Advertisement
ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ: ಅಗೋಚರ

ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ: ಅಗೋಚರ

ಅಗೋಚರ

ತಣ್ಣನೆಯ ಗಾಳಿ ಬೀಸಿ ನೆಲಮಲಗಿತ್ತು
ಕತ್ತಲೆಯು ಕತ್ತಲೆಗೆ ಸರಿದು
ಆಗಸಕೆ ರೋಮಾಂಚನವ ಕೊಡುವಂತೆ
ಇಂದು ಬರುತ್ತಿದ್ದ ತಾನಿರುವೆನಿಂದು

ಹಕ್ಕಿಗಳ ಗೂಡಿನಲ್ಲಿ ನಿದ್ದೆ ಮಗು ಮಲಗಿತ್ತು
ಚಿಲಿಪಿಲಿಯ ಹಾಡುಗಳ ಗಂಟುಕಟ್ಟಿ
ಹಸಿರು ಗರಿಕೆಯು ತನ್ನ ಮೈಮನಸುಗಳ ಮುಚ್ಚಿ
ತೇಲುಗಣ್ಣಲ್ಲಿತ್ತು ಬೆಳಕಿಗಾಗಿ

ಮರಗಿಡಗಳ ಚಿಗುರು ಚಿಗುರಲಿಕೆ ಕಾತರಿಸಿ
ನಳನಳಿಸಲು ಕಾಯುತ್ತಿತ್ತು ಹಗಲ
ಕಾಯಿ ಮಾಗಲು, ಮಾಗಿದವು ತೊಟ್ಟು ಕಳಚಲು
ತವತವಕಿಸುವಂತಿತ್ತು ತೆರೆದು ಮನವ

ಕುಳಿತಿದ್ದೆ ಅಂಗಳದಲ್ಲಿ ಧ್ಯಾನಿಸುತ ಕವಿತೆಯನು
ಆಗ ಬಡಿದಂತಾಯಿತು ಕಾಲಿಂಗು ಬೆಲ್ಲು
ನನ್ನ ಧಿಕ್ಕರಿಸಿ ಮುಂದೆ ಹೋದವರಾರು? ಗಡಿಬಿಡಿಯ
ಲೆದ್ದು ನೋಡಿದರಿಲ್ಲ ಅಲ್ಲಿ ಯಾರೂ!

ಆತಂಕ ತಲ್ಲಣದಲ್ಲಿ ಒಳನಡೆದು ಕೇಳಿದೆನು
‘ಒಳಗೆ ಬಂದಿರುವರೇ ನಮ್ಮ ಪರಿಚಿತರು?’
ಇವಳು ಹೇಳಿದಳು ‘ಈ ಹೊತ್ತಲೂ ಕನಸೇ?
ನೀವು ನೋಡಿರಲಿಲ್ಲವೇ ಹೊರಗೆ ಕುಳಿತು?’

‘ಹೌದಲ್ಲ’ ಎಂದು ಮರಳಿಬಂದೆನು ಮೊದಲು
ಕುಳಿತಲ್ಲಿಗೇ. ಆಗ ಬಂದವರು ಯಾರು?
ಎಂದುಕೊಂಡರೆ ‘ಯಾರಿಲ್ಲಿಗೆ ಬಂದರು ಕಳೆದಿರುಳು?’
ಎನ್ನುವುದೆ? ಅಥವಾ ಕೊರೋನಾವೇ?

About The Author

ಡಾ. ನಾ. ಮೊಗಸಾಲೆ

ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ