ಗಜಲ್

ನಿನ್ನ ಬರುವಿಕೆಗಾಗಿ ಶಬರಿಯಂತೆ ಕಾಯುತಿರುವೆ
ನನ್ನ ದುಃಖದ ಕಣ್ಣೀರು ನದಿಯಂತೆ ಹರಿಸುತಿರುವೆ

ಕಾರಣ ಹೇಳದೆ ಮುನಿಸನು ತೋರುತ್ತಿರುವೆ ಏಕೆ
ದುಗುಡದಿ ಮುಗುಳ್ನಗೆ ಸೀತೆಯಂತೆ ಬೀರುತಿರುವೆ

ಕೃಷ್ಣನ ಕೊಳಲಿನಂತೆ ಸವಿನುಡಿ ಮೋಡಿ ಮಾಡಿಹುದು
ನಿನಗಾಗಿ ವಿರಹ ಲೋಕದಿ ರಾಧೆಯಂತೆ ದುಃಖಿಸುತಿರುವೆ

ಮೀನಿನ ಹೆಜ್ಜೆ ಹೆಣ್ಣಿನ ಮನದಂತೆ ನಲ್ಲನ ಅರಿತವರಿಲ್ಲ
ನಿನ್ನೊಲುಮೆ ಕನಸಲಿ ಮಹಾದೇವಿಯಂತೆ ಕನವರಿಸುತಿರುವೆ

ವನಿತಾಳ ಪ್ರೀತಿಯ ಒರತೆ ಬತ್ತುವುದಿಲ್ಲ ಕೊನೆಯವರೆಗೆ
ಮನವೆಂಬ ಆಗಸದಿ ಧೃವ ತಾರೆಯಂತೆ ಮಿನುಗುತಿರುವೆ

ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ರಾಯಚೂರಿನ ಮಾನ್ವಿಯವರು
ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲ್ ಮರ್ಚಡ್ ತಾಲೂಕು ಮಾನ್ವಿಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮನಸ್ಸು (ಕವನ ಸಂಕಲನ), ವಿಚಾರ ಧಾರೆ (ಪ್ರಬಂಧ ಸಂಕಲನ), ಜೀವನ ಪಥ (ಲೇಖನಗಳ ಸಂಕಲನ), ಮೌನದೊಡಲ ಮಾತು (ಗಜಲ್ ಸಂಕಲನ) ಪ್ರಕಟಿತ ಕೃತಿಗಳು