ಅರಳಿಕಟ್ಟೆಯ ಮೇಲೆ
ದೇವರ ಪಟಗಳ ಸಾಲು
ಕಳೆದಿದೆ ದೇವಿಯ ಓಲೆ
ಮುರಿದಿದೆ ಒಂದರ ಕಾಲು

ಚೌಕಾಸಿ ಮಾಡಿ
ಚೌಕಟ್ಟು ಹಾಕಿಸಿ
ಮಡಿ ಉಟ್ಟು ಪೂಜಿಸಿ
ಮಲ್ಲಿಗೆಯನೇರಿಸಿ

ಗತಿ ನೀನೆ ಮತಿ ನೀನೆ
ಎಂದೆಲ್ಲ ಬಣ್ಣಿಸಿ
ಗಾಜು ಒಡೆದರೆ
ಅಪಶಕುನವೆನ್ನಿಸಿ, ನಿಮ್ಮ
ಬೀದಿಗೆ ಬಿಸಾಕಿಹೋದರು!

ಇಲ್ಲೇ ಪಕ್ಕದ ರಸ್ತೆಯಲ್ಲೇ
ಕಣ್ಣಿಗೆ ಬೀಳುವಲ್ಲೇ
ಕಾಲಿಗೆ ತಾಗುವಲ್ಲೇ
ದೇವರ ವಾಸ್ತವ್ಯ
ನೀತ್ಸೆ ಅಳುತ್ತಲೇ
ಅವರ ಪ್ರಶ್ನಿಸುತ್ತಾನೆ

ಮೂತಿ ಮುರಿದ ಮಾರುತಿ
ಯಾರದೀ ಕಿತಾಪತಿ
ಉಮಾಗೋಲ್ಡ್ ಮೂಗುತಿ
ಸ್ವರ್ಣಲಕ್ಷ್ಮಿಗೀ ಗತಿ

ನೊಂದ ನೀತ್ಸೆ ಘೋಷಿಸಿದ
ಮುರಿದ ಮೂರ್ತಿಗಳನೆಲ್ಲ
ಮೂಲೆಗೆ ಬಿಸಾಕಿದ ಭಕ್ತರು
ಇಲ್ಲದ ದೇವರಿಗೆ
ಇಂದಿಗೆ ಸತ್ತರು.

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.