ಕಪಿಲೆ… ಈಗಲೂ ಅದೇ ನೋವಿನ ದನಿ ಕೇಳಿದಂತಾಗುತ್ತಿದೆ. ಈ ನೋವಿನ ಮೂಲದಲ್ಲೂ ಆಕೆಯ ನೆನಪು. ಹೌದು ಆಕೆಯೂ ನನ್ನಂತೆ ಹೆಣ್ಣು. ಹೆಣ್ಣಿನ ನೋವು ಆ ಸೂಕ್ಷ್ಮ ಅವಳಿಗೆ ತಾನೆ ಅರ್ಥವಾಗೋದು. ಏನು ಮಾಡಲಿ.. ಏನು ಆಡಲಿ.. ಚಿಟಿಚಿಟಿ ಎನ್ನುತ್ತಿರುವ ತಲೆ, ಸುತ್ತಿದ ಬಟ್ಟೆ. ಆ ಡಾಕ್ಟರಮ್ಮ ಬರುವವರೆಗೂ ನಿಲ್ಲಬೇಕು. ಕಪಿಲೆ ಏನು ಮಾಡುತ್ತಿದ್ದಾಳೋ? ಬಾಣಂತಿ ಬೇರೆ.. ಮೊನ್ನೆ ಮೊನ್ನೆಯಷ್ಟೇ ಆಕೆಯೂ ಸುಧಾರ‍್ಸಿಕೊಳ್ತಿದ್ದಾಳೆ.. ಮನೆಗೆ ಹೋಗಿ ಅಕ್ಕಚ್ಚು ಕೊಡಬೇಕು. ಅಕ್ಕಿ ಬೆಲ್ಲ ಕಾಯಿ ಬೇಯಿಸಿ ಹಾಕ್ಬೇಕು. ಈಗ ಐದಾರು ದಿನವಾಯ್ತು. ಬರೀಯ ನೋವೇ ನೋವು..
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನಾಗರೇಖಾ ಗಾಂವಕರ ಕತೆ “ಸ್ಟಾಕ್‌ಹೋಮ್ ಸಿಂಡ್ರೋಮ್”

ನಾಣಿಗೆ ಒಲೆಯಲ್ಲಿ ಬೆಂಕಿ ಭಗಭಗ ಉರಿತಾನೇ ಇದೆ. ಅರ್ಧ ಹೊರಗೆ ಇನ್ನರ್ಧ ಒಳಗೆ ಉರಿತಿದ್ದ ತೆಂಗಿನ ಸೋಗೆಗಳನ್ನು ಕಂಡ ಸಂಪ್ರೀತ ಗಾಬರಿಯಾದಂತಾಗಿ ಎಲ್ಲ ಸೇರಿಸಿ ಒಳಗೆ ತುರುಕಿದ. ಆದೇ ತಾನೆ ಕಾಲೇಜು ಮುಗಿಸಿ ಮನೆಗೆ ಬರ‍್ತಾ ಇದ್ದ. ದೂರ ಕೊಂಚ ಹೆಚ್ಚು ಎಂದು ಒಳದಾರಿಯಲ್ಲಿ ಮನೆಗೆ ಬರುವ ಮನೆಯ ಹಿತ್ತಲ ದಾರಿಯಲ್ಲಿಯೇ ಬರುವುದು ಹೆಚ್ಚು. ಮನೆಗೂ ಬಸ್ಸು ನಿಲ್ದಾಣಕ್ಕೂ ಇರುವ ಅಂತರ ಅಂದರೆ ಬರೀಯ ಹಿತ್ತಲ ದಣಪೆ ದಾಟಿದರೆ ಸಾಕು. ಇಂದು ಅದೇ ದಾರಿಯಲ್ಲಿ ಮನೆ ಹತ್ತಿರ ಬಂದರೂ ಸದಾ ವಟಗುಡುತ್ತಿದ್ದ ತಾಯಿಯ ದ್ವನಿ ಕೇಳಲಿಲ್ಲ. ಅದು ಕೊಪ್ಪವೇ ಆದರೂ ಅಕ್ಕ ಪಕ್ಕದ ಮನೆಗಳು ಕೊಂಚ ದೂರ. ಪ್ರತಿಯೊಂದು ಮನೆಗೂ ಹತ್ತು ಹದಿನೈದು ಗುಂಟೆ ಜಾಗೆ. ಅದರಲ್ಲಿ ತೆಂಗು ಅಡಿಕೆ ಗಿಡಗಳೆ ಬಹಳ. ಇಲ್ಲ ಅಲ್ಲೊಂದು ಇಲ್ಲೊಂದು ಮಾವಿನ ಗಿಡ. ಬಿಟ್ಟರೆ ಬೇರೆ ಗಿಡಗಳು ಹಾಕುವುದು ಕರಾವಳಿಯ ಆ ಪರಿಸರದಲ್ಲಿ ಅಪರೂಪ. ನಾಣಿಗೆ ಒಲೆ ಅಟ್ಟಲು ಆ ತೆಂಗಿನ ಅಡಿಕೆ ಸೋಗೆಗಳೇ ಸಾಕಷ್ಟಾಗುತ್ತಿತು.

“ಯಾಕೆ ಅಮ್ಮಾ, ಏನಾಯ್ತೇ? ಸುಮ್ನೇ ಕುತಿಯಲ್ಲಾ? ಕಣ್ಣೆಲ್ಲಾ ಊದ್ಕಂಡಿದ? ಏನ? ಆರಾಂ ಇಲ್ಲಾ?” ಎನ್ನುತ್ತಾ ಒಳಬಂದ ಸಂಪ್ರೀತ.

ಜಗುಲಿಯಲ್ಲಿ ತೆಣೆಯ ಮೇಲೆ ಕೂತ ಅಮ್ಮ ಎಂದಿನಂತೆ ಹಸನ್ಮುಖಿಯಾಗಿಲ್ಲ ಎಂಬುದು ಸಂಪ್ರೀತನಿಗೆ ಹೊಳೆದಂತಾಯ್ತು. ಆಕೆಯ ಕಡೆ ಕಣ್ಣು ಹೊರಳಿತು. ನಿಸ್ತೇಜ ಮುಖದಲ್ಲಿ ಉಮ್ಮಳಿಸುವ ದುಃಖವನ್ನು ಆಕೆ ಪ್ರಯತ್ನಪೂರ್ವಕ ನುಂಗುತ್ತಿದ್ದಂತೆ ಭಾಸವಾಯಿತು. ಒಂದಡಿ ಮುಂದಿಟ್ಟು ಅಮ್ಮನ ಪಕ್ಕ ಕೂತು ಮಾತಿಗೆ ತೊಡಗಬೇಕು ಎನ್ನುವಷ್ಟರಲ್ಲೇ ಆಕೆಯ ಬಲಗೆನ್ನೆಯ ಮೇಲೆ ರಕ್ತದ ಕಲೆ ಕಂಡು ಬೆದರಿದ.

ಅವನಿಗರಿವಿಲ್ಲದೇ “ಅಯ್ಯೋ, ಅಮ್ಮಾ.., ಇದೇನೇ ರಕ್ತ?” ಎಂಬ ನೋವಿನ ಧ್ವನಿ ಹೊರಡುತ್ತ “ಏಳ, ಏಳ, ಆಸ್ಪತ್ರೆಗೆ ಹೋಗ್ವಾ” ಎನ್ನುತ್ತ ಆಕೆಗೆ ತುರಾತುರಿ ಮಾಡತೊಡಗಿದ. ಅದು ಯಾಕಾಯ್ತು, ಹೇಗಾಯ್ತು, ಅವನಿಗೆ ಅರೆಕ್ಷಣದಲ್ಲಿ ಹೊಳೆದುಹೋಯ್ತು. ಅದೇನೂ ಹೊಸದಲ್ಲ. ಅಪ್ಪ ಅಮ್ಮನ ಕಚ್ಚಾಟ ಮಾಮೂಲಿ, ಎಂಬಷ್ಟರಮಟ್ಟಿಗೆ. ಈ ಹೊಡೆತ ತಿಂದು ತಿಂದು ಆಕೆಯ ಮೈ ಚರ್ಮ ಕೂಡ ಜಡ್ಡುಗಟ್ಟಿದೆ ಎಂಬಂತೆ ಆಕೆ ನಿರ್ಲಿಪ್ತೆ.

ಆತನಿಗೆ ಗೊತ್ತು. ಆಕೆ ಮಹಾತ್ವಾಕಾಂಕ್ಷೆಯುಳ್ಳ ತಾಯಿ. ತನ್ನ ಓದಿಗೆ, ಖರ್ಚಿಗೆ ಒಂದ್ಚೂರು ಹಿಂದೆ ಮುಂದೆ ನೋಡದೆ ಹಣ ನೀಡುವ ಆಕೆ ಅಪ್ಪನ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಹಾಕಲು ನೋಡುತ್ತಿದ್ದದ್ದು, ತನ್ನ ಗಳಿಕೆ ಎಂಬ ಮಾತ್ರಕ್ಕೆ ತನಗನ್ನಿಸಿದ್ದನ್ನೆಲ್ಲಾ ಮಾಡಬೇಕೆಂಬ ಗಂಡು ಜಂಭದ ಅಪ್ಪನ ಜೊತೆ ಮಾತಿಗೆ ಮಾತು ಬೆಳೆದು ಅಪ್ಪನ ಕೋಪದ ಬ್ಯಾಟಿಗೆ ಅಮ್ಮನ ತಲೆ ಚೆಂಡಂತೆ ಪುಟಿದಿದೆ ಎನಿಸಿತು. ಹೆತ್ತ ತಂದೆಯ ಬಗ್ಗೆ ಒಮ್ಮೆ ಜಿಗುಪ್ಸೆ, ಇನ್ನೊಮ್ಮೆ ಅಮ್ಮನ ಅನಗತ್ಯದ ಒತ್ತಡ ನೀಡುವ ಪರಿ ಎಲ್ಲವೂ ಆತನಿಗೆ ಕಿರಿಕಿರಿ ಎನಿಸಿತು. ಅಪ್ಪನೇನೂ ಕೆಟ್ಟವನಲ್ಲ. ಮನೆಗೆ ಹೆಂಡತಿ ಮಕ್ಕಳಿಗೆ ಬೇಕಾದ ಎಲ್ಲವನ್ನೂ ಹೊಂದಿಸುವ ತಾಕತ್ತಿದ್ದವ. ಆದರೆ ಒಂದೇ ನ್ಯೂನ್ಯತೆ ಎಂದರೆ ತಾನು ಹೇಳಿದ್ದೇ ನಡೆಯಬೇಕೆನ್ನುವ ಧಾರ್ಷ್ಟ್ಯ. ಅಮ್ಮನಿಗೂ ಬಹುಶಃ ಅಪ್ಪನಿಂದ ಒದೆ ತಿನ್ನಿಸಿಕೊಳ್ಳದಿದ್ದರೆ ಸಮಾಧಾನವಿಲ್ಲವೇನೋ ಎಂಬಂತೆ ಆಗಾಗ ಕಿರಿಕಿರಿ ಎಬ್ಬಿಸುತ್ತಿದ್ದಳು.

ಸಂಪ್ರೀತ ಒಳ ಬಂದ. ಕುರ್ಚಿಯ ಮೇಲೆ ಆರಾಂ ಆಗಿ ಕೂತು ಏನೂ ಆಗೇ ಇಲ್ಲ ಅನ್ನುವಂತೆ ಪೇಪರ್ ಓದುತ್ತಿದ್ದ ಅಪ್ಪನ ನೋಡಿ ಅವನ ಸಹನೆ ಮೀರಿತು. ಬದುಕಿನುದ್ದಕ್ಕೂ ಆತನ ಬೇಕು ಬೇಡಗಳ ಪೂರೈಸುತ್ತ ಮಕ್ಕಳು ಮರಿಗಳೆಂದು ಸದಾ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಅವರ ಭವಿಷ್ಯಕ್ಕಾಗಿ ಗಂಡನಿಗೆ ಒಂದೆರಡು ಬುದ್ಧಿ ಮಾತು ಹೇಳುವ ಆಕೆಗೆ ಆ ಪಾಟಿ ಬಡಿದು ಘಾಸಿಗೊಳಿಸುವ ಅಗತ್ಯವಿತ್ತೇ? ಮೇಲಾಗಿ ತಲೆಯಿಂದ ರಕ್ತ ಸುರಿಯುತ್ತಿದ್ದರೂ ನಿರ್ಲಿಪ್ತನಾಗಿ ಕೂತ ಅಪ್ಪ ರಾಕ್ಷಸನಂತೆ ಕಂಡ. ಮಕ್ಕಳ ಅನಾರೋಗ್ಯ ಕಂಡು ಮಿಡುಕುವ ಇದೆ ಅಪ್ಪ ಹೆಂಡತಿಗೆ ಆದ ಈ ಪರಿಯ ಗಾಯದಲ್ಲೂ ಏನನ್ನೋ ಗೆದ್ದವನಂತೆ ಕೂತಿದ್ದಾನೆ ಎನ್ನಿಸಿ “ಛೇ!. ನಾನೆಂದು ಇಂತಹ ಒಣ ಪ್ರತಿಷ್ಟೆಯ ಪುರುಷರ ಸಾಲಲ್ಲಿ ನಿಲ್ಲಬಾರದು. ತಂದೆಯ ಪಾತ್ರವೇ ತನಗೊಂದು ಪಾಠ” ಎಂದುಕೊಂಡ.

ಮಾತು ತಂದೆಯೆಂಬ ಗೌರವವನ್ನು ಮೀರಿ ಹೊರಟಿತು. “ಅಪ್ಪಾ. ನೀನೇನೂ ಮನುಷ್ಯನಾ? ಮೃಗನಾ? ತಲೆ ಒಡೆದು ಚೂರಾಗುವಂಗ್ಹೆ ಹೊಡೆದ್ಯಲ್ಲಾ. ನಿಂಗೀ ಪ್ರಾಯದಲ್ಲೂ ಅದೇನ್ ಪೌರುಷ? ಛೇ! ಮಕ್ಕಳ ಬೆಳ್ದು ನಿಂತರ ಅಂದೆ ಗುತ್ತಾಗುಲಾ ನಿಂಗೆ? ಮನೀಗೆ ದೊಡ್ಡಂವ ನೀನ. ಹಾಂಗೇ ಇರ್” ಎಂದು ಪಟಪಟನೆ ತಂದೆಗೆ ಗದರಿಸುವಂತೆ ನುಡಿದ. ವಯಸ್ಸಿಗೂ ಮೀರಿದ ಮಾತು ತನ್ನಿಂದ ಹೇಗೆ ಬಂತೆಂದು ಆತನಿಗೆ ಅರಿವಾಗಲಿಲ್ಲ. ಅಪ್ಪನೆಂದರೆ ತನಗೆ ಎಷ್ಟು ಭಯ ಆದರೆ ಆ ಭಯ ಈಗೆಲ್ಲಿ ಹೋಗಿದೆ.

ಒಳಗಿನಿಂದ ಜೋರು ನುಡಿ ಕೇಳಿಸಿಕೊಂಡ ಸಾತಮ್ಮ ತಟ್ಟನೆ ಒಳ ಬಂದಳು ನೆತ್ತರು ಒರಸಿಕೊಳ್ಳುತ್ತ, “ಏ ಸುಮ್ನೀರಾ, ಅವರನ್ಯಾಕೆ ಅಂತಿ. ಅವರೇನೂ ಮಾಡಲಾ. ನಾನೇ ನಾಗುಂದಿ ಮೇಲಿಂದ ಪಾತ್ರೆ ಇಳಿಸಿಕೊಳ್ತಿದ್ದೆ. ರ‍್ಯಾಗಿ ನೆತ್ತಿ ಮೇಲೆ ಚಕ್ಕುಲಿ ಮಾಡೂದ ಹಿತ್ತಾಳಿ ಬಟ್ಟಾಲ ಬಿತ್ತ. ಅದಕ್ಕೆ ರಕ್ತ ಬಂತ.” ಎಂದಳು.

ಇದು ಸುಳ್ಳೆಂದು ಆಕೆಯ ಅತ್ತು ಅತ್ತು ಊದಿಕೊಂಡ ಕಣ್ಣುಗಳೇ ಹೇಳುತ್ತಿದ್ದವು. ಅಮ್ಮ ಯಾಕೆ ಹಾಗೆ ಹೇಳುತ್ತಾಳೆಂದು ಆತನಿಗೆ ಗೊತ್ತು. ಇದು ಮೊದಲ ಬಾರಿಯಲ್ಲ. ಅವರಿಬ್ಬರ ನಡುವಿನ ಕಾದಾಟ ಮಾತಿಂದ ಶುರುವಾಗಿ ತಂದೆಯ ಪೆಟ್ಟಿನೊಂದಿಗೆ ಕೊನೆಗೊಳ್ಳುವುದು ಸಾಮಾನ್ಯ. ಆದರೆ ಈ ಪರಿಯ ಹೊಡೆತ ಹಿಂದೆಂದೂ ಹಾಕಿರಲಿಲ್ಲ ಆತ. ಬಹುಶಃ ಅಕ್ಕನ ಮದುವೆಯ ವಿಚಾರವಾಗೇ ಇರಬಹುದು. ಮಾತುಕತೆ ಎಲ್ಲೋ ಹೋಗಿ ಎಲ್ಲಿಗೋ ಬಂದು ಈ ಪ್ರಮಾದ ಎಂದುಕೊಂಡ. ಅಕ್ಕ.. ಪಾಪ.. ಬಿ.ಎಡ್. ಮುಗಿವರೆಗೂ ಮದ್ವೆ ಆಗಲ್ಲ.. ಅಂದ್ರೇ ತಂದೆ ಕೇಳ್ತಿಲ್ಲ. ಇದೆಲ್ಲಾ ಯಾಕಪ್ಪ ಹೀಗೆ? ಎಂದು ಬೇಸರಿಕೊಂಡ ಸಂಪ್ರೀತ.

ಅಮ್ಮ ಎಷ್ಟು ಹೇಳಿದರೂ ಆತ ಕೇಳಲಿಲ್ಲ. ಗೆಳೆಯನಿಗೆ ಫೋನಾಯಿಸಿ ರಿಕ್ಷಾ ತರಿಸಿ ತಾಯಿಯನ್ನು ಬಲವಂತವಾಗಿ ಕೂರಿಸಿಕೊಂಡು 10 ಕಿ.ಮಿ. ದೂರದ ಆಸ್ಪತ್ರೆಗೆ ಕರೆತಂದ. ಆ ಹೊತ್ತಿಗಾಗಲೇ ಮಧ್ಯಾಹ್ನ 2 ಗಂಟೆ… ಹೆಚ್ಚಿನ ಪೇಶಂಟುಗಳು ಇರಲಿಲ್ಲ. ವೈದ್ಯರು ಊಟದ ಸಮಯವೆಂದು ಎದ್ದು ಹೋಗಿದ್ದರು. ಅಲ್ಲೇ ಇದ್ದ ನರ್ಸ್‌ ಒಬ್ಬಳಲ್ಲಿ ವಿನಂತಿಸಿಕೊಂಡ. ಆಕೆ ಕುಳಿತುಕೊಳ್ಳಲು ಹೇಳಿ ಕನ್ಸಲ್ಟಿಂಗ್ ರೂಮು ಹೊಕ್ಕಳು. ಹೊರಗೆ ಕೂತ ಸಂಪ್ರೀತ ತಳಮಳಿಸುತ್ತಿದ್ದ. ಸಾತಮ್ಮ ಈ ಸ್ಥಿತಿಯಲ್ಲೂ ತನ್ನ ಮರೆತು ಬೇರೇನೋ ಯೋಚಿಸುತ್ತಿದ್ದಳು.

*****

ಗದ್ದೆ ಬಯಲಿಗೆ ಹಾಯಿಸಿದ ನೀರು ಬೆಳಗಿನ ಗುಂಟ ಹಾದು ಬರುತ್ತ ಇರುವದ ನೋಡುತ್ತ ತನ್ಮಯತೆಯಿಂದ ತಾನು ನೀರಿನ ಹರಿವಿನೊಂದಿಗೆ ಒಂದಾದ ಕ್ಷಣ ಅಷ್ಟೇ ಆಗಲೇ ಅಲ್ವೇ? ಕಪಿಲೆ ಕೂಗಿದ್ದು, ಆ ಕೂಗಿನಲ್ಲಿನ ನೋವಿನ ಎಳೆಗೆ ತನ್ನೊಳಗಿನ ಕರುಳು ಚಳ್ಳೆನ್ನಿಸಿದ್ದು.

ಕಪಿಲೆ… ಈಗಲೂ ಅದೇ ನೋವಿನ ದನಿ ಕೇಳಿದಂತಾಗುತ್ತಿದೆ. ಈ ನೋವಿನ ಮೂಲದಲ್ಲೂ ಆಕೆಯ ನೆನಪು. ಹೌದು ಆಕೆಯೂ ನನ್ನಂತೆ ಹೆಣ್ಣು. ಹೆಣ್ಣಿನ ನೋವು ಆ ಸೂಕ್ಷ್ಮ ಅವಳಿಗೆ ತಾನೆ ಅರ್ಥವಾಗೋದು. ಏನು ಮಾಡಲಿ.. ಏನು ಆಡಲಿ.. ಚಿಟಿಚಿಟಿ ಎನ್ನುತ್ತಿರುವ ತಲೆ, ಸುತ್ತಿದ ಬಟ್ಟೆ. ಆ ಡಾಕ್ಟರಮ್ಮ ಬರುವವರೆಗೂ ನಿಲ್ಲಬೇಕು. ಕಪಿಲೆ ಏನು ಮಾಡುತ್ತಿದ್ದಾಳೋ? ಬಾಣಂತಿ ಬೇರೆ.. ಮೊನ್ನೆ ಮೊನ್ನೆಯಷ್ಟೇ ಆಕೆಯೂ ಸುಧಾರ‍್ಸಿಕೊಳ್ತಿದ್ದಾಳೆ.. ಮನೆಗೆ ಹೋಗಿ ಅಕ್ಕಚ್ಚು ಕೊಡಬೇಕು. ಅಕ್ಕಿ ಬೆಲ್ಲ ಕಾಯಿ ಬೇಯಿಸಿ ಹಾಕ್ಬೇಕು. ಈಗ ಐದಾರು ದಿನವಾಯ್ತು. ಬರೀಯ ನೋವೇ ನೋವು.. ಕಪಿಲೆ ಕೈಗೆ ಸಿಗುವುದೇ ಇಲ್ಲವೆಂದುಕೊಂಡಿದ್ದಳು ಸಾತು. ಬಾಣಂತಿಯಾದ ಎರಡನೇ ದಿನಕ್ಕೆ ಸಂಜೆ ಹೊತ್ತು ಏಕಾಏಕಿ ಕಪಿಲೆ ಕೂಗಿಕೊಂಡಿದ್ದು ಇನ್ನು ತಾನು ಆ ಗುಂಗಿನಲ್ಲೇ ಇರುವೇನೇನೋ ಎನ್ನಿಸಿತು. ಯಾಕಿವತ್ತು ನನಗೆ ಇಂತಹ ಪರಿಸ್ಥಿತಿಯಲ್ಲೂ ಕಪಿಲೆಯೆ ಕಣ್ಮುಂದೆ ಎಂದು ಯೋಚಿಸಿತ್ತಿದ್ದವಳು ಮತ್ತದೇ ನೆನಪಿಗೆ ಜಾರಿದಳು.

ಆ ದಿನ ಸಂಜೆ ಹೊತ್ತು ಗದ್ದೆಗೆ ನೀರು ಹಾಯಿಸುತ್ತಾ ನಿಂತ ತಾನು ಒಂದೊಂದೆ ಗದ್ದೆಗಳ ಹಸಿಗೊಳಿಸುತ್ತ ಮತ್ತೆ ಮುಂದಿನ ಗದ್ದೆಗೆ ನೀರು ಬಿಡುತ್ತಾ ಇದ್ದೆ. ಇದು ಎರಡನೇ ಬೆಳೆ ಹಾಗಾಗಿ ಗದ್ದೆಯ ಬಯಲಿನ ಬಾವಿಯಿಂದಲೇ ನೀರು ಸರಬರಾಜಾಗಬೇಕು. ಒಂದು ಗದ್ದೆಯಿಂದ ಇನ್ನೇನು ಇನ್ನೊಂದು ಗದ್ದೆಗೆ ಬೆಲಗಿನ ತೋಡು ಬಗೆದು ಕೊಡುತ್ತಿದ್ದೆ. ಕಪಿಲೆಯ ಆರ್ತನಾದಕ್ಕೆ ಒಮ್ಮೇಲೆ ಓಡಿ ಕೊಟ್ಟಿಗೆಗೆ ಬಂದು ನೋಡಿದರೆ ಎದುಸಿರು ಬಿಡುತ್ತಾ ಬದುಕಿನ ಕೊನೆಯ ಕ್ಷಣ ಎಣಿಸುತ್ತಿರುವಂತೆ ಮೈ ಸೆಟೆಸಿ ಮಲಗಿತ್ತಲ್ಲ. ಸಾವಿನ ಕದ ನೂಕ್ತಾ ಇತ್ತು ಅನ್ಸಿತ್ತು. ತಡಿಲಾರದೆ,
“ಕಪಿಲೆ ಏನಾಯ್ತೇ ನಿಂಗೆ ಹಿಂಗ್ಯಾಕೆ ತಲಿ ರ‍್ಯೇ? ಅಯ್ಯೋ ದ್ಯಾವ್ರೇ ಏಗೇನ ಮಾಡ್ಲೇ”

ಎಂದು ಹಲಬ್ತಾ ಇದ್ದ ತಾನು ಅದ್ಯಾವ ಧೈರ್ಯ ಮೈಮೇಲೆ ಬಂತೋ ಮಗ ಗಂಡ ಇಬ್ಬರು ಮನೆಲಿಲ್ಲ. ಆದ್ರೂ ಯಾವತ್ತೂ ಫೋನಿನ ಗೋಜಿಗೆ ಹೋಗದ ತಾನು ಆ ದಿನ ಡೈರಿಯಲ್ಲಿ ಬರಿದಿಟ್ಟ್ ನಂಬರ ಹುಡ್ಕಿ ದನದ ಡಾಕ್ಟರಿಗೆ ಫೋನ್‌ ಮಾಡೇ ಬಿಟ್ಟನಲ್ಲಾ ಸೋಜಿಗವೇ ಎಂದುಕೊಂಡಳು.
ಕಪಿಲೆಯ ಮೈದಡವುತ್ತಾ ತಲೆಸವರುತ್ತ ಅದರ ಹತ್ತಿರವೇ ಕೂತು ಅದರೊಂದಿಗೆ ತಾನು ಕಣ್ಣೀರಿಡುತ್ತಾ ನಡುವೆ ಆ ದಿನವೆಲ್ಲಾ ಬದುಕಿನ ಇನ್ನೊಂದು ರೂಪ ಕಂಡಿದ್ದಳು.

ಅಮ್ಮ ಎಷ್ಟು ಹೇಳಿದರೂ ಆತ ಕೇಳಲಿಲ್ಲ. ಗೆಳೆಯನಿಗೆ ಫೋನಾಯಿಸಿ ರಿಕ್ಷಾ ತರಿಸಿ ತಾಯಿಯನ್ನು ಬಲವಂತವಾಗಿ ಕೂರಿಸಿಕೊಂಡು 10 ಕಿ.ಮಿ. ದೂರದ ಆಸ್ಪತ್ರೆಗೆ ಕರೆತಂದ. ಆ ಹೊತ್ತಿಗಾಗಲೇ ಮಧ್ಯಾಹ್ನ 2 ಗಂಟೆ… ಹೆಚ್ಚಿನ ಪೇಶಂಟುಗಳು ಇರಲಿಲ್ಲ. ವೈದ್ಯರು ಊಟದ ಸಮಯವೆಂದು ಎದ್ದು ಹೋಗಿದ್ದರು. ಅಲ್ಲೇ ಇದ್ದ ನರ್ಸ್‌ ಒಬ್ಬಳಲ್ಲಿ ವಿನಂತಿಸಿಕೊಂಡ. ಆಕೆ ಕುಳಿತುಕೊಳ್ಳಲು ಹೇಳಿ ಕನ್ಸಲ್ಟಿಂಗ್ ರೂಮು ಹೊಕ್ಕಳು.

ಬೆಳಿಗ್ಗೆ ಚೆನ್ನಾಗಿಯೇ ಇತ್ತಲ್ಲ. ಕಪಿಲೆ ಹಾಲು ಕರೆದು ತಾಯಿಯ ಕಡೆ ಕರು ಬಿಟ್ಟು ಬಂದಿದ್ದೆ. ಏಕದಂ ಏನಾಯ್ತೋ? ನನಗೇನು ತಿಳಿಯುತ್ತೆ. ಆದರೆ ಅಷ್ಟೇ ಹೊತ್ತಿಗೆ ಪಾಪ ಆ ಡಾಕ್ಟರರು ಸಂಜೆಯಾದರೂ ಬಂದೇ ಬಿಟ್ಟ್ರು. ಅಂತಹ ಮಾನವೀಯತೆಯ ವೈದ್ಯರಿರುವುದರಿಂದಲೇ ಮಳೆಬೆಳೆ ಆಗ್ತಾ ಇದೆ. ಎಂದು ಸಮಾಧಾನ ಅವಳಿಗೆ.

ತಾನು ಗರಬಡಿದಂತಾಗಿದ್ದೆ. ಮೈಮನಸ್ಸುಗಳು ಜಡ್ಡುಗಟ್ಟಿದ್ದವು. ದೇವರ ಜಪಿಸಿಕೊಳ್ಳುತ್ತ ಇದ್ದೆ. ಡಾಕ್ಟರ ರಾಮಪ್ಪ ಪಾಪ ಅದು ಇದು ಏನೆಲ್ಲಾ ಮಾಡಿದರು. ಬಾಣಂತಿ ದನಕ್ಕೆ ಏಕಾಏಕಿ ಹೆಣ್ಣು ಮಕ್ಕಳಂತೆ ಜೀವದಲ್ಲಿ ಕ್ಯಾಲ್ಸಿಯಂ ಕಡಿಮೆ ಆಗುತ್ತೆ ಅಂತ ಹೇಳಿ ಒಂದು ಬಾಟಲ್ ಸುಣ್ಣದ ನೀರನ್ನಾ ಡ್ರಿಪ್‌ಗೆ ಹಾಕಿ ಏರಿಸಿದ್ದರೂ ಅದರ ಉಸಿರಾಟದಲ್ಲಿ ಸರಾಗತೆ ಬಂತೇ ವಿನಃ ದನ ಎದ್ದು ನಿಲ್ಲಲಿಲ್ಲ. ಮತ್ತೊಂದು ಬಾಟಲಿ ಖಾಲಿಯಾದ್ರೂ ತಲೆ ಕೂಡಾ ಎತ್ತಲಿಲ್ಲ. ಆಗ ತಾನು ಪೂರ್ತಿ ಭೂಮಿಗಿಳಿದೇ ಹೋಗಿದ್ದೆ. ಆಗಲೇ ಅವರ‍್ಹೇಳಿದ್ದು ಕೊನೆಯ ಪ್ರಯತ್ನ ಎಂದು. ಅದೇ ಕರುವ ತಂದು ತಾಯಿ ಮುಂದೆ ನಿಲ್ಸು ಅಂತಾ. ಡಾಕ್ಟರ ಹೇಳಿದ್ದೇ ತಡ ಕೊಟ್ಟಿಗೆ ಮೂಲೇಲಿ ಬಿದ್ಕೋಂಡಿದ್ದ ಕರು ಎತ್ತಿ ತಂದಿದ್ದೆ. ಅದ್ಯಾವ ಚಮತ್ಕಾರವೋ ಕರು ಕಪಿಲೆ ಹತ್ತಿರ ಬಂದು ಎರಡು ಸಾರಿ “ಅಂಬಾ.. ಅಂಬಾ” ಅನ್ನುತ್ಲೇ, ತಾಯಿಯ ಮೂತಿಗೆ ಬಾಯಿಯಿಂದ ಮೂಸುತ್ಲೇ ಆ ಹೊತ್ತಿನವರೆಗೂ ಭರವಸೆಯೇ ಇಲ್ಲದಿದ್ದ ಕಪಿಲೆ ಘಕ್ಕನೆ ತಲೆ ಎತ್ತಿ ನೋಡಿದ್ದಳು. ಆಶ್ಚರ್ಯದಲ್ಲಿ ಆಶ್ಚರ್ಯ… ಅನ್ನೊ ಹಾಂಗೆ ತಾನು ದೊಡ್ಡದಾಗಿ ಅಂಬಾ… ಎಂದು ಕೂಗುತ್ತಾ ಎದ್ದು ನಿಂತೇ ಬಿಟ್ಳು. ಅದೆಂಥಾ ವಾತ್ಸಲ್ಯ. ಮಾತೃಪ್ರೇಮ ಅಂದ್ರೇ ಅದೇ ಅಲ್ಲಾ. ಉಕ್ಕಿ ಹರಿತಾ ಇದ್ದ ಆ ಭಾವಕ್ಕೆ ಬೆಲೆ ಕಟ್ಟೋದ ಸಾದ್ಯವೇ? ಅಯ್ಯೋ ದೇವ್ರೇ ಹೆಣ್ಣು ಕರುಳೆಷ್ಟು ಮೃದು. ತನ್ನ ಸಾವಿನಲ್ಲೂ ಕರುವಿನ ದನಿ ಸತ್ತ ಜೀವ ಉಳಿಸುವಷ್ಟು. ಎಂತಹ ಪ್ರೇಮ ಭಾವ ಸ್ಪುರಣೆ ಎಂದು ಸಾತು ಯೋಚಿಸ್ತಾ ತಾನು ಈ ಸ್ಥಿತಿಯಲ್ಲೂ ಗಂಡನ ಮೇಲಿನ ಪ್ರೀತಿಗೆ ಸುಳ್ಳು ಹೇಳೋ ಧೈರ್ಯ ಮಾಡಿದ್ದು ನೋಡಿ ನಗು ಬಂತು. ಸಾವಿನ ದಾರಿಯಲ್ಲಿ ಕೂಡ ನಮ್ಮಂತಹ ಹೆಣ್ಣುಗಳು ಕುಟುಂಬ ಗಂಡ ಬದುಕು ಮಕ್ಕಳು ಅಂತೆಲ್ಲಾ ಜವಾಬ್ದಾರಿಗಳ ಮಧ್ಯೆ ನಮಗೆ ನಾವೇ ಕಳೆದ ಹೋಗಿರ‍್ತೀವಿ ಅನ್ನಿಸಿತು. ಆದರೂ ಗಂಡನ ವಿರುದ್ಧ ತಾನು ನುಡಿಯಲಾರೆ ಎನ್ನಿಸಿತು. ಆಕೆ ಮುಂದೆ ಯೋಚಿಸಲಿಲ್ಲ.

*****

ಆಗಷ್ಟೇ ಬೆಳಿಗ್ಗೆಯ ಎಲ್ಲ ಡ್ಯೂಟಿ ಮುಗಿಸಿ ಬಂದು ಊಟಮಾಡಿ ಹಾಗೆ ಕುರ್ಚಿಗೊರಗಿದ ಡಾ.ಸುದತಿ ಸಂದಿಗ್ಧ ಮನಸ್ಥಿತಿಯಲ್ಲಿದ್ದಳು ಆ ದಿನ. ಬೆಳ್ಳಿಗ್ಗೆ ಮನೆಯಲ್ಲಿಯ ರಾದ್ಧಾಂತ ನೆನಪು ಬೇಡವೆಂದರೂ ಪುನಃ ಪುನಃ ಮನಃಪಟಲದಲ್ಲಿ ಹಾದು ಹೋಗುತ್ತಿತ್ತು. ಅದೇ ಗಂಡನಿಗೆ “ಮಾಡಿಟ್ಟ ತಿಂಡಿ ಹಾಕಿಕೊಂಡು ತಿನ್ನಿ” ಎಂದು ಹೇಳಿದ್ದೇ ಅಪರಾಧವೆಂದೆಣಿಸಿ ಬೆಳಿಗ್ಗೆಯ ತಿಂಡಿ ಮಾಡದೇ ಆಕೆಯನ್ನು ನಿಂದಿಸಿ ಖಾಲಿ ಹೊಟ್ಟೆಯಲ್ಲೆ ಹೊರಟು ಹೋಗಿದ್ದ ಪತಿರಾಯ. ಇಷ್ಟೆಲ್ಲಾ ಓದಿ ಡಾಕ್ಟರಗಿರಿ ದಕ್ಕಿಸಿಕೊಂಡು ದೊಡ್ಡ್ ಆಸ್ಪತ್ರೆಯಲ್ಲಿ ಸೀನಿಯರ್ ಡಾಕ್ಟರಾಗಿ ಕೆಲಸ ಮಾಡ್ತಿದ್ದು, ಮನೆಗೆ ಸಂಜೆಗೆ ಹೋಗುವವರೆಗೂ ಚಾ ಸಲುವಾಗಿ ತನ್ನ ದಾರಿ ಕಾಯುತ್ತ ಕುಳಿತುಕೊಳ್ಳುವ ಪ್ರಾಧ್ಯಾಪಕ ಪತಿರಾಯ ಆಕೆಯ ಕಣ್ಮುಂದೆ ಬಂದ. ದಿನವೊಂದಕ್ಕೆ ಒಂದೇ ತರಗತಿ ಬೋಧಿಸಿ, ಆಯಾಸ ಎಂದು ಬರುವ ಆತ ತನ್ನ ನಿತ್ಯದ ಕೆಲಸದ ಅರ್ಧದಷ್ಟನ್ನು ಮಾಡುವುದಿಲ್ಲ. ಸುಸ್ತಾಗಿ ಬರುವ ನಾನೇ ಚಾ ಮಾಡಿ ಕೈಗಿಡಬೇಕು. ಮನೆಗೆಲಸದಲ್ಲೂ ಕೆಲಸದವರ ಅಡುಗೆ ಹಿಡಿಸದೆಂದು ತಾನೆ ಮಾಡಿ ಬಡಿಸಬೇಕೆಂಬ ಹಠ ಬೇರೆ. ಅದೆಲ್ಲವನ್ನೂ ನಿಭಾಯಿಸುವ ತನ್ನ ಕೆಲಸದ ಮೇಲೆ ಒಂದು ದಿನವೂ ಪ್ರಶಂಸೆಯಿಲ್ಲ, ಕೇಳಿದರೆ “ಈಗೀನ ಕಾಲದ ಎಲ್ಲ ಹೆಣ್ಣು ಮಕ್ಕಳು ಹಾಗೆ ಮಾಡುತ್ತಾರೆ ನೀನೊಬ್ಬಳೇ ಅಲ್ಲ!” ಎಂಬ ಉಢಾಫೆಯ ಉತ್ತರ. ಭಾಷಣಗಳಲ್ಲಿ ದೊಡ್ಡದಾಗಿ ಸ್ತ್ರೀ ಸಾಧನೆ ಬಗ್ಗೆ ಸಮಾನತೆ ಬಗ್ಗೆ ಕೊರೆವ ಗಂಡ ಮನೆಯಲ್ಲಿ ಅದೇ ಧಾರ್ಷ್ಟ್ಯ. ಆಕೆಗೆ ಆಶ್ಚರ್ಯ ಹೆಂಗಸರಿಗೇಕೆ ಕರುಣೆ ವಾತ್ಸಲ್ಯ, ಪ್ರೀತಿ ಮಮತೆ, ಮಮಕಾರ ಗಂಡಿಗಿಂತ ಅಧಿಕ. ಆ ಹಂಗಿಗೆ ಬಿದ್ದೇ ಅಲ್ಲವೇ ನಾವೆಲ್ಲ ಗಂಡಂದಿರ ಈ ಎಲ್ಲ ದಬ್ಬಾಳಿಕೆಯನ್ನು ಪ್ರೀತಿಯ ಇನ್ನೊಂದು ಮುಖದಂತೆ ಸ್ವೀಕರಿಸುತ್ತಾ ಬಂದಿರೋದು ಅನ್ನಿಸಿತು. ಎದೆಯೊಳಗೆ ಗಂಡಿನ ದರ್ಪದ ಅರಿವಿದ್ದರೂ ಆತ ದಬ್ಬಾಳಿಕೆ ಮಾಡುತ್ತಿದ್ರೂ ಆತನ ಮುಖವನ್ನು ಜಗತ್ತಿಗೆ ಪರಿಚಯಿಸಲೊಲ್ಲದ ವಿಚಿತ್ರ ಮಾನಸಿಕ ಸ್ಥಿತಿ ಸ್ವಯಂಸಂಪಾದಿಸಿ ಉಣ್ಣಿತ್ತಿರುವ ತನ್ನಂತಹ ಎಷ್ಟೋ ಹೆಣ್ಣುಮಕ್ಕಳ ಮನಸ್ಥಿತಿ ಕೂಡ ಎಂದುಕೊಂಡಳು.

ತಟ್ಟನೆ ಡಾ. ಸುದತಿಗೆ ಮನೋವೈಜ್ಞಾನಿಕ ಪರಿಭಾಷೆಯಲ್ಲಿ “ಸ್ಟಾಕ್ ಹೋಮ್ ಸಿಂಡ್ರೋಮ್” ಎಂದು ಕರೆಸಿಕೊಳ್ಳುವ ಮಾನಸಿಕ ಅಸಂತುಲನತೆ ಬಗ್ಗೆ ನೆನಪಾಯಿತು. ಅಪಹರಣಕಾರರಿಂದ ಅಪಹರಿಸಲ್ಪಟ್ಟ ಒತ್ತೆಯಾಳುಗಳು ಅದ್ಯಾವ ಕಾರಣಕ್ಕೋ ತಮ್ಮ ಅಪಹರಣಗೈದವರ ಬಗೆಗೆ ಬೆಳೆಸಿಕೊಳ್ಳುವ ವಿಚಿತ್ರವಾದ ಬಾಂಧವ್ಯ. ತನಗೆ ಕಿರುಕುಳ ತೊಂದರೆ ಕೊಡುತ್ತಿದ್ದವರ ಕುರಿತು ಪೋಲಿಸರಿಗೆ ವಿವರಗಳ ನೀಡದೇ ಅಪಹರಣಕಾರನ ಬಗ್ಗೆಯೇ ಅತಿಯಾದ ಕಾಳಜಿ ತೋರುವ ಮನೋವ್ಯಾಕುಲತೆ. ಮಾನಸಿಕ ಅವಲಂಬನೆ. ಅದೇ ಸ್ಟಾಕ್ ಹೋಮ್ ಸಿಂಡ್ರೋಮ್. ಮೊತ್ತಮೊದಲ ಸ್ವೀಡನ್ನಿನ್ ಸ್ಟಾಕ್‌ಹೋಮ್ ಎಂಬಲ್ಲಿ ಬ್ಯಾಂಕ್‌ ದರೋಡೆಕೋರ ಅಪಹರಣಕಾರರಿಂದ ಅಪಹರಿಸಲ್ಪಟ್ಟ ಒತ್ತೆಯಾಳುಗಳು ಈ ಮನಸ್ಥಿತಿಯನ್ನು ತೋರಿಸಿದ್ದ ಕಾರಣ ಅದಕ್ಕೆ ಆ ಹೆಸರು ಎಂದು ಓದಿದ ನೆನಪು. ಈಗಾಕೆ ಅಂದುಕೊಂಡಳು ಹೆಣ್ಣು ಕೂಡಾ ಹೀಗೆ ತನ್ನ ಪತಿಯ ಬಗ್ಗೆ ಆತನ ದೌರ್ಜನ್ಯಗಳ ಹೊರತಾಗಿಯೂ ಹೊಂದುವ ಮಾನಸಿಕ ಅವಲಂಬನೆ ಈ ರೀತಿ ಆತನ ಬೆಂಬಲಿಸುವ ಕಾರಣವಿರಬಹುದೆನ್ನಿಸಿತು. ಇದು ಇನ್ನೊಂದು ರೀತಿಯಲ್ಲಿ ಅದೇ ಮನೋವೈಜ್ಞಾನಿಕ ಮೈತ್ರಿ ಇರಬಹುದು ಎಂದುಕೊಳ್ಳುತ್ತಿರುವಾಗಲೇ ನರ್ಸ ಬಂದು

“ಡಾಕ್ಟರೇ, ಒಂದೇ ಒಂದು ಕೇಸು. ಹೊರಗೆ ಒಪಿಡಿಯಲ್ಲಿ ಕೂತಿದ್ದಾರೆ. ತಾಯಿ ಮಗ ಇಬ್ಬರೇ ಬಂದಿದ್ದಾರೆ. ಹೆಂಗಸು ತಲೆಗೆ ಪೆಟ್ಟು ಬಿದ್ದಂಗಿದೆ. ಮಗ ಒಂದ್ಚೂರು ನೋಡಿ ಅಂತಾ ಅಂಗಲಾಚ್ತಿದ್ದಾನೆ”

ಎನ್ನುತ್ತಲೇ ಆಯಾಸಗೊಂಡಿದ್ದರೂ ಹಾಗೆ ಎದ್ದು ಸ್ಟೇತಸ್ಕೋಪ್‌ ಕೈಲಿಡಿದು ಹೊರಗೆ ಬಂದಳು. ಅದು ಊಟದ ಸಮಯ. ಬೇರೆ ಪೇಶಂಟುಗಳು ಇರಲಿಲ್ಲ. ತಾಯಿ ಮಗನ ನೋಡಿ
“ಬನ್ನಿ, ಅಮ್ಮ ಒಳಗೆ” ಕರೆದಳು. ಗ್ಲೌಸ್ ತೊಟ್ಟು ಗಾಯ ಪರೀಕ್ಷಿಸಲು ನೋಡಿದರೆ ಗಾಯ ತೀರಾ ಆಳಕ್ಕೆ ಇಳಿದಂತೆ ಕಂಡಿತು. ಚುಚ್ಚಿದಂತೆ ತೋರುತ್ತಿದ್ದ ಗಾಯ ನೋಡಿ ಕೇಳಿದಳು.

“ಹೇಗಾಯ್ತಮ್ಮಾ ಇದು. ತುಂಬಾ ರಕ್ತ ಸೋರಿದೆ” ಎನ್ನುತ್ತಲೇ ತಟ್ಟನೆ ಸಾತಮ್ಮ ಮಗ ಏನಾದ್ರೂ ಉಲ್ಟಾ ಮಾತಾಡಿದ್ರೇ ಅಂತಾ
“ಅದೇನಿಲ್ಲಾ, ಡಾಕ್ರ‍್ರೇ. ಅದು ನಾನು ನಾಗುಂದಿ ಮೇಲಿಂದ ಚಕ್ಕುಲಿ ಬಟ್ಟಲು ತೆಗೀತಿದ್ದೆ. ಕೈಜಾರಿದ ರಭಸಕ್ಕೆ ತಲೆ ಮೇಲೆ ಬಿತ್ತು” ಎಂದುಸುರಿ ಮಗನ ಕಡೆ ನೋಡಿದಳು. ಅವಳ ಕಳವಳದ ಮಾತು ನಡೆ ನೋಡಿ ಡಾ. ಸುದತಿಗೆ ಮೊದಲೇ ಬಂದ ಗುಮಾನಿ ಧೃಢವಾಯ್ತು. ಇದು ಬರಿಯ ಪಾತ್ರೆ ತಲೆ ಮೇಲೆ ಬಿದ್ದ ಗಾಯ ಅಲ್ಲ. ಬದಲಿಗೆ ರಭಸದಿಂದ ಬಡಿದ ಗಾಯ. ಅದು ಹರಿತ ಆಯುಧದಿಂದ ಅನ್ನಿಸಿತು. ಆದರೆ ಮೊದಲೇ ನವೆದ ಮನಸ್ಸು ದೇಹದ ಸಾತಮ್ಮನನ್ನು ಮತ್ತೆ ಪ್ರಶ್ನಿಸಬೇಕೆನಿಸಲಿಲ್ಲ, ಏನೋ ಇರಬಹುದು ಎಂದು ಊಹಿಸಿದಳು. ನರ್ಸ್‌ ಕಿಟ್ ತಂದು ಕೊಡುತ್ತಲೂ ಡಾ. ಸುದತಿ “ಸಿಸ್ಟರ್, ಗಾಯದ ಸುತ್ತಲ ತಲೆಕೂದಲ ಕತ್ತರಿಸಿ ಹಾಕಿ, ಬ್ಯಾಂಡೇಜ ಮಾಡ್ವಾಗ ತೊಂದರೆಯ್ಗಾದ್ಹಾಗೆ, ಮತ್ತೆ ಗಾಯನ ಕ್ಲೀನ್ ಅಪ್ ಮಾಡಿ” ಎಂದು ಹೇಳಿ ಪ್ರೀಸ್ಕಿಪ್ಷನ್ ಬರೆಯಲಾರಂಭಿಸಿದಳು. ಅಲ್ಲೆ ಆಲೋಚನೆಗಳು ಆಕೆಯ ಮುತ್ತಿಕೊಂಡವು.

ಹೌದು ಹೆಣ್ಣು ಬದುಕಿನುದ್ದಕ್ಕೂ ರಾಜಿಯಾಗುತ್ತಲೇ ಹೋಗುತ್ತಾಳೆ. ಆದರೂ ಅವಳ ತ್ಯಾಗವನ್ನು ಪುಸ್ತಕದ ಬದನೆಕಾಯಿಯಾಗಿ ಹಾಡಿ ಹೊಗಳುತ್ತಾರೆಯೇ ಹೊರತು ಅವಳಿಗೆ ಮನೆಯಲ್ಲಿ ಅದಕ್ಕಾಗಿ ಯಾವ ಪ್ರೋತ್ಸಾಹವೂ ಸಿಗದು. ಅದಾಕೆಯ ಕರ್ತವ್ಯ ಎನ್ನುವವರೇ ಎಲ್ಲ. ಎಂದುಕೊಳ್ಳುತ್ತಿರುವಾಗಲೇ ಆಕೆಯ ಯೋಚನೆಗೆ ಕಡಿವಾಣ ಹಾಕುವಂತೆ
“ಮೇಡಂ. ಕ್ಲೀನ್ ಮಾಡಿಯಾಯ್ತು” ಎಂದು ನರ್ಸ್‌ ಹೇಳುತ್ತಲೇ ಸುದತಿ ಬ್ಯಾಂಡೇಜ್‌ ಮಾಡಲು ಸಿದ್ಧಳಾದಳು. ಮಗನನ್ನು ಹೊರಗೆ ಕಳಿಸಿ ಸಾತಮ್ಮನಿಗೆ ನಿಧಾನವಾಗಿ ಅದು ಇದು ಕೇಳುತ್ತ ಅರಿವಾಗದಂತೆ ಬ್ಯಾಂಡೇಜ್‌ ಮುಗಿಸಿ, ಇಂಜೆಕ್ಷನ್ ಏರಿಸಿ, ಸ್ವಲ್ಪ ಹೊತ್ತು ಅಲ್ಲೇ ವಿಶ್ರಮಿಸುವಂತೆ ಹೇಳಿ ಹೊರ ಬಂದಳು.

ಸಂಪ್ರೀತ ಪಾಪ. ಡಾಕ್ಟರ ಕಂಡೊಡನೆ ಎದ್ದು ನಿಂತು ಕೈ ಜೋಡಿಸಿ ವಿನಮ್ರತೆ ತೋರಿದ. “ಹೇಗಾಯ್ತು ಇದು. ಬಹುಶಃ ಅವರು ಹೇಳಿದ ಕಾರಣದಿಂದಲ್ಲ ಅನ್ಸುತ್ತೆ” ಎಂದೊಡನೆ ಆತ ಸತ್ಯ ಹೇಳಿಬಿಟ್ಟ. “ಇಲ್ಲ! ಡಾಕ್ಟರ್, ಅಪ್ಪಾ ಕೋಪದಲ್ಲಿ ಕೈಲಿದ್ದ ಮೊಳೆ ಇದ್ದ ಕೋಲಿನಲ್ಲಿ ಬಡಿದಿದ್ದಾರೆ. ಹಾಂಗಾಗೇ ಆಳ ಗಾಯ ಆಗಿದೆ” ಎಂದ. ಅಷ್ಟೊತ್ತಿಗೆ ಸಾತಮ್ಮ ಹೊರಬರುತ್ತಲೂ ಸಂಪ್ರೀತ ಬಿಲ್ ಪಾವತಿಸಿ ನಮಸ್ಕರಿಸಿ ಅವರಿಬ್ಬರೂ ಹೊರನಡೆದರು.

ಡಾ. ಸುದತಿ ಮುಖದಲ್ಲೊಂದು ವಿಷಾದದ ನಗೆ. ಹೌದು ತನ್ನಂತೆ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಇನ್ನೊಂದು ಜೀವ ಇದು. ಅದೇ ಮನೋವೈಜ್ಞಾನಿಕ “ಕ್ಯಾಪ್ಚರ್ ಬೊಂಡಿಂಗ್” ಮಾನಸಿಕ ಮೈತ್ರಿ. ದೌರ್ಜನ್ಯಕ್ಕೆ ಬಸವಳಿದರೂ ಪ್ರೇಮದ ಸಂಸಾರ ತೂಗುವ ಹತ್ತಾರು ಸಾವಿರಾರು ಹೆಣ್ಣು ಮುಖಗಳು ಆಕೆಯ ಮನಃ ಪಟಲದಲ್ಲಿ ಮೂಡಿ ಮರೆಯಾದವು.

*****

ಕಥೆಯಕುರಿತು

ಬದುಕು ಗೊಂದಲಗಳ ಗೂಡು. ಹಾಗಾಗೇ “One’s real life is often the life that one does not lead” ಹೀಗೆ ಹೇಳಿದವರು ಆಸ್ಕರ್ ವೈಲ್ಡ್. ಇದನ್ನೇ ಪ್ರತಿಪಾದಿಸುವಂತೆ ನಮ್ಮ ಭಾರತೀಯ ಸಾಮಾಜಿಕ ಬದುಕಿನಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳೆಯೂ ಸೇರಿದಂತೆ ಸಾಮಾನ್ಯ ಮಹಿಳೆಯರೂ ಬಯಸುವ ಬದುಕಿಗೂ, ನಡೆಸುತ್ತಿರುವ ಬದುಕಿಗೂ ವ್ಯತ್ಯಾಸವಿದೆ. ಒಂದರ್ಥದಲ್ಲಿ ಆಕೆ ತನ್ನ ಬದುಕನ್ನು ಬದುಕುತ್ತಿರುವುದಿಲ್ಲ. ಇದನ್ನೇ ಮೂಲ ವಸ್ತುವಾಗಿಟ್ಟುಕೊಂಡು ಈ ಕಥೆಯ ಬರೆಯಹೊರಟಾಗ ಒಳನೋಟದಲ್ಲಿ ದಕ್ಕಿದ ಸ್ತ್ರೀತ್ವದ ಮಹಿಮೆ ತಾಯ್ತನವೂ ತಳಕು ಹಾಕಿಕೊಂಡಿತು. ಹೌದು ಹೆಣ್ಣಿನ ಜೀವನದಲ್ಲಿ ಅಗಾಧವಾದ ಅರ್ಥವನ್ನು ಪ್ರಾಮುಖ್ಯತೆಯನ್ನು ಹೊಂದಿರುವ ಸಂಗತಿ ಎಂದರೆ, ಅದೇ ತಾಯ್ತನ. ಬರಿಯ ಮಾನವ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲದ ತಾಯ್ತನದ ಪುಳಕ ಆಕೆಗೆ ಮಾತ್ರ ಗೊತ್ತು. ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಆಕೆ ಸಾವನ್ನು ಜಯಿಸಬಲ್ಲವಳಾಗುತ್ತಾಳೆ. ಈ ಕಥೆಯಲ್ಲಿ ಉಲ್ಲೇಖಿಸಿದ ಆಕಳು ಕಪಿಲೆಯ ಸಂಗತಿ ನಮ್ಮ ಹಳ್ಳಿ ಜೀವನದ ಅನುಭವದ ಸಂಗತಿ. ಹೆಣ್ಣು ತಾಯಿಯಾಗಿ ಆ ನಿಟ್ಟಿನಲ್ಲಿ ಏಗುವ ಎಲ್ಲ ಭಾರವೂ ಕುಡಿಗಳ ಶ್ರೇಯೋಭಿಲಾಷೆಗೆ ಎಂಬುದ ಕಟ್ಟಿಕೊಡಬೇಕಿತ್ತು.
ಇನ್ನು ಕೌಟುಂಬಿಕ ಬಾಂಧವ್ಯದ ಸಾರವನ್ನು ಉಳಿಸುವ ಜವಾಬ್ದಾರಿಯನ್ನು ಸಮಾಜ ಹೆಣ್ಣಿನ ತಲೆಗೆ ಕಟ್ಟಿರುವುದು, ಈ ಹಿನ್ನೆಲೆಯಲ್ಲೇ ಯೋಚಿಸುವುದಾದರೆ ಉದಾಹರಿಸಬಹುದಾದ ಸಂಗತಿ ಎಂದರೆ ಅದು “ಕ್ಯಾಪ್ಚರ್ ಬೊಂಡಿಂಗ್” ಎಂಬ ಮನೋವೈಜ್ಞಾನಿಕ ಮೈತ್ರಿ ವಿಚಿತ್ರ ಮಾನಸಿಕ ಬಂಧ. ತನ್ನನ್ನು ಹಿಂಸಿಸುವ ವ್ಯಕ್ತಿಯನ್ನೇ ಅತಿಯಾಗಿ ಪ್ರೀತಿಸುವ, ಒಳಿತನ್ನು ಬಯಸುವ ಈ ವಿಚಿತ್ರ ಹೆಣ್ಣಿನ ಸಂದಿಗ್ಧ ಮಾನಸಿಕ ಸ್ಥಿತಿ. ಅದಕ್ಕೆ ವೈದ್ಯೆಯಾಗಿ ತನ್ನದೇ ಸ್ಥಾನಮಾನ ಹೊಂದಿದ ಡಾ. ಸುದತಿಯಾಗಲೀ, ಇಲ್ಲ ಮನೆವಾಳ್ತೆಯ ಹೆಣ್ಣಾದ ಸಾತಮ್ಮನಾಗಲೀ ಹೊರತಾಗದೇ ಅದೇ ಚೌಕಟ್ಟಿನಲ್ಲಿ ಅಸಹನೆಯಲ್ಲಿಯೇ ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಹೋಗುವುದು ವಿಪರ್ಯಾಸ. ಬದುಕಿನ ಸಣ್ಣ ಸಣ್ಣ ಸಂಗತಿಗಳಲ್ಲಿಯೇ ಹುದುಗಿರುವ ಸ್ತ್ರೀ ಪುರುಷತಾರತಮ್ಯ, ಆಕೆಯ “recognizing agent” ಪುರುಷನೇ ಎಂಬ ಮನೋಧರ್ಮಇನ್ನೂ ಬದಲಾಗದೇ ಇರುವ ನಮ್ಮ ಸಮಾಜದ ನೀತಿಯನ್ನು ವಿಡಂಬಿಸುವ ಹಿನ್ನೆಲೆಯಲ್ಲಿ ಸ್ವತಃಜೀವನಾನುಭವದಿಂದ ಪಡಿಮೂಡಿದ ಕಥೆ “ಸ್ಟಾಕ್ ಹೋಂ ಸಿಂಡ್ರೋಮ್”