ಹೇಗೆ ಉತ್ತರದಲ್ಲಿ ಗಂಗೆಯೋ ಹಾಗೆ ದಕ್ಷಿಣದಲ್ಲಿ ಕಾವೇರಿ. ದಕ್ಷಿಣದವರಿಗೆ ಈಕೆ ಜೀವ ನದಿಯೂ ಹೌದು! ಭಾವನದಿಯೂ ಹೌದು! ಕವಿರಾಜಮಾರ್ಗಕಾರ ಕನ್ನಡ ನಾಡಿನ ವಿಸ್ತಾರವನ್ನು ಹೇಳುವಾಗ ಕಾವೇರಿಯಿಂದ ಗೋದಾವರಿಯವರೆಗೆ ಎಂದಿದ್ದಾನೆ. ಹರಿಹರನ ‘ಮಾದಾರ ಚನ್ನಯ್ಯನ ರಗಳೆ’ಯಲ್ಲಿ “ಕಾವೇರಿ ಸೋಂಕಿದರ ಪಾಪಮಂ ಸೋವೇರಿ ಕಾವೇರಿ ಸಕಲ ಸಸ್ಯಾಳಿಯಂ ಕಾವೇರಿ ಹರಿದಳಾ ದೇಶದೊಳ್ ಹರಭಕ್ತಿರಸದಂತೆ” ಎಂದು ಕಾವೇರಿಯ ಪ್ರಾಮುಖ್ಯತೆಯನ್ನು ಬರೆದಿದ್ದಾನೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ

ಕನ್ನಡ ನಾಡಿನ ಜೀವ ನದಿ ಎಂದು ಕರೆಸಿಕೊಳ್ಳುವ ಕಾವೇರಿ ತೀರ್ಥೋದ್ಭವವಾಗುವುದು ತುಲಾಸಂಕ್ರಮಣದಂದು. ಇಂಗ್ಲಿಷ್ ಕ್ಯಾಲೆಂಡರಿನಲ್ಲಿ ಅಕ್ಟೋಬರ್ 17 ಇಲ್ಲವೆ 18 ರಂದು ಕಾವೇರಿ ತೀರ್ಥೋದ್ಭವವಾಗುತ್ತದೆ. “ಗಂಗೇಚ ಯಮುನೇಚ್ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಪ್ರತಿ ನಿತ್ಯ ನಾವು ಸ್ಮರಣೆ ಮಾಡುವ ನದಿಗಳ ಹೆಸರುಗಳು. ಹೇಗೆ ಉತ್ತರದಲ್ಲಿ ಗಂಗೆಯೋ ಹಾಗೆ ದಕ್ಷಿಣದಲ್ಲಿ ಕಾವೇರಿ. ದಕ್ಷಿಣದವರಿಗೆ ಈಕೆ ಜೀವ ನದಿಯೂ ಹೌದು! ಭಾವನದಿಯೂ ಹೌದು! ಕವಿರಾಜಮಾರ್ಗಕಾರ ಕನ್ನಡ ನಾಡಿನ ವಿಸ್ತಾರವನ್ನು ಹೇಳುವಾಗ ಕಾವೇರಿಯಿಂದ ಗೋದಾವರಿಯವರೆಗೆ ಎಂದಿದ್ದಾನೆ. ಹರಿಹರನ ‘ಮಾದಾರ ಚನ್ನಯ್ಯನ ರಗಳೆ’ಯಲ್ಲಿ “ಕಾವೇರಿ ಸೋಂಕಿದರ ಪಾಪಮಂ ಸೋವೇರಿ ಕಾವೇರಿ ಸಕಲ ಸಸ್ಯಾಳಿಯಂ ಕಾವೇರಿ ಹರಿದಳಾ ದೇಶದೊಳ್ ಹರಭಕ್ತಿರಸದಂತೆ” ಎಂದು ಕಾವೇರಿಯ ಪ್ರಾಮುಖ್ಯತೆಯನ್ನು ಬರೆದಿದ್ದಾನೆ.

ಕಾವೇರಿ ಅಂದರೆ ಜನರನ್ನು ಬೆಳೆಯಿಂದ ಸಮೃದ್ಧಿಯಾಗಿಸಿ ಕಾಪಾಡುವ ಜೀವನಾಡಿ ಎಂದರ್ಥ. ಇಂದಿಗೂ ಮಡಿಕೇರಿಯ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನವಾಗುವುದರ ಮೊದಲು ಬಿತ್ತರವಾಗುವ ಹಾಡು ಕಾವೇರಿ…. ಕೊಡಗಿನ ಕಾವೇರಿ… ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶರಪಂಜರ ಚಲನಚಿತ್ರದ್ದು ಆ ಹಾಡಿನ ಚಿತ್ರೀಕರಣ ತಲಕಾವೇರಿಯಲ್ಲಿಯೇ ಆಗಿರುವುದು. ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ‘ದಕ್ಷಿಣ ದೇಶ ಗಂಗೆ’, ‘ಕನ್ನಡ ಕುಲನಾರಿ’, ‘ರೈತರ ಬಾಳಿನ ಜೀವನದಿ’ ಎಂದಿರುವುದು ಹಾಡಿನಲ್ಲಿ ಸೊಗಸಾಗಿ ಕೇಳಿಸುತ್ತದೆ. ಯಾವ ವರ್ಷ ಮಳೆ ಕಡಿಮೆಯಾಗುವುದೋ ಆಗೆಲ್ಲಾ ಕಾವೇರಿ ವಿಚಾರವಾಗಿ ಪ್ರತಿಭಟನೆಯ ಕಾವು ಏರುತ್ತದೆ. ಕಾವೇರಿ ನದಿ ಉಗಮದ ಬಗ್ಗೆ ಸ್ಕಂದ ಪುರಾಣದಲ್ಲಿ, ಆಗ್ನೇಯ ಪುರಾಣದಲ್ಲಿ ಪ್ರಾಚೀನ ತಮಿಳು ಕಾವ್ಯಗಳಲ್ಲಿ ಜಾನಪದ ಕಥೆಗಳಲ್ಲಿ ಉಲ್ಲೇಖವಿದೆ. ಕವೇರ ರಾಜನ ಮಗಳು ಕಾವೇರಿ. ಈಕೆಗೆ ಲೋಪಾಮುದ್ರಾ ಎನ್ನುವ ಹೆಸರಿದೆ.. ಪತಿ ಅಗಸ್ತ್ಯರು ಒಮ್ಮೆ ಈಕೆಯನ್ನು ಬ್ರಹ್ಮಗಿರಿ ತಪ್ಪಲಲ್ಲಿ ಕಮಂಡಲುವಿನಲ್ಲಿ ಬಂಧಿಸಿಟ್ಟು ಎಷ್ಟು ದಿನಗಳಾದರೂ ಬರುವುದಿಲ್ಲ ಸಹಜವಾಗಿ ಬೇಸರಗೊಂಡ ಕಾವೇರಿ ಬಿಡುಗಡೆ ಹೊಂದಬೇಕೆಂದು ಬಯಸಿ ದೇವೇಂದ್ರನಲ್ಲಿ ಮೊರೆಯಿಡುತ್ತಾಳೆ. ದೇವೇಂದ್ರ ಆಕೆಯ ಪ್ರಾರ್ಥನೆಗೆ ಓಗೊಟ್ಟು ಧಾರಾಕಾರ ಮಳೆ ಸುರಿಸುತ್ತಾನೆ ಆ ರಭಸಕ್ಕೆ ಕಮಂಡಲು ಧರೆಗುರುಳಿದಾಗ ಜಲರೂಪಿಯಾಗಿದ್ದ ಕಾವೇರಿಯೂ ಹೊರಬಂದು ಪ್ರವಾಹದೋಪಾದಿಯಲ್ಲಿ ಹರಿದು ಸಾಗರ ಸೇರುತ್ತಾಳೆ ಎನ್ನುವ ಈ ಕತೆ ಜನಜನಿತ. ಸಂಕ್ರಮಣದಂದು ನಿಗದಿತ ಮುಹೂರ್ತದಲ್ಲಿ ಈಕೆ ಜಲರೂಪಿಯಾಗಿ ಉದ್ಭವವಾಗುತ್ತಾಳೆ. ಆ ಕುಂಡಿಕೆಯಿಂದ ತೀರ್ಥ ಉಕ್ಕಿ ಹರಿದರೆ ಗಂಡಾಂತರ ಎನ್ನುವುದಿದೆ. ಹಾಗಾಗಿ ಅರ್ಚಕರು ತೀರ್ಥೋದ್ಭವವಾಗುತ್ತಿದ್ದಂತೆ ಕುಂಡಿಕೆಯಿಂದ ತೀರ್ಥವನ್ನು ಮೊಗೆ ಮೊಗೆದು ನೆರೆದ ಅಪಾರ ಜನಸ್ತೋಮದ ಮೇಲೆ ಪ್ರೋಕ್ಷಣೆ ಮಾಡುತ್ತಾರೆ.

ಹೇಗೆ ಗಂಗಾಜಲವನ್ನು ಅನೇಕ ಮನೆಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳುವ ಪದ್ಧತಿ ಇದೆಯೋ ಹಾಗೆ ಕೊಡವರ ಪ್ರತಿ ಮನೆಗಳಲ್ಲೂ ಕಾವೇರಿ ತೀರ್ಥ ಇದ್ದೇ ಇರುತ್ತದೆ. ಕೊಡವರ ಕುಲದೇವತೆ ಕಾವೇರಿ ಆಗಿರುವುದರಿಂದ ಸಂಕ್ರಮಣವನ್ನು ಕೊಡವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. “ಕೊಡವರಿಗೆ ಮೂರೇ ಹಬ್ಬಗಳು” ಎನ್ನುವ ಕೃತಿಯನ್ನು ಮಂಡೀರಾ ಜಯಾ ಅಪ್ಪಣ್ಣ ಬರೆದಿದ್ದು, ಅದರಲ್ಲಿ ಸಂಕ್ರಮಣ ಕುರಿತು ಸಾಕಷ್ಟು ಮಾಹಿತಿ ಲಭ್ಯವಿದೆ. ಕೊಡವರ ಜಾನಪದ ನೃತ್ಯ ಉಮ್ಮತ್ತಾಟ್‌ನ ಹಾಡಿನ ಮೊದಲನೆ ಸಾಲು “ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳಾ” ಎಂದು ಈ ನೃತ್ಯ ಮಾಡುವಾಗಲೂ ಕಾವೇರಿ ಮಾತೆಯ ವೇಷ ಹಾಕಿದವರು ಮಧ್ಯೆ ಇರುತ್ತಾರೆ. ಮಡಿಕೇರಿಯ ಟೌನ್ ಹಾಲ್ ಮುಂದೆ ಕಾವೇರಿ ನಿಸರ್ಗಧಾಮದ ಪ್ರವೇಶದ್ವಾರದ ಬಳಿ ಕಾವೇರಿ ಮಾತೆಯ ವಿಗ್ರಹಗಳನ್ನು ಕಾಣಬಹುದು. ಈ ವರ್ಷ ಕಾವೇರಿ ಸಂಕ್ರಮಣ ಕಳೆದ ನಂತರ ದಸರಾ ಬಂದಿದೆ.

ಧಾರ್ಮಿಕ ಶಿಸ್ತಿನ ನಾಡಹಬ್ಬ ಎಂದರೆ ದಸರ. ಮಂಜಿನ ನಗರಿಯ ದಸರ ಹಲವು ವಿಶೇಷತೆಯಿಂದ ಕೂಡಿರುವಂಥದ್ದು. ಮಹಾಲಯ ಅಮವಾಸ್ಯೆ ಕಳೆದು ನವರಾತ್ರಿಯ ಪರ್ವಕಾಲದಲ್ಲಿ ಕರಗಗಳು ಊರತುಂಬೆಲ್ಲಾ ಸಂಚರಿಸಿ ಮನೆಮನೆಗೆ ತೆರಳಿ ಪೂಜೆ ಸ್ವೀಕರಿಸುವ ಪದ್ಧತಿ. ಕೊಡಗಿನ ಓಲಗದ ಹಿಮ್ಮೇಳದೊಂದಿಗೆ ಕರಗಗಳು ಬಂದರೆ ಮುತ್ತೈದೆಯರಿಗೆ ಪೂಜೆ ಸಲ್ಲಿಸುವುದು ಎಲ್ಲಿಲ್ಲದ  ಖುಷಿ. ಬಾಗಿಲಿಗೆ ರಂಗೋಲಿ ಹಾಕಿ, ಕರಗ ಹೊತ್ತವರ ಕಾಲಿಗೆ ನೀರು ಹಾಕಿ, ಕರಗಕ್ಕೆ ಪೂಜೆ ಮಾಡಿಸಿ ತಮ್ಮದೇ ಹರಿವಾಣದಲ್ಲಿ ಮಂಗಳಾರತಿ ಮಾಡಿಸಿ ತಾವೂ ತೆಗೆದುಕೊಂಡು ಧನ್ಯತಾ ಭಾವ ಅನುಭವಿಸುವುದಿದೆ. ಮಂಗಳಾರತಿ ಮಕ್ಕಳಿಗೆ ಕೊಡೋಣ ಎಂದರೆ ಮಕ್ಕಳು ಹತ್ತಿರ ಇರುವುದಿಲ್ಲ. ವಾಷ್ ರೂಮಿಗೆ ಅವಸರ ಎಂದೋ ಹೋಮ್‌ವರ್ಕ್ ಇದೆ ಎಂದೋ ಮನೆ ಒಳಗೆ ಇರುತ್ತವೆ. ಅದೇಕೆ ಮಕ್ಕಳು ಆಚೆ ಬರಲೊಪ್ಪುವುದಿಲ್ಲ ಅಂದರೆ ಕರಗ ಹೊತ್ತವರ ಕೈಯಲ್ಲಿರುವ ಚಾಟಿಯ ಭಯದಿಂದ. ಈ ಅಮ್ಮಂದಿರೇನು ಕಡಿಮೆ ಅಲ್ಲ. ಮಕ್ಕಳನ್ನು ಕರಗದವರ ಕೈಯಲ್ಲಿನ ಚಾಟಿ ಹೆಸರು ಹೇಳಿಯೇ ಹೆದರಿಸಿ ಇಟ್ಟುಕೊಳ್ಳುತ್ತಿದ್ದರು. ಕರಗ ಹೊತ್ತವರು ಕಾಲಿಗೆ ಎರಗಿದವರ ಮೇಲೆ ಚಾಟಿಯಿಂದ ಮುಟ್ಟುತ್ತಾರೆ ಅದೇ ಆಶೀರ್ವಾದ. ಆದರೆ ನಾವೆಲ್ಲಾ ಮಡಿಕೇರಿ ಬಿಟ್ಟು ಬಹಳ ವರ್ಷಗಳೆ ಆಗಿರುವುದರಿಂದ ಆ ದಿನಗಳನ್ನು ನೆನಪಿಸಿಕೊಂಡರೆ ಏನೋ ಮಹತ್ತನ್ನು ಕಳೆದುಕೊಂಡ ಭಾವವಾಗುತ್ತದೆ. ಈಗೇನಿದ್ದರೂ ಅತಿಥಿಗಳಾಗಿ ವಿಜಯದಶಮಿ ದಿನ ಅಂದರೆ ದಸರದ ದಿನವೇ ಕೊಡಗಿಗೆ ಹೋಗಿ ಬರುವ ರೂಢಿಗೆ ಬಂದಿದ್ದೇವೆ. ಕಡೆಪಕ್ಷ ಅಲಂಕೃತ ಕರಗಗಳನ್ನು ಒಮ್ಮೆಗೆ ನೋಡಿ ಕೈ ಮುಗಿದು ಮುಂದೆ ಸರಿದು ಬೇರೆ ದೇವಸ್ಥಾನಗಳಿಗೆ ಹೋಗುತ್ತಿದ್ದೆವು.

ಮಡಿಕೇರಿ ದಸರದ ಇತಿಹಾಸವನ್ನು ಒಮ್ಮೆ ಅವಲೋಕನ ಮಾಡಿದರೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥ ೧೭೮೧ರಿಂದ ೧೮೦೯ರ ವರೆಗೆ ಆಳಿದ ದೊಡ್ಡವೀರರಾಜೇಂದ್ರರು ಮೈಸೂರಿನ ಅರಸರಂತೆಯೇ ದಸರಾವನ್ನು ಪ್ರಾರಂಭ ಮಾಡುತ್ತಾರೆ. ಅಂದಿನ ದಿನಗಳಲ್ಲಿ ಕೋಟೆ ಗಣಪತಿಗೆ ಮೊದಲು ಪೂಜೆ ಸಲ್ಲಿಸುವುದರ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ದೊರಕಿಸಿ ವಿಶೇಷ ದರ್ಬಾರನ್ನು, ನವಮಿಯಂದು ಆಯುಧ ಪೂಜೆಯನ್ನು, ದಶಮಿಯಂದು ಜಂಬೂಸವಾರಿಯನ್ನು ನಡೆಸುತ್ತಿದ್ದರಂತೆ. ೧೮೩೪ ರಲ್ಲಿ ಕೊಡಗನ್ನು ಆಳ್ವಿಕೆ ಮಾಡುತ್ತಿದ್ದ ಚಿಕವೀರರಾಜೇಂದ್ರನನ್ನು ಬ್ರಿಟಿಷರು ಸೆರೆಹಿಡಿದ ಕಾರಣ ದಸರಾ ಆಚರಣೆಗೆ ಕೊಂಚ ವಿಘ್ನ ಉಂಟಾಯಿತಾದರೂ ವರ್ಚಸ್ಸನ್ನು ಕಳೆದುಕೊಳ್ಳದೆ ಅನೂಚಾನವಾಗಿ ಇಲ್ಲಿಯವರೆಗೂ ಆಚರಣೆಯಗುತ್ತಾ ಬರುತ್ತಿರುತ್ತದೆ.

“ಕರಗ” ಎಂದರೆ ನಮಗೆ ತಮಿಳುನಾಡಿನ ಕರಗಗಳು, ಬೆಂಗಳೂರು ಕರಗ, ಹೊಳೆನರಸೀಪುರದ ಬಾಗೀವಾಳು ಕರಗ ಅಂದರೆ ಬಿಂದಿಗೆ ಜಾತ್ರೆ ನೆನಪಿಗೆ ಬರಬಹುದು. ಆದರೆ ಮಡಿಕೇರಿಯ ಕರಗಗಳು ವಿಶಿಷ್ಟ ಹಾಗು ವಿಭಿನ್ನ! ಶಕ್ತಿ ದೇವತೆಗಳ ಪ್ರತಿಮೆಗಳಾಗಿ ಇವೆ. ಅದರಲ್ಲೂ ಕರಗ ಇತಿಹಾಸವನ್ನು ನೋಡಿದರೆ ೧೯೦ ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದೆ ಎನ್ನುವುದಿದೆ. ಆ ಕಾಲದಲ್ಲಿ ಸಾಂಕ್ರಾಮಿಕ ರೋಗ ವಿಪರೀತವಾಗಿ ಹರಡಿದ್ದರಿಂದ ಊರಿನ ಧಾರ್ಮಿಕ ಮುಖಂಡರು ಊರ ಹೊರಗಿದ್ದ ನಾಲ್ಕು ಶಕ್ತಿದೇವತೆಗಳ ದೇವಾಲಯದಿಂದ ನವರಾತ್ರಿ ಸಂದರ್ಭದಲ್ಲಿ ಕರಗಗಳನ್ನು ಹೊರಡಿಸಿ ನಗರ ಪ್ರದಕ್ಷಿಣೆ ಹಾಕಿಸಿ ವಿಶೇಷವಾಗಿ ಪೂಜಿಸಲಾರಂಭಿಸಿದರಂತೆ. ನಂತರ ಆಗ ಅಲ್ಲಿ ಹರಡಿದ್ದ ಸಾಂಕ್ರಾಮಿಕ ರೋಗ ವಾಸಿಯಾಯಿತು ಎನ್ನುವ ಪ್ರತೀತಿ ಇದೆ. ಹಾಗೆ ಆಚರಣೆಗೆ ಬಂದ ಕರಗ ಇಲ್ಲಿಯವರೆಗೂ ಮುಂದುವರೆದುಕೊಂಡು ಬಂದಿದೆ.

‘ಮಡಿಕೇರಿ’ ಎಂದರೆ ‘ಮುದ್ದು ರಾಜನ ಕೇರಿʼ ಎಂಬುದಿದೆ. ಆತ ಕಟ್ಟಿಸಿದ ಕೋಟೆ ಬಹಳ ವರ್ಷದವರೆಗೆ ಜಿಲ್ಲಾಡಳಿತದ ಕೇಂದ್ರವಾಗಿತ್ತು. ಆ ಕೋಟೆಯಲ್ಲಿರುವ ಗಣಪತಿಗುಡಿ ಇತಿಹಾಸ ಪ್ರಸಿದ್ಧವಾಗಿದೆ. ಆ ಕೋಟೆಯ ನಾಲ್ಕು ದಿಕ್ಕಿಗೆ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳಿವೆ. ರಾಜಾಸೀಟ್ ಬಳಿಯಿರುವ ಕುಂದೂರುಮೊಟ್ಟೆ ದೇವಸ್ಥಾನ, ಅದರ ಕೆಳ ರಸ್ತೆ ಗೌಳಿ ಬೀದಿಯಲ್ಲಿ ಬರುವ ಕಂಚಿ ಕಾಮಾಕ್ಷಿ ದೇವಸ್ಥಾನ, ನಗರಸಭೆ ಬಳಿ ಇರುವ ಕೋಟೆ ಮಾರಿಯಮ್ಮ ದೇವಸ್ಥಾನ, ಅದರ ನಂತರದ ರಸ್ತೆ ಪೆನ್ಶನ್ ಲೇನ್‌ನಲ್ಲಿ ಬರುವ ದಂಡಿನ ಮಾರಿಯಮ್ಮ ದೇವಸ್ಥಾನ ಹೀಗೆ ಈ ನಾಲ್ಕು ಶಕ್ತಿದೇವತೆಗಳು ಸೇರಿ ಮಡಿಕೇರಿ ನಗರವನ್ನು ಕಾಪಾಡುತ್ತಿವೆ ಎಂಬ ನಂಬಿಕೆ ಈಗಲೂ ಇದೆ. ಮಡಿಕೇರಿ ನಗರದ ಕೋಟೆಯನ್ನು ಕಾಯುವುದು ಕೋಟೆ ಮಾರಿಯಮ್ಮ, ನಗರವನ್ನು ಕಾಪಾಡುವುದು ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಸೈನ್ಯವನ್ನು (ದಂಡು-ಸೈನ್ಯ) ಕಾಪಾಡುವುದು ದಂಡಿನ ಮಾರಿಯಮ್ಮ, ಆರೋಗ್ಯವನ್ನು ಕಾಪಾಡುವುದು ಕಂಚಿ ಕಾಮಾಕ್ಷಿ ಎಂದು ನಾಲ್ಕೂ ದೇವಸ್ಥಾನಗಳನ್ನು ಅವುಗಳ ವಿಶೇಷತೆಯಿಂದ ಗುರುತಿಸುವುದಿದೆ.

ಸಂಕ್ರಮಣದಂದು ನಿಗದಿತ ಮುಹೂರ್ತದಲ್ಲಿ ಈಕೆ ಜಲರೂಪಿಯಾಗಿ ಉದ್ಭವವಾಗುತ್ತಾಳೆ. ಆ ಕುಂಡಿಕೆಯಿಂದ ತೀರ್ಥ ಉಕ್ಕಿ ಹರಿದರೆ ಗಂಡಾಂತರ ಎನ್ನುವುದಿದೆ. ಹಾಗಾಗಿ ಅರ್ಚಕರು ತೀರ್ಥೋದ್ಭವವಾಗುತ್ತಿದ್ದಂತೆ ಕುಂಡಿಕೆಯಿಂದ ತೀರ್ಥವನ್ನು ಮೊಗೆ ಮೊಗೆದು ನೆರೆದ ಅಪಾರ ಜನಸ್ತೋಮದ ಮೇಲೆ ಪ್ರೋಕ್ಷಣೆ ಮಾಡುತ್ತಾರೆ.

ಈ ನಾಲ್ಕು ದೇವತೆಗಳ ಕುರಿತು ಪೌರಾಣಿಕ ಕಥೆಯೂ ಪ್ರಚಲಿತದಲ್ಲಿದೆ. ಕಥೆಯ ಪ್ರಕಾರ ಪಾರ್ವತಿ ದೇವಿ ದುಷ್ಟ ಸಂಹಾರಕ್ಕೆಂದು ಹೊರಟಾಗ ಮೊದಲು ತನ್ನ ಅಣ್ಣ ವಿಷ್ಣುವಿನ ಬಳಿ ತೆರಳುತ್ತಾಳೆ. ಆತ ಶಂಕ, ಚಕ್ರ, ಗಧಾ, ಪದ್ಮ ಮೊದಲಾದ ಆಯುಧಗಳನ್ನು ದಯಪಾಲಿಸುತ್ತಾನೆ. ನಂತರ ಪಾರ್ವತಿ ಬೇರೆ ಬೇರೆ ರೂಪ ತಾಳಿ ದುಷ್ಟರ ಮರ್ಧನ ಮಾಡಿದಳು. ಈ ನಾಲ್ಕು ದೇವತೆಗಳು ಪಾರ್ವತಿ ದೇವಿಯ ಅವತಾರಗಳೆ ಎನ್ನುವ ಪ್ರತೀತಿ ಇದೆ. ಹಾಗಾಗಿ ಕರಗ ಅಂದರೆ ಅಷ್ಟೊಂದು ಶ್ರದ್ಧೆ ಮತ್ತು ಭಕ್ತಿ. ಪ್ರತಿ ದೇವಾಲಯಕ್ಕೂ ಪ್ರತ್ಯೇಕ ಆಡಳಿತ ಮಂಡಳಿಗಳು ಇವೆ. ವರ್ಷಪೂರ್ತಿ ದಸರ ಶೋಭಾ ಯಾತ್ರೆಯ ಒಂದಿಲ್ಲೊಂದು ಕಾರ್ಯಕ್ರಮಗಳ ರೂಪುರೇಷೆಯಲ್ಲಿ ಇವು ಕ್ರಿಯಾಶೀಲವಾಗಿರುತ್ತವೆ.

ಅಶ್ವಯುಜ ಮಾಸದ ಪಾಡ್ಯದಂದು ಮಡಿಕೇರಿಯ ಗದ್ದುಗೆ ಬಳಿ ಇರುವ ಪಂಪ್ ಹೌಸ್‌ನಿಂದ ಕರಗಗಳು ನಗರದ ಪ್ರಮುಖರ, ಗಣ್ಯರ, ಸಾಂಪ್ರದಾಯಿಕ ಪೂಜೆಯಿಂದ ಹೊರಡುತ್ತವೆ. ಇಲ್ಲಿ ನಾಲ್ಕೂ ದೇವಸ್ಥಾನದ ವೃತಧಾರಿ ಅರ್ಚಕರು ಹಳದಿ ಕಚ್ಚೆಯುಟ್ಟು, ಮೈಗೆಲ್ಲಾ ಅರಿಶಿಣಲೇಪನ ಮಾಡಿಕೊಂಡು, ಕೇಶಮುಂಡನ ಮಾಡಿಸಿಕೊಂಡು ಎಡಕೈಯಲ್ಲಿ ಬೆಳ್ಳಿ ಕವಚ ಹೊಂದಿರುವ ಕಠಾರಿಯನ್ನು, ಬಲಕೈಯಲ್ಲಿ ಬೆಳ್ಳಿ ಹಿಡಿಕೆ ಇರುವ ಬೆತ್ತ, ಇಲ್ಲವೆ ಚಾಟಿಯನ್ನು ಹಿಡಿದಿರುತ್ತಾರೆ. ಇನ್ನು ಕರಗ ಸಿಂಗಾರವಾಗುವುದು ತಾಮ್ರದ ತುಂಬಿದ ಬಿಂದಿಗೆಯಲ್ಲಿ. ಬಿಂದಿಗೆಯನ್ನು ದೇವಿ ಮುಖವಾಡದಿಂದ, ಚಿಕ್ಕ ಛತ್ರಿಗಳಿಂದ, ಚಿಕ್ಕಪ್ರಭಾವಳಿಗಳಿಂದ ಮಲ್ಲಿಗೆ, ಸೇವಂತಿಗೆ, ಕನಕಾಂಬರ ಹೂಗಳಿಂದ ವಿಶೇಷ ಅಲಂಕಾರ ಮಾಡಿರುತ್ತಾರೆ. ಅಲಂಕೃತ ಕಳಶಗಳನ್ನು ನೋಡಿದ ಕೂಡಲೆ ದೇವತೆಗಳೇ ಆವಾಹನೆಯಾದಂತೆ, ಇಂಥ ದೇವಾಲಯದ್ದೆ ಎನ್ನುವಷ್ಟರ ಮಟ್ಟಿಗೆ ವಿಭಿನ್ನತೆಯಿಂದಲೂ ಕೂಡಿರುತ್ತವೆ. ಕರಗ ಹೊರುವರನ್ನಲ್ಲದೆ ದೇವಸ್ಥಾಕ್ಕೆ ಸಂಬಂಧಿಸಿದವರು ವ್ರತ ಆಚರಣೆ ಮಾಡಿ ಹಳದಿ ಬಟ್ಟೆಯನ್ನು ತೊಟ್ಟಿರುತ್ತಾರೆ. ತುಂಬಾ ದೂರದವರೆಗೆ ನಡೆಯಬೇಕಾದಾಗ ಮುಖ್ಯ ಕರಗಧಾರಿಗಳ ಬದಲಿಗೆ ಇವರು ಕರಗ ಹೊರುತ್ತಾರೆ. ಅಲಂಕೃತ ಕಳಸಗಳು ಬೀಳುವಂತಿಲ್ಲ ಬಿದ್ದರೆ ಅಪಶಕುನವೆಂಬ ನಂಬಿಕೆಯೂ ಇದೆ. ಕೊಡಗಿನ ವಿಶೇಷ ವಾದ್ಯದೊಂದಿಗೆ ಕರಗವ್ರತಧಾರಿಗಳು ಬರೆನೆತ್ತಿಯ ಮೇಲೆ ಅಲಂಕೃತ ಕಳಸ ಹೊತ್ತು ಕೈಗಳಲ್ಲಿ ನಿಂಬೆ ಹಣ್ಣು ಚುಚ್ಚಿದ ಕಠಾರಿ, ಚಾಟಿ ಹಿಡಿದು ನರ್ತಿಸುತ್ತಿದ್ದರೆ ಭಯ ಭಕ್ತಿ ಒಮ್ಮೆಗೆ ಬರುತ್ತದೆ.

ಮೊದಲ ದಿನ ಅಲಂಕೃತಗೊಂಡ ಕರಗಗಳು ಮಹದೇವಪೇಟೆಯ ಚೌಡೇಶ್ವರಿ, ವಾಸವಿ ದೇವಾಲಯ, ಪೇಟೆ ಶ್ರೀರಾಮಮಂದಿರದಿಂದ ಪೂಜೆ ಸ್ವೀಕರಿಸಿದ ಬಳಿಕ ನಗರ ಪ್ರದಕ್ಷಿಣೆ ಆರಂಭಿಸುತ್ತವೆ. ಕಡೆಯ ದಿನ ದಸರಾ ದಿನದಂದು ಮೊದಲಿಗೆ ಹೊರಡುವುದು ಕುಂದೂರು ಮೊಟ್ಟೆ ಮಾರಿಯಮ್ಮ ದೇವಾಲಯದ ಕರಗ, ನಂತರ ನಾಲ್ಕೂ ಕರಗಗಳು ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಒಟ್ಟಿಗೆ ಪೂಜೆ ಸ್ವೀಕರಿಸಿದ ಬಳಿಕ ದಸರಾ ಶೋಭಾ ಯಾತ್ರೆ ಆರಂಭವಾಗುತ್ತದೆ. ಮೊದಲು ಪೇಟೆ ಶ್ರೀರಾಮಮಂದಿರದ ಮಂಟಪ ಇರುತ್ತದೆ. ನಂತರ ಕರಗಗಳು ಸಂಬಂಧಪಟ್ಟ ದೇವಾಲಯದ ಮಂಟಪದೊಂದಿಗೆ ಹೆಜ್ಜೆ ಹಾಕುತ್ತವೆ. ಮರುದಿನ ಬೆಳಿಗ್ಗೆ ಮಡಿಕೇರಿ ನಗರದ ಹೊರ ವಲಯದಲ್ಲಿರುವ ಗದ್ದುಗೆಯಲ್ಲಿ ಬನ್ನಿ ಕಡಿದ ನಂತರ ದಸರಾ ಉತ್ಸವ ಸಂಪನ್ನವಾಗುತ್ತದೆ. ಸುದರ್ಶನ್ ಸರ್ಕಲ್‌ನಿಂದ ಮೊದಲ್ಗೊಂಡು ಗದ್ದುಗೆಯವರಿಗಿನ ಸುದೀರ್ಘ ಲಕ್ಷಾಂತರ ಜನರೊಂದಿಗೆ ನಡೆಯುವ ಮೆರವಣಿಗೆ ವರ್ಷಕ್ಕೊಂದು ಹೊಸತನದಿಂದ ಕೂಡಿರುತ್ತದೆ.

ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿಯೂ ಕರಗಗಳು ಮಾತ್ರ ದಸರಾ ಶೋಭಯಾತ್ರೆ ನಡೆಸುತ್ತಿದ್ದವು. ೧೯೫೮ರಲ್ಲಿ ರಾಜಸ್ಥಾನದಿಂದ ಬಂದು ಮಡಿಕೇರಿಯಲ್ಲಿ ನೆಲೆಸಿದ ಭೀಮಸಿಂಗ್‌ರವರು ಬಾಣಿಮೊಟ್ಟೆಯ (ಮೊಟ್ಟೆ ಪದದ ವಿಶ್ಲೇಷಣೆ ಕೊಡಗಿನ ವರ್ಷಾ ಕಾಲ ಸರಣಿಯ ಕೊಡಗಿನ ಮೊಟ್ಟೆಯೂ.. ಮದ್ದುಪಾಯಸವೂ ಬರೆಹದಲ್ಲಿದೆ) ರಘುರಾಮ ಮಂಟಪವನ್ನು ಸೇರ್ಪಡೆ ಮಾಡಿದರು. ೧೯೬೯ರಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರು ಕೆ.ಎಸ್ ಅಪ್ಪಚ್ಚು ರಂಜನ್‌ರವರು ದಸರ ಮೆರವಣಿಗೆಗೆ ಹೊಸ ಕಾಯಕಲ್ಪ ಕೊಟ್ಟರು ಎಂದರೆ ತಪ್ಪಿಲ್ಲ. ಈಗ ಪೇಟೆ ಶ್ರೀರಾಮಮಂದಿರ, ಕೋಟೆ ಮಾರಿಯಮ್ಮ, ಕಂಚಿಕಾಮಾಕ್ಷಿ, ಶ್ರೀ ಕುಂದೂರು ಮೊಟ್ಟೆ, ದಂಡಿನ ಮಾರಿಯಮ್ಮ, ಕೋದಂಡರಾಮ, ಶ್ರೀ ಚೌಡೇಶ್ವರಿ, ಶ್ರೀ ದೇಚೂರು ರಾಮಮಂದಿರ, ಕರವಲ ಬಾಡಗ ಗಣಪತಿ, ಶ್ರೀ ಕೋಟೆ ಗಣಪತಿ ಮುಂತಾದ ದೇವಾಲಯಗಳ ಮಂಟಪಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸುತ್ತವೆ.

ಮೊದಲ ಮೂರು ಮಂಟಪಗಳಿಗೆ ಬಹುಮಾನವಿರುತ್ತದೆ. ಬಹುಮಾನ ಘೋಷಣೆಯಾಗುವುದು ಬೆಳಗ್ಗಿನ ಜಾವಕ್ಕೆ ಆ ಸಂದರ್ಭದ ಚಡಪಡಿಕೆ ಅನುಭವಿಸಿದವರಿಗೇ ಗೊತ್ತು. ಇಂಥ ಮಂಟಪಕ್ಕೆ ಬಹುಮಾನ ಬರುತ್ತದೆ ಎಂಬ ಲೆಕ್ಕಾಚಾರಗಳನ್ನು ಸ್ಥಳಿಯರು ಮಾಡಿಕೊಂಡಿರುತ್ತಾರೆ. ಸರಕಾರದ ಅನುದಾನ, ಸಾರ್ವಜನಿಕರ ಕೊಡುಗೆ, ಖಾಸಗಿಯವರ ಸಹಭಾಗಿತ್ವದೊಂದಿಗೆ ಮಡಿಕೇರಿ ದಸರ ನಡೆದುಕೊಂಡು ಬಂದಿದ್ದು ಜಗತ್ವಿಖ್ಯಾತವಾಗಿದೆ ಎಂದರೆ ತಪ್ಪಿಲ್ಲ. ಕೊಡಗಿನ ಪ್ರವಾಸೋದ್ಯಮದ ಚಟುವಟಿಕೆಗಳನ್ನು ಚುರುಕುಗೊಳಿಸುವ ಸೀಸನ್‌ಗಳಲ್ಲಿ ದಸರಾದ್ದೆ ಸಿಂಹಪಾಲು. ಲಕ್ಷಾಂತರ ರೂಗಳ ವೆಚ್ಚದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ಮಾಡಿದ ಕಲಾಕೃತಿಗಳನ್ನು ಯಾವುದಾದರೊಂದು ಪೌರಾಣಿಕ ಸನ್ನಿವೇಶಗಳನ್ನಿರಿಸಿಕೊಂಡು ವಿನ್ಯಾಸ ಮಾಡಿರುತ್ತಾರೆ. ಬಟ್ಟೆಗಳು, ಆಭರಣಗಳು ನೈಜವಾಗಿರುತ್ತವೆ. ಕಲಾಕೃತಿಗಳಿಗೆ ಚಲನೆ ಇರುವಂತೆ, ರಾಕ್ಷಸರ ಬಾಯಿಂದ ಬೆಂಕಿಯೇ ಬಂದಂತೆ, ದೇವಿಯ ತ್ರಿಶೂಲ ಮಿಂಚನ್ನು ಹೊಮ್ಮಿಸುವಂತೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರುತ್ತಾರೆ. ಸಂದರ್ಭಕ್ಕೆ ತಕ್ಕ ಲೇಸರ್ ಶೋಗಳೂ, ಎಲ್ ಇಡಿ, ಬಲ್ಬ್‌ಗಳ ಅಲಂಕಾರ ಅದರಲ್ಲಿನ ವಿನ್ಯಾಸಗಳು ಕಂಪ್ಯೂಟರಿನಿಂದ ನಿಯಂತ್ರಣವಾಗುತ್ತಿರುತ್ತವೆ. ಇವುಗಳ ಜೊತೆಗೆ ಪಡ್ಡೆಹುಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಡಿಜೆಯೂ ಇರುತ್ತದೆ.

ಮಡಿಕೇರಿ ದಸರಾ ರಾತ್ರಿ ನಡೆಯುವ ಕಾರಣ ಹೆಚ್ಚು ಜನಾಕರ್ಷಣೆ ಪಡೆದುಕೊಂಡಿದೆ. ಸೀಮೆ ಎಣ್ಣೆ ಬುಡ್ಡಿ ಬೆಳಕಲ್ಲಿ, ಪೆಟ್ರೊಮ್ಯಾಕ್ಸ್ ಬೆಳಕಲ್ಲಿ ತನ್ನ ಬೆಳಕ ಪ್ರಯಾಣ ಮುಂದುವರೆಸಿಕೊಂಡು ಬಂದ ಹಬ್ಬ ದಸರಾ.ಇಡೀ ಮಡಿಕೇರಿ ನಗರವೆ ಬೆಳಕಿನಲ್ಲಿ ಅಭಿಶಿಕ್ತವಾಗಿದೆಯೇನೋ ಅನ್ನುವ ಭಾವ ವಿದ್ಯುತ್ ದೀಪಾಲಂಕಾರಗಳಿಂದ ಆಗುತ್ತದೆ. ಅದು ಖಾಸಗಿ ಇರಲಿ, ಸರಕಾರಿ ಇರಲಿ, ಹಿಂದೂಗಳ ಕಟ್ಟಡವಿರಲಿ, ಮುಸಲ್ಮಾನರ ಕಟ್ಟಡವಿರಲಿ, ಭೇದವಿರುವುದಿಲ್ಲ ಎಲ್ಲರೂ ಭಾಗಿಯಾಗುವ ಉತ್ಸವ ಇದು. ಪಟ್ಟಣದ ಮೂರು ಸ್ಥಳಗಳಲ್ಲಿ (ಟೌನ್ ಹಾಲ್, ಗಾಂಧಿ ಮೈದಾನ, ಮ್ಯಾನ್ಸ್ ಕಾಂಪೌಂಡ್)ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗುತ್ತವೆ. ಲೈವ್ ಆಗಿ ನೋಡಲಾಗದಿದ್ದರೆ ಮನೆಯಲ್ಲಿಯೇ ಕುಳಿತು ಟಿವಿಯಲ್ಲೇ ಲೈವ್ ನೋಡಬಹುದು. ಮಕ್ಕಳ ದಸರಾ, ಮಹಿಳಾ ದಸರೆ, ಆಹಾರ ಮೇಳಗಳು ದಸರೆಗೆ ವಿಶೇಷ ಮೆರುಗನ್ನು ತಂದುಕೊಡುತ್ತವೆ.

ದಸರಾ ದಿನ ಲಕ್ಷಾಂತರ ಜನರು ಮಡಿಕೇರಿಗೆ ಬಂದು. ಬೆಳಗು ಬೈಗು ಆ ಸಂತೋಷದಲ್ಲಿ ಮಿಂದೇಳುತ್ತಾರೆ ಪಡ್ಡೆ ಹುಡುಗರಂತೂ ಡಿಜೆ ಸದ್ದಿಗೆ ರಾತ್ರಿಯಿಡಿ ಕುಣಿದು ಕುಪ್ಪಳಿಸುತ್ತಾರೆ. ಎರಡನೆ ಮಹಾಯುದ್ಧದ ಸಂದರ್ಭದಲ್ಲಿಯೂ ಪ್ರತಿ ಬಾರಿಯೂ ವಿಶೇಷ ಸಂಭ್ರಮ, ಜನಜಂಗುಳಿಯ ಕೂಜನ, ಆಟಿಕೆಗಳ ಸದ್ದು, ಹೆಣ್ಮಕ್ಕಳ ಶಾಪಿಂಗ್‌ಗೆ ಅವಕಾಶವಿರುವ, ಸಾಂಸ್ಕೃತಿಕವಾಗಿ ಹುಚ್ಚೆದ್ದು ಕುಣಿಯುವಂತಾಗುವ ಮಡಿಕೇರಿಯನ್ನು, ದಸರಾ ದಿನವನ್ನು ಊಹಿಸಿಕೊಳ್ಳುವುದೇ ವಿಶೇಷ ಅನುಭೂತಿ.