Advertisement
ಡಾ. ನಾ. ಮೊಗಸಾಲೆ ಬರೆದ ಕವಿತೆ

ಡಾ. ನಾ. ಮೊಗಸಾಲೆ ಬರೆದ ಕವಿತೆ

ಮುಸ್ಸಂಜೆ ಅಲ್ಲದ ಮುಸ್ಸಂಜೆ

ತಬ್ಬಿಕೊಳಲು ಬಂದ ಹಾಗೆ ಇದೆ ತಂಗಾಳಿ
ಆ ಮುಸ್ಸಂಜೆ ನಾನಿರಲು ಹೂದೋಟದಲ್ಲಿ
ಯಾಕೆ ನೆನಪಾಗುತ್ತದೆ ಮೊದಲ ದಿನ ತೊಡೆ ತೆರೆಯುವ ಮೊದಲು
ಇವಳೂ ಇದ್ದಳಲ್ಲ ಹೀಗೆ ನನ್ನ ಹೃದಯದಲ್ಲಿ

ಆಮೇಲೆ ಇವಳು ಹೂವಾದಳು ಮತ್ತೆ ಹೂದೋಟವಾಗಿ
ಬಂದಳು ಬದುಕಿನಲ್ಲಿ ದಿನಾ ಚಿಗುರಲ್ಲಿ ಚಿಗುರಾಗಿ
ಗಿಡಗಿಡದಿಂ ಚೆಲುಗೊಂಚಲು ಮಿಂಚಲು
ಪಂಜೆಯವರ ತೆಂಕಣ ಗಾಳಿಯಂತೆಯೂ ಒಮ್ಮೊಮ್ಮೆ ಸಿಡಿದು

ಗಾಳಿಯನ್ನು ಅಪ್ಪಿಕೊಂಡಂಥಲ್ಲ ನಾನಿವಳನ್ನು
ಒಪ್ಪಿಕೊಂಡುದು ಬಾಳೆಯಲ್ಲಿ ಬಾಳೆಯ ನಾರಿರುವಂತೆ
ಬಿಡಿಸಿದರೆ ಮತ್ತೂ ಸುತ್ತಿ ಸುತ್ತಿಸುತ್ತಲೆ ಇರುವ
ಬಾಳೆಯೊಳಗಿನ ತಿರುಳು ಕೊಡುವ ಸುಖ ಇವಳ

ಸಂಜೆ ಎನ್ನುವುದು ಸಂಜೆಯಾಗುವುದಿಲ್ಲ ನನಗೆ
ಇವಳು ಬಳಿ ಇರುವಾಗ ಅದು ಮುಂಜಾನೆಯಾಗಿ
ಗರಿಕೆ ಹುಲ್ಲಿನ ಮೇಲೆ ಇರುವ ಮಂಜಿನ ಮುತ್ತು
ಇವಳ ಕಣ್ಣಿನ ಒಳಗೆ ಇರುವಷ್ಟು ದಿವಸ

About The Author

ಡಾ. ನಾ. ಮೊಗಸಾಲೆ

ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ