ನನ್ನ ಬಾಹುಗಳಿಲ್ಲದೆ ರಿವಾಜಿನೊಂದಿಗೆ ನೀ ನರ್ತಿಸುವ ಆಟ ನನ್ನ ದಣಿಸಿದೆ
ಮೈ ಇಲ್ಲವಾಗಿ ಹೋದ ನನ್ನದೇ ನೆರಳ ಮುಟ್ಟುವ ಆಟ ನನ್ನ ದಣಿಸಿದೆ
ವಸಂತ ಋತುವಿನಲ್ಲಿ ಜುದಾಯಿಯ ನೆನಪು ಉಮ್ರಭರ್ ಬಹಳ ಕಾಡುವುದು
ಬಯಲಿನ ಬತ್ತಲು ಕತ್ತಲ ಸರಗಿನಲ್ಲಿ ಮುಚ್ಚಿಕೊಳ್ಳುವ ಆಟ ನನ್ನ ದಣಿಸಿದೆ
ಸಫರ್ ನಲ್ಲಿ ದೂರದ ತನಕ ನಡೆದು ನಡುವೆಯೇ ಇಳಿದು ಅದೆಲ್ಲಿ ಹೋಗುವೆ
ನಶ್ವರವೆಂದು ಉಸಿರು ದೇಹವನ್ನು ನಿರಾಕರಿಸುವ ಆಟ ನನ್ನ ದಣಿಸಿದೆ
ಒಡೆದ ಚೂರುಗಳನ್ನು ಎಷ್ಟು ಜೋಡಿಸಿದರೂ ದರಿದ್ರದ ಬಿರುಕು ಹಾಗೆಯೇ ಉಳಿದಿರುವುದು
ಸೋಲಿಲ್ಲದೆ ಅಲೆಗಳ ನಿರಂತರ ದಡ ಮುಳುಗಿಸುವ ಆಟ ನನ್ನ ದಣಿಸಿದೆ
ಹ್ಹೇ.. ಖುದಾ, ಎಂಥದು ನಿನ್ನ ಲೀಲೆ, ನಶೆಗಾರ ಹೊದ್ದ ಶವವಸ್ತ್ರ ಶುಭ್ರವಾಗಿದೆ
ಮನಸೊಳಗೊಂದು ಮೈಯಿದೆ ಎಂದು ಒಪ್ಪಿಸುವ ಆಟ ನನ್ನ ದಣಿಸಿದೆ

ಲಕ್ಷ್ಮಣ ಶರೆಗಾರ ವಕೀಲ ವೃತ್ತಿ, ಗೋಕಾಕದಲ್ಲಿ ವಾಸ, ಮೂರು ಕಥಾಸಂಕಲನಗಳು ಪ್ರಕಟ ಆಗಿವೆ, ಗಝಲ್ ಸಂಕಲನ ಪ್ರಕಟಿಸುವುದಿದೆ.. ಬಿಡುಗಡೆ ಕತೆಗೆ, ಸುರಭಿ ಕಥಾಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ.

