ಕಡಿದ ಮರದ ಸೀಳಿನೆಡೆಯಿಂದ
ಟಿಸಿಲೊಡೆದ ಹೊಸ ಚಿಗುರು
ಸಾರ್ವತ್ರಿಕ ಸತ್ಯವೊಂದನ್ನು ನುಡಿಯಿತು-
“ಏನಾದರಾಗಲಿ ಮರಳಿ ಚಿಗುರು”

***

ಕನ್ನಡಿಯೆದುರು ನಿಂತ ನನ್ನಲ್ಲಿ ಪ್ರಶ್ನೆಯಿತ್ತು-
“ನಾನು ಸತ್ಯವೋ? ಅಲ್ಲಾ ಕನ್ನಡಿಯೊಳಗಿನವನೋ?”
ಕನ್ನಡಿಯೊಳಗಿನವನಿಗೂ ಅದೇ ಪ್ರಶ್ನೆ
ಇದ್ದಿರಬಹುದು

***

ಅನ್ಯಮತೀಯರ ಮೇಲೆಸೆದ
ಕಲ್ಲನ್ನು ಎತ್ತಿಕೊಂಡು ನೋಡಿದೆ
ಅಲ್ಲಿ ನನ್ನಿಷ್ಟದ ದೇವರು
ಕಣ್ಣೀರು ಸುರಿಸುತ್ತಿದ್ದ

***

ಪಂಜರದ ಗಿಳಿಯನ್ನು ಹೊರಬಿಟ್ಟೆ
ಮರಳಿ ಬಂದು ನನ್ನನ್ನೇ ಪ್ರಶ್ನಿಸಿತು-
“ನೀನು ‘ಮುಕ್ತ’ನಾಗುವುದು ಯಾವಾಗ?”

***

ನಿದ್ರೆ ಕದಿಯುವ ಕನಸುಗಳು
ಬದುಕಿನ ಪಯಣಕ್ಕೆ
ನೆರವಾಗುವ ಅಡಿಗಲ್ಲುಗಳಾಗುತ್ತವೆ

***

ಕೆಲವೊಮ್ಮೆ ಹೀಗಾಗುತ್ತದೆ
ಅಂಗಿಯ ಕಿಸೆ ದೊಡ್ಡದಾದಷ್ಟೂ
ಹೃದಯದ ಬಾಗಿಲು ಚಿಕ್ಕದಾಗುತ್ತದೆ