Advertisement
ಒಂದ್ ಕವಿತೆ ಹೇಳ್ರಿ ಮೇಸ್ಟ್ರೇ… ಪ್ಲೀಸ್…

ಒಂದ್ ಕವಿತೆ ಹೇಳ್ರಿ ಮೇಸ್ಟ್ರೇ… ಪ್ಲೀಸ್…

‘ತೆಂಕಣ ಗಾಳಿ ಸೋಂಕಿದೊಡಂ…’ ಅಂತ ನೀವು ಪಾಠ ಶುರುಹಚ್ಚಿಕೊಂಡರೆ ತರಗತಿಯಲ್ಲಿ ಥೇಟ್ ಬನವಾಸಿಯ ವಾತಾವರಣ. ಪಂಪನೂ ಒಮ್ಮೆ ಕುಂತು ಕೇಳಬೇಕು, ಹಾಗಿರುತ್ತಿತ್ತು ಆ ವಿಶ್ಲೇಷಣೆ. ಕನ್ನಡ ಭಾಷೆಯನ್ನು ‘ಸುಲಿದ ಬಾಳೆಯ ಹಣ್ಣಿನಂದದಿ’ ಎಂದ ಕವಿವಾಣಿ ಹಳಗನ್ನಡದಲ್ಲೂ ನಿಜವಾಗುತ್ತಿದ್ದುದು ನಿಮ್ಮ ತರಗತಿಯಲ್ಲಿ ಮಾತ್ರ. ಈಗಲೂ ಕಿವಿಯೊಳಗೆ ಪಂಪನ ಅದೇ ಕವಿತೆ, ಅದೇ ಮೊದಲ ಕವಿತೆ.

ನಿಮಗೆ ಕವಿತೆ ಅಂದ್ರೆ ಅದ್ಯಾಕೆ ಅಷ್ಟೊಂದು ಇಷ್ಟ ಅಂತ ನಮ್ಮನ್ನೂ ಕವಿತೆ ಬೆನ್ನು ಹತ್ತುವತನಕ ಗೊತ್ತಾಗಿರಲಿಲ್ಲ. ಆಗ ಎದೆಯಲ್ಲಿ ಮೊಳೆತ ಪ್ರೀತಿ ಬೆಟ್ಟವಾಯಿತು, ಹೂವಾಯಿತು, ತೊರೆಯಾಯಿತು, ಕಡೆಗೊಂದು ಸುಂದರ ಚಿತ್ರವಾಯಿತು. ಆಮೇಲೆ ಕೇಳಬೇಕೇ… ನೀವು ಕಾಲಿಟ್ಟೊಡನೆ ತರಗತಿಯ ತುಂಬಾ ಕವಿತೆಗಳ ಹೂಗೊಂಚಲು, ಮುದಗೊಳಿಸುವ ಘಮಲು.

ಊಹೂಂ, ನೀವು ಕವಿತೆ ಹೇಳದ ದಿನವೇ ಗೊತ್ತಿಲ್ಲಬಿಡಿ. ಆ ಪುಟಾಣಿ ಗಾತ್ರದ ಕವಿತೆಗಳಂತೂ ವ್ಹಾ…ವ್ಹಾ… ಅದೊಂದು ದಿನ ನಿಮ್ಮ ಕೊಠಡಿಗೆ ಬಂದಿದ್ದ ನನಗೆ ತೀವ್ರ ಅಚ್ಚರಿ, ನೀವು ತರಗತಿಯಲ್ಲಿ ಹೇಳುತ್ತಿದ್ದ ಮುಕ್ಕಾಲು ಪಾಲು ಕವಿತೆಗಳು ನಿಮ್ಮವೇ ಎಂಬುದು ನನಗೆ ಗೊತ್ತಾಗಿಹೋಗಿತ್ತು. ಆದರೂ ಯಾವತ್ತಿಗೂ ಅವು ನಿಮ್ಮವೇ ಅಂತ ಬಾಯಿಬಿಟ್ಟವರಲ್ಲವಲ್ಲ..!

ಭಾವತುಂಬಿ, ಮೆಲ್ಲಗೆ ಕೈ ಏರಿಳಿಸುತ್ತಾ ಮೆಲುದನಿಯಲ್ಲಿ ಕವಿತೆ ಕಾಣಿಸಲು ಶುರುಮಾಡಿದಿರೆಂದರೆ ನಾವೆಲ್ಲಾ ಭಾವಪರವಶ. ಆಗಸ್ಟ್ ಮುಗೀತಾ ಬಂತು. ಎಲ್ಲರೂ ಶಿಕ್ಷಕ ದಿನಾಚರಣೆಗೆ ತಯಾರಾಗ್ತಿದ್ದಾರೆ. ಆದರೆ ಅದೊಂದು ಆಚರಣೆ ಅಂತ ನನಗೆ ಯಾವತ್ತೂ ಅನ್ನಿಸಿಯೇ ಇಲ್ಲ. ಇದೋ ಮನಸ್ಸಲ್ಲೇ ನಮಿಸುತ್ತಿದ್ದೇನೆ ಮೇಸ್ಟ್ರೇ… ಯಾಕೋ ಮಾತು ಬರಿದಾಯ್ತೇನೋ ಅನ್ನಿಸ್ತಿದೆ. ನಂದೊಂದು ಕೊನೇ ಆಸೆ- ಒಂದೇ ಒಂದು ಪುಟಾಣಿ ಕವಿತೆ….. ಪ್ಲೀಸ್….

About The Author

ಸಹ್ಯಾದ್ರಿ ನಾಗರಾಜ್

ಊರು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಂದಿ. ಓದಿದ್ದೆಲ್ಲ ಶಿವಮೊಗ್ಗ. ಬದುಕು ಕಟ್ಟಿಕೊಂಡದ್ದು ಬೆಂಗಳೂರಿನಲ್ಲಿ. ಒಂದಷ್ಟು ಕಾಲ ಪತ್ರಕರ್ತ. ಸದ್ಯ, ಗಿಡ-ಮರ, ಹೂವಿನೊಟ್ಟಿಗೆ ಸರಾಗ ಉಸಿರಾಡುತ್ತಿರುವ ಗಾರ್ಡನ್ ಡಿಸೈನರ್. ಪ್ರವಾಸ, ಗಾರೆ ಕೆಲಸ, ಸಿನಿಮಾ, ಫೋಟೊಗ್ರಫಿ ಹುಚ್ಚು. ಕ್ರೈಸ್ಟ್ ಕಾಲೇಜು ಕನ್ನಡ ಸಂಘದಿಂದ ಐದು ಬಾರಿ ಕವಿತೆಗೆ, ಎರಡು ಬಾರಿ ಕತೆಗೆ ಬಹುಮಾನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ