ಒರಿಸ್ಸಾದ ವಾಸ್ತು ಶಿಲ್ಪಿಗಳು ದೇಗುಲಗಳನ್ನು ದೇವರ ಅಥವಾ ಮಾನವನ ದೇಹಕ್ಕೆ ಹೋಲಿಸಿದ್ದರು. ಆದುದರಿಂದಲೇ ದೇಗುಲದ ವಿವಿಧ ಭಾಗಗಳಿಗೆ ದೇಹದ ಅಂಗಗಳ ಹೆಸರುಗಳನ್ನೇ ನೀಡಿದ್ದಾರೆ: ಪಾಭಗ (ಪಾದ), ಜಂಘ (ಮೊಣಕಾಲು), ಗಂಡಿ, ಮಸ್ತಕ ಮುಂತಾದವು. ಮುಖ್ಯ ಶಿಖರವುಳ್ಳ ದೇಗುಲವನ್ನು ಗಂಡು ಅಥವಾ ಮದುಮಗನೆಂದೂ ಹಾಗೂ ಜಗಮೋಹನ ದೇಗುಲವನ್ನು ಹೆಣ್ಣು ಅಥವಾ ಮದುಮಗಳೆಂದೂ ಭಾವಿಸಲಾಗುತ್ತಿತ್ತು. ಒರಿಸ್ಸಾದ ದೇಗುಲಗಳಲ್ಲಿ ವಾಸ್ತು ಕಲೆ ಹಾಗೂ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವೇ ಇಲ್ಲ. ಆದುದರಿಂದಲೇ ಕಲಾ ಸಂಶೋಧಕಿ ಡಾ.ಸ್ಟೆಲ್ಲಾ ಕ್ರಮರೀಷ್ `ಒರಿಸ್ಸಾದ ವಾಸ್ತುಕಲೆ ದೈತ್ಯಾಕಾರದ ಶಿಲ್ಪಕಲೆ’ ಎಂದಿದ್ದಾರೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ

ಒರಿಸ್ಸಾವನ್ನು `ಉತ್ಕಲ’ – ಸುಂದರ ಕಲೆಗಳ ನಾಡು ಎಂದೂ ಕರೆಯಲಾಗುತ್ತದೆ. ಅಲ್ಲಿನ ದೇವಾಲಯಗಳು ತಮ್ಮ ವಾಸ್ತು ಶೈಲಿ ಹಾಗೂ ಶಿಲ್ಪಕಲೆಯಿಂದಾಗಿ ವಿಶ್ವವಿಖ್ಯಾತವಾಗಿವೆ. ಆ ದೇಗುಲಗಳ ಕಲಾ ಸಿರಿವಂತಿಕೆಗೆ ಹಾಗೂ ತಾಂತ್ರಿಕ ಕೌಶಲತೆಗೆ ಸರಿಸಾಟಿಯಾದುದಿಲ್ಲ. ಸುಮಾರು ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ದೇಗುಲಗಳ ವಾಸ್ತು ಕಲಾ ನಿರ್ಮಾಣ 11ನೇ ಶತಮಾನದಲ್ಲಿ ಭುವನೇಶ್ವರದಲ್ಲಿನ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಗುತ್ತಾ ಬಂತು. ಆದುದರಿಂದಲೇ ಕೊನಾರ್ಕ್‌ನ ಸೂರ್ಯ ದೇಗುಲವನ್ನು ಆರಿಹೋಗುವ ದೀಪದ ಅಂತಿಮ ಕ್ಷಣಗಳ ಉಜ್ವಲ ಜ್ವಾಲೆ ಎಂದು ಕರೆಯುತ್ತಾರೆ. ಒರಿಸ್ಸಾಕ್ಕೆ ಮಾತ್ರ ಸೀಮಿತವಾಗಿರುವ ಈ ವಿಶಿಷ್ಟ ವಾಸ್ತು ಶೈಲಿಯನ್ನು `ಕಳಿಂಗ ಶೈಲಿ’ಯೆಂದು ಕರೆಯಲಾಗಿದೆ. ಈ ವಾಸ್ತು ಶೈಲಿಯ ಪ್ರಭಾವ ಬಂಗಾಳ, ಆಂಧ್ರಪ್ರದೇಶಗಳಲ್ಲದೆ ಭಾರತವನ್ನೂ ದಾಟಿ ಜಾವಾ ದ್ವೀಪಗಳಿಗೂ ಹರಡಿದೆ. ಬಳ್ಳಾರಿ ಜಿಲ್ಲೆಯಲ್ಲಿನ ಅಮೃತೇಶ್ವರ ದೇವಾಲಯ ಮುಖ ಮಂಟಪವೊAದರ ಶಾಸನದಲ್ಲಿ ನಾಗರ, ದ್ರಾವಿಡ ಹಾಗೂ ವೇಸರ ಶೈಲಿಗಳ ಜೊತೆಗೆ ಕಳಿಂಗ ಶೈಲಿಯ ಉಲ್ಲೇಖವೂ ಇದೆಯೆಂದು ಉತ್ಕಲ ವಿಶ್ವವಿದ್ಯಾಲಯದ ಡಾ. ಕೆ.ಎಸ್. ಬೆಹೆರ ಹೇಳುತ್ತಾರೆ.

(ಡಾ. ಜೆ. ಬಾಲಕೃಷ್ಣ)

ಒರಿಸ್ಸಾ ಶಿಲ್ಪ ಶಾಸ್ತ್ರದ ಪ್ರಕಾರ ಮೂರು ವಿಧದ ದೇಗುಲಗಳ ನಿರ್ಮಾಣವಿದೆ- ರೇಖಾ, ಪೀಠ ಹಾಗೂ ಖಖರ ಶೈಲಿಗಳು. ಉದ್ದನೆ ಬಾಗಿರುವ ಶಿಖರ (ಭುವನೇಶ್ವರದ ಲಿಂಗರಾಜ ದೇಗುಲ) ರೇಖಾ ಶೈಲಿಯದಾದರೆ ಅದರ ಮುಂದಿರುವ `ಪಿರಮಿಡ್’ ಶಿಖರದ ಜಗಮೋಹನ ಪೀಠ ದೇಗುಲ. ಈಗ ಕೊನಾರ್ಕ್‌ನಲ್ಲಿ ಉಳಿದಿರುವ `ಕಪ್ಪು ಪಗೋಡ’ ಇದೇ ಶೈಲಿಯದು. ರೇಖಾ ಶೈಲಿಯ ಮುಖ್ಯ ಶಿಖರ ಕುಸಿದುಬಿದ್ದು ನೂರಾರು ವರ್ಷಗಳಾಗಿವೆ.

ಒರಿಸ್ಸಾದ ವಾಸ್ತು ಶಿಲ್ಪಿಗಳು ದೇಗುಲಗಳನ್ನು ದೇವರ ಅಥವಾ ಮಾನವನ ದೇಹಕ್ಕೆ ಹೋಲಿಸಿದ್ದರು. ಆದುದರಿಂದಲೇ ದೇಗುಲದ ವಿವಿಧ ಭಾಗಗಳಿಗೆ ದೇಹದ ಅಂಗಗಳ ಹೆಸರುಗಳನ್ನೇ ನೀಡಿದ್ದಾರೆ: ಪಾಭಗ (ಪಾದ), ಜಂಘ (ಮೊಣಕಾಲು), ಗಂಡಿ, ಮಸ್ತಕ ಮುಂತಾದವು. ಮುಖ್ಯ ಶಿಖರವುಳ್ಳ ದೇಗುಲವನ್ನು ಗಂಡು ಅಥವಾ ಮದುಮಗನೆಂದೂ ಹಾಗೂ ಜಗಮೋಹನ ದೇಗುಲವನ್ನು ಹೆಣ್ಣು ಅಥವಾ ಮದುಮಗಳೆಂದೂ ಭಾವಿಸಲಾಗುತ್ತಿತ್ತು. ಒರಿಸ್ಸಾದ ದೇಗುಲಗಳಲ್ಲಿ ವಾಸ್ತು ಕಲೆ ಹಾಗೂ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವೇ ಇಲ್ಲ. ಆದುದರಿಂದಲೇ ಕಲಾ ಸಂಶೋಧಕಿ ಡಾ.ಸ್ಟೆಲ್ಲಾ ಕ್ರಮರೀಷ್ `ಒರಿಸ್ಸಾದ ವಾಸ್ತುಕಲೆ ದೈತ್ಯಾಕಾರದ ಶಿಲ್ಪಕಲೆ’ ಎಂದಿದ್ದಾರೆ.