1.ಮರೆವಿನ ಹಾದಿಯ ಹಾಡು
ಎಷ್ಟೊಂದು ಕನಸುಗಳು ಕಣ್ಣಲಿ
ಓಡಿ ಓಡಿ ಓಡಿ ನೆಲದಿಂದ ನೆಗೆದು
ಮೇಲೆ ಮೇಲೆ ಮೇಲೆ ಆಕಾಶದಿ
ಹಾರುತ್ತಾ ತೇಲುತ್ತಿದ್ದೆ
ಅವರಾರೋ ಕೆಳಗೆ ಬೆನ್ನತ್ತಿದವರು
ಗಡಿಗೆರೆಗಳ ಲೆಕ್ಕಿಸದೆ ಹಾರುತ್ತಿದ್ದವನ
ನೋಡಿ ಬೇಸತ್ತು ಸೋತು ಸುಮ್ಮನಾಗುತ್ತಿದ್ದರು
ಎಳೆಮನದ ಅಣುಕಣಗಳಲಿ
ರೆಕ್ಕೆಗಳ ಮೇಲಿನ ಮೋಹ ಅದೆಷ್ಟು
ಉಕ್ಕಿ ಹರಿಯುತ್ತಿತ್ತೋ
ನೀರೊಳಗಣ ನೀರು
ಗಾಳಿಯೊಳಗಣ ಗಾಳಿಯಂತೆ
ನನ್ನೊಳಗೆ ನಾನಿದ್ದೆ
ಇದೆ ಇಲ್ಲವೆಂಬ ಭೇದಗಳಾಚೆ
ತನ್ಮಯನಾಗಿದ್ದೆ
ರೆಕ್ಕೆಗಳಿಗೆ ಅಕ್ಷರ ಅಂಟಿಸುತ್ತಿದ್ದಂತೆ
ಹಾರಾಟವೇ ಮರೆವು
ನಡೆದ ಒಂದೊಂದು ಹೆಜ್ಜೆಯೂ ಮರೆವಿನ
ಹಾದಿಯ ಹಾಡಾಯಿತು
ಕಲಿಸಿದರು ಕಲಿಸಿದರು ಕಲಿಸಿದರು
ಮರೆವನ್ನೇ ಕಲಿಸಿದರು ಹೆಮ್ಮೆಯಿಂದ
ಮರೆತೆ ಮರೆತೆ ಮರೆತೆ
ಮರೆತದ್ದೇನೆಂಬುದನೇ ಮರೆತೆ
ಕೆಸರ ಸಾಗರದಿ ಮೈಮರೆತು ಬೆರೆತೆ
ಎಲ್ಲಿಂದಲೋ ಹರಿದು ಬರುವ ಝರಿಗಳು
ತರುತ್ತವೆ ಒಂದೊಂದೇ ಹನಿ
ಮುಕ್ತಿಯ ರಸ
ಹೀರಲಾಗದು ಮುಗ್ಧನಾಗದೆ
ಕಾದದ್ದೇನು ಸಣ್ಣ ಕಾಲವೇ?
ಅಂತೂ ಮರೆತಿದ್ದೆನೆಂಬುದನರಿತೆ
ರೆಕ್ಕೆಗಳಿಗೀಗ ದಿಕ್ಕುಗಳು ಕಾಣುತಿವೆ
ಮೊದಲಿನ ಮಸುಕಿಲ್ಲ
ಚಿಮ್ಮುತ್ತಾ ಹಾರುತ್ತಾ
ಏರುತ್ತಾ ಮೀರುತ್ತಾ
ಬೆಳಕಿನೊಳಗಣ ಬಿರುಕ ಕಾಣಬೇಕು
2. ಪಾಪಕ್ಕೊಂದು ಪುರಾಣ
ಒಂದು ದಿನದ ಮಾತಲ್ಲ
ಹೂವೊಂದು ಅರಳುತ್ತಿತ್ತು
ದುಂಬಿ ಹಾರಿ ಹಾಡಿ
ನಲಿಯುತ್ತಿತ್ತು
ಹಾಡಿನ ಝೇಂಕಾರದಿ
ಮಿಂದೆದ್ದು ಮೈಮರೆತ ಹೂ
ಮನವ ಕೊಟ್ಟಿತ್ತು
ನಂಬಿ ದುಂಬಿ
ತನುವ ತಾಕಿದಾಗ
ಮನ ಮಾಯವಾಗಿ
ಕಲ್ಲಾಗುತ್ತಿತ್ತು
ನಿಸರ್ಗದ ಕಲೆಯ
ಅವಮಾನಿಸಿದ್ದಕ್ಕಾಗಿ
ಹೂ ತಕ್ಷಣ ಈ ವರ್ಣಮಯ
ನಾಡಲಿ ಮನುಷ್ಯಳಾಗಿ
ಹುಟ್ಟಬೇಕಾಯಿತು

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

