ಇಷ್ಟು ನೊಂದಿರಲಿಲ್ಲ ನಾನೆಂದೆಂದೂ
ಹುತ್ತದಿಂದ ಹೊರಬಿದ್ದ ಹಾವುಗಳ ಹಿಂಡು ಬಿದ್ದಿವೆ ಬಾಗಿಲಲ್ಲಿ
ಹರಡಬಹುದು ವಿಷ ನರನರಗಳಲ್ಲಿ ಇನ್ನು ಯಾವುದೇ ಕ್ಷಣದಲ್ಲೂ
ನಾನು ನಿಟ್ಟಿಸಿ ನೋಡುತ್ತಿದ್ದೇನೆ ಜೊಲ್ಲು ಚೆಲ್ಲುತ್ತಿರುವ ಬಾಯಿಗಳತ್ತ
ಓಡಿಹೋಗಿ ಮೂಲೆಯಲ್ಲಿಟ್ಟಿದ್ದ ಕೋಲ ಕೈಯಲ್ಲಿ ಹಿಡಿಯಬೇಕು
ಮತ್ತು ಎದೆಯುಬ್ಬಿಸಿ ನಿಲ್ಲಬೇಕು – ಹೀಗೆ ಅನಿಸುವುದೇ ಇಲ್ಲ ಕೊಂಚವೂ
ಇಷ್ಟು ಹೆಪ್ಪುಗಟ್ಟಿರಲಿಲ್ಲ ನಾನೆಂದೆಂದೂ
ಇಷ್ಟು ನೊಂದಿರಲಿಲ್ಲ ನಾನೆಂದೆಂದೂ
ನಸುನಗುವ ಸುಂದರ ಮುಖವೊಂದು ಗರಗರ ಸುತ್ತುತ್ತಿದೆ ನನ್ನ ಸುತ್ತಮುತ್ತ
ನನ್ನ ದೃಷ್ಟಿ ನೆಟ್ಟಿದೆ ಕಿಟಕಿಯಾಚೆ ಬೆಳಕು ಕ್ಷೀಣಿಸಿದ ರಸ್ತೆಯ ಮೇಲೆ
ಅಂಗಳದಲ್ಲಿ ಬಿರಿದ ಹೂವಿನ ಸುವಾಸನೆಯನ್ನು ಭಾವಿಸುತ್ತಿಲ್ಲ ಮನ
ಎದುರು ತಿರುವಲ್ಲಿ ಹೂದುಂಬಿರುವ ಗುಲಮೋಹರ ಸೆಳೆಯುತ್ತಿಲ್ಲ ನನ್ನ
ನಿಸ್ತೇಜ ದೇಹವನ್ನು ಮುದುಡಿ ಎಸೆಯುತ್ತೇನೆ ಕುರ್ಚಿಯ ಮೇಲೆ
ಇಷ್ಟು ನಿರ್ಜೀವವಾಗಿರಲಿಲ್ಲ ನಾನೆಂದೆಂದೂ
ಇಷ್ಟು ನೊಂದಿರಲಿಲ್ಲ ನಾನೆಂದೆಂದೂ
ಮುಖಗಳೇ ಇರದ ಈ ಮನುಷ್ಯರು ಕಾಲು ಕಿತ್ತಿ ಪಲಾಯನ ಮಾಡುತ್ತಿದ್ದಾರೆ
ಗೊತ್ತಿಲ್ಲವೇ ಅವರಿಗೆ – ಅಲ್ಲಿಯೂ ಮಾರಣಹೋಮ ನಡೆಯುತ್ತಿದೆಯೆಂದು
ಹೊಟ್ಟೆಯ ಸುತ್ತಿಕೊಂಡಿರುವ ಮಹಾಮಾರಿಯ ಹೊತ್ತು ನಾನಿಲ್ಲಿ ಬಂದಿದ್ದೇನೆ
ಉಸಿರು ಕಟ್ಟುತ್ತಲಿದೆಯೀಗ, ಓಡಿ ಹೋಗುವುದಾದರೂ ಎಲ್ಲಿಗೆ?
ಮನೆಗೂ ಇಲ್ಲ, ಮಸಣಕೂ ಇಲ್ಲದ ಸ್ಥಿತಿ, ಮರೆಯಬೇಕೇನು ಬಾಳ್ವೆಯ ಮತ್ತಿನ್ನು?
ಇಷ್ಟು ತಿವಿತಕ್ಕೊಳಗಾಗಿರಲಿಲ್ಲ ನಾನೆಂದೆಂದೂ
ಇಷ್ಟು ನೊಂದಿರಲಿಲ್ಲ ನಾನೆಂದೆಂದೂ
**
ಮೇಘರಾಜ್ ಮೇಶ್ರಮ್ ಮಹಾರಾಷ್ಟ್ರದ ಗೊಂಡಿಯಾದ ಧೀವಾರಿ ಊರವರು. ಪ್ರಸಕ್ತ ನಾಗಪುರದಲ್ಲಿ ಮರಾಠಿ ದೈನಿಕ “ಸಕಾಳ್” ನಲ್ಲಿ ಉದ್ಯೋಗ. ಉದಯೋನ್ಮುಖ ಲೇಖಕರಾದ ಶ್ರೀ ಮೇಶ್ರಮ್ ಅವರ ಅನೇಕ ಕವಿತೆಗಳು ಹಿಂದಿ, ಇಂಗ್ಲೀಷ್ ಮತ್ತು ಉರ್ದು ಭಾಷೆಗಳಿಗೆ ಅನುವಾದವಾಗಿವೆ. ಅನಕ್ಷರಸ್ಥ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಈ ಕವಿ ತಮ್ಮ ಬರಹಗಳಲ್ಲಿ ದೀನದಲಿತರ ವೇದನೆ, ಸಿಟ್ಟು, ಅವರೆದುರಿಸುವ ದೌರ್ಜನ್ಯಗಳ ಕುರಿತು ಬರೆಯುತ್ತಾರೆ.
![](https://kendasampige.com/wp-content/uploads/2020/04/1588052049429_My-pp.jpg)
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ
![](https://kendasampige.com/wp-content/uploads/2020/12/ks-profile.jpg)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ