ದಕ್ಕಿದ್ದು
ಯಾರ್ಯಾರಿಗೆ ಎಷ್ಟೆಷ್ಟು
ದಕ್ಕುತ್ತೋ ಈ ಜಗತ್ತಲ್ಲಿ
ಅಷ್ಟಷ್ಟೇ
ಅಷ್ಟದಿಕ್ಪಾಲಕರು ಎಲ್ಲಿಹರು
ನಿನ್ನ ಸಲುಹಲು?
ಇಲ್ಲಿ ಇರುವುದಾ ಖಾತ್ರಿ
ಪಡಿಸಿಕೋ ನೀ
ಅಲ್ಲಿ
ಇಲ್ಲಿ ಯಾರೂ ಇಲ್ಲ
ಇದ್ದ ಗುರುತೂ ಇಲ್ಲ
ಇರುವವರಲ್ಲೇ ಒಂಟಿ, ಒಬ್ಬಂಟಿ
ನೀ ಅಲ್ಲಿ
ಯಾರ್ಯಾರಿಗೆ ಎಷ್ಟೆಷ್ಟು
ದಕ್ಕುತ್ತೋ…
ಇಲ್ಯಾರು ಬರುವುದಿಲ್ಲ
ನಿನ್ನ ಸಲುಹಲು
ಮಿದ್ದಿ ಮಿಟಿಕೇ ಮಾಡಿ
ತುತ್ತ ನಿಕ್ಕಲು
ತೂಗಿ ತೊಟ್ಟಿಲ ಕಟ್ಟಲು
ಕಟ್ಟ ಕಡೆಯದೇನಲ್ಲ
ಇದು ನಿನಗೆ
ಬಾನಿನೆತ್ತರ ಜೀಗಲು
ಯಾರ್ಯಾರಿಗೆ ಎಷ್ಟೆಷ್ಟು
ದಕ್ಕುತ್ತೋ…
ನೀ ನಿನ್ನದೇ
ನಂದನ ವನವ ಮಾಡಿಕೋ
ಫಲ ಪುಷ್ಪಗಳನಿಟ್ಟು
ಸಿಂಗಾರವ ಮಾಡಿಕೋ
ಯಾರೂ ಬಂದು ಹರಸುವುದಿಲ್ಲ
ಬಿರುದು ಬಾಣಗಳನಿಟ್ಟು
ಇರುವುದನು ಇರುವುದರಲ್ಲೇ
ಕಾಣು ನಿನ್ನದೆನಿತು
ಯಾರ್ಯಾರಿಗೆ ಎಷ್ಟೆಷ್ಟು
ದಕ್ಕುತ್ತೋ ಈ ಜಗತ್ತಲ್ಲಿ
ಅಷ್ಟಷ್ಟೇ

ಚಿತ್ರ ನಿರ್ದೇಶಕ,ಕಥಾಲೇಖಕ ಮತ್ತು ಕಲಾವಿದ. ‘ಅತ್ತಿಹಣ್ಣು ಮತ್ತು ಕಣಜ’ ಇವರ ಪ್ರಶಸ್ತಿ ವಿಜೇತ ಚಿತ್ರ. ಚಿತ್ರದುರ್ಗ ಹುಟ್ಟೂರು.ಈಗ ಇರುವುದು ಬೆಂಗಳೂರು.

