Advertisement
ಡಿ.ಶಬ್ರಿನಾ ಮಹಮದ್ ಅಲಿ ಬರೆದ ಈ ದಿನದ ಕವಿತೆ

ಡಿ.ಶಬ್ರಿನಾ ಮಹಮದ್ ಅಲಿ ಬರೆದ ಈ ದಿನದ ಕವಿತೆ

ಬಾಲ್ಯದ ಯುಗಾದಿ

ಶತಶತಮಾನದ
ಪಾತ್ರೆ.. ಪಗಡಾ…
ಫಳ ಫಳ ಗುಟ್ಟುತಾ
ಜಗುಲಿಯ ಮೇಲೆ
ಬೋರಲು ಬಿದ್ದಿರಲು,
ಹಪ್ಪಳ ಸಂಡಿಗೆಯನು
ಕಚ್ಚಿಕೊಂಡ ರಂಗಿನ
ಕಾಟನ್ ಸೀರೆಯು
ತಂತಿಯ ಮೇಲೆ
ಹಾರಾಡುತಿರಲು,
ಮಸಿಧೂಳು ಮೆತ್ತಿದ
ಮೋಟು ಗೋಡೆಗಳು
ಸುಣ್ಣ-ಬಣ್ಣವು ಕುಡಿದು
ಸಿಂಗಾರಗೊಂಡಿರಲು
ಥಟ್ಟನೆ ಹೊಳೆಯಿತು
ಯುಗಾದಿ ಬಂತೆಂದು!

ಬಾಲ್ಯದ ಯುಗಾದಿಯ
ನೆನೆವುದೆ ಚೆಂದ!
ಸ್ವಾಗತ ಕೋರುವ
ಮಾವಿನ ತೋರಣ
ಮೈಮನ ತಂಪಾಗಿಸುವ
ಅಭ್ಯಂಜನ ಸ್ನಾನ
ಸಿಹಿಕಹಿ ಮಿಶ್ರಿತ
ಬೇವೂ ಬೆಲ್ಲ!
ಘಮಘಮಗುಟ್ಟುವ
ಹೋಳಿಗೆ ತುಪ್ಪ!
ಆಹಾ! ನೆನೆದರೆ ಸಾಕು
ಈಗಲೂ…
ಬಾಯಲಿ ನೀರು!

ಜಾತಿಯ ಮರೆತು
ಸೌಹಾರ್ದದಿ ಬೆರೆತು
ಅಮಿನಾ ಒಳಹೋಗು
ನಾಗರಾಜ ಮಾಮ
ಬಂದಾ…………..
ಜಯಕ್ಕ ಹೊರಗಡೆ
ಬರಬೇಡ………….
ಮುಸ್ತಫಾಮಾಮಾ
ಬಾಗಿಲಲಿಹನೆನುತಾ…..
ಸುಳಿವನು ನೀಡಲು
ಕೇಕೆಯ ಹಾಕಿ
ನಕ್ಕು ನಲಿದಾ….
ಅತ್ತೆ ಸೊಸೆ ಮಾವರ
ಸಂತಸದ ಯುಗಾದಿಯ
ನೀರೆರಚಾಟವನು
ಮರೆಯುವುದುಂಟೆ?

ನವ ವಸ್ತ್ರವ ತೊಟ್ಟ
ಗಂಡೈಕ್ಳೆಲ್ಲಾ …..
ಊರಮುಂದಿನ
ಗುಡಿಕಟ್ಟೆಯ ಮೇಲೆ!
ಸರಿಯೋ..ತಪ್ಪೋ….
ಯಕ್ಕಾ ರಾಜ ರಾಣಿ
ಆಟವನಾಡದೆ
ಹಳ್ಳಿಯ ಯುಗಾದಿ
ಮುಗಿವುದೇ ಇಲ್ಲ!
ಸೋತವರಿಗೆ ಗೆಲ್ಲುವಾಸೆ
ಗೆದ್ದವರಿಗೆ ಮತ್ತಷ್ಟು
ಗಳಿಸುವ ಅತಿಯಾಸೆ!
ಆಸೆ-ಅತಿಯಾಸೆಯ
ಒದ್ದಾಟದಲಿ ಸಿಲುಕಿದವರ
ಸೂರ್ಯೋದಯವು ಅಲ್ಲೆ!
ಚಂದ್ರೋದಯವೂ ಅಲ್ಲೆ!

ಇತ್ತ ಹಬ್ಬದ ದಿನದ
ಇಳಿ ಸಂಜೆಯಲಿ
ಅನುದಿನ ಬಿಸಿಲ
ದಗೆಯಲಿ ನೊಂದು
ಬೆಂದ ಹೆಣ್ಣೈಕ್ಳೆಲ್ಲಾ
ತಂಪು ತಂಪಿನ
ಬೇವಿನ ಕೊಂಬೆಗೆ
ಹಗ್ಗವನೆಸೆದು
ಉಯ್ಯಾಲೆ ಕಟ್ಟಿ
ನಾಲ್ಕೈದು ಜನ
ಒಟ್ಟಿಗೆ ನಿಂತು
ಆಕಾಶವ ಮುಟ್ಟೇ
ತೀರುವೆವೆಂಬ
ತುಂಬು ಭರವಸೆಯಲಿ
ತೂಗಾಡುತಿರಲು…..
ಹೆಂಗಳೆಯರ ಮೊಗದಲಿ
ನಗುವ ತರಿಸಲು
ಬಾಡಿದ ಹೂಗಳಿಗೆ
ನವಚೈತನ್ಯ ತುಂಬಲು
ಬಂದಿರಬಹುದೇ
ಈ ಯುಗಾದಿ!

ಬಾಲ್ಯದ ಯುಗಾದಿ
ನೆನೆವುದೆ ಚೆಂದ!
ನೆನೆದರೆ ಆಗುವುದು
ಮಹಾದಾನಂದ!

ಡಿ. ಶಬ್ರಿನಾ ಮಹಮದ್ ಅಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರು

 

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ