ಸ್ಪರ್ಶಕೆ ಸಿಗಬೇಕು ನೀನು’ ಅಂದಿದ್ದೆ
ಅವಳು ಮೆಲು ಗಾಳಿಯಂತೆ
ಕುಲು ಕುಲು ನಕ್ಕಿದ್ದಳು

‘ಹೇ ಹುಡುಗ ಅದು ಕೆಂಪು ರಂಗೋಲಿ
… ನಮ್ಮ ಮುಟ್ಟು ಕಣೊ..’ ಅಂದಿದ್ದಳು
ಹೇಳಿದ್ದೆ ನಾನು ‘ನಾನಂದು ನಿನ್ನ ಖಂಡಿತ
ಮುಟ್ಟುತ್ತಿದ್ದೆ ನಿನ್ನನ್ನು, ನಿನ್ನ ಒಳಗನ್ನು’
ಹೆಣ್ಣನ್ನು ತಲುಪಲು ಹಾಯು ದೋಣಿಯ
ಹುಟ್ಟುಬೇಡ
ಮುಟ್ಟು ಸಾಕು
ಅವಳು ತಬ್ಬಿಕೊಂಡಳು
ನಾನು ಹಣೆಗೆ ಮುತ್ತಿಟ್ಟೆ..
ನಮ್ಮದು ಮುಟ್ಟಿನ ಬಂಧ

*

ನಾನು ಅಂಗಳಕ್ಕೆ ನೀರು ಚೆಲ್ಲುತ್ತಿದ್ದೆ
ಅವಳು ರಂಗೋಲಿ
ಬರೆಯುತ್ತಿದ್ದಳು
ನಾನು ಹೂವು ಕೊಯ್ಯುತ್ತಿದ್ದೆ
ಅವಳು ದಾರ ಹಿಡಿದು ನಿಲ್ಲುತ್ತಿದ್ದಳು
ಅವಳು ಉಸಿರು ಬಿಡುತ್ತಿದ್ದಳು
ನಾನು ಆ ಉಸಿರು ಕುಡಿದು ಬದುಕುತ್ತಿದ್ದೆ
ಅವಳು ಸವಿನಿದ್ದೆ ಉಣ್ಣುತ್ತಿದ್ದಳು
ಅವಳ ಪಾಲಿನ ಕನಸು ಕಾಣುತ್ತಿದ್ದೆ
ಅವಳು ಕೆಂಪು ರಂಗೋಲಿ ಚೆಲ್ಲುತ್ತಿದ್ದಳು
ನಾನು ಮುಟ್ಟಾಗುತ್ತಿದ್ದೆ

*

ಅವತ್ತು ನಾ ತಡವಾಗಿ ಬಂದದ್ದು
ನೀನು ಕೇಳಬೇಕಿತ್ತು ಅಂದೆ
ಮರೆತೆ ಅಂದಳು
ಪ್ರೀತಿಯನ್ನೇ ಮರೆಯುವುದಾ ಅಂದೆ
ಅವಳ ಕಣ್ಣು ಕಡಲಾಯಿತು
ನನಗೆ ಪ್ರೀತಿಸಲು ಬರುವುದಿಲ್ಲವಾ ಕೇಳಿದಳು
ನನ್ನದು ಅತಿಯಾಯ್ತು ಬಿಡು ಅಂದೆ
ಮಾತು ಮಥಿಸಿ, ನಮ್ಮ ನಡುವೆ ಬಿಸಿ..

ಎದೆಯೊಳಗೆ ಬರೆದಿಟ್ಟುಕೊಂಡ
ತಾರೀಖು ಮೀರಿ ಎರಡು ದಿನ
ಕಾದಿದ್ದೇನೆ
ಅವಳು ‘ಮುಟ್ಟು’ ಅನ್ನಲಿ ಅಂತ..
ನಾನು ಮುಟ್ಟುವುದಿಲ್ಲ..
ನಾನೂ ಮುಟ್ಟಾಗುತ್ತೀನಿ
ಬಿಡುವುದಿಲ್ಲ ನಾನು ಎಂದೂ
ಆ ಮುಟ್ಟನ್ನು ಅನಾಥವಾಗಲು
ಮತ್ತು
ಪ್ರೀತಿಯನ್ನು!

About The Author

ಸದಾಶಿವ ಸೊರಟೂರು

ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಹೆಸರಿಲ್ಲದ ಬಯಲು' ಮತ್ತು ' ತೂತು ಬಿದ್ದ ಚಂದಿರ' (ಕವನ ಸಂಕಲನ)  ಹಾಗೂ  ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.

1 Comment

  1. S JAYASRINIVASA RAO

    Beautiful and intense … I liked the way you played around with ‘muttu’ … excellent 🌺🙂👍

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ