Advertisement
ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

ಸಾಮೀಪ್ಯ

ಸಮುದ್ರ ದಡದಲಿ ಕೂತು ಈಜಲು ಹೋದವರ
ವಾಚು ಚಪ್ಪಲಿ ಬಟ್ಟೆ ಹಾಗೂ ಅದಕಂಟಿದ ಗುನುಗು ವಾಸನೆ
ಗಟ್ಟಿ ಹಿಡಿದು ಎದೆಗವಚಿಕೊಂಡು
ಅಲೆಗಳ ನೋಡುತ್ತಾ
ರೂಪಾಂತರಿಸಿಕೊಳ್ಳುತ್ತಾ
ನಿನ್ನನ್ನೇ ಹುಡುಕಿಕೊಳ್ಳುವ ಕೆಲಸ
ಅದೆಷ್ಟು
ಹೇಳತೀರದ ಹಿತವಾದ ಯಾತನೆ!

ಹತ್ತಾರು ದೇಶದ ನೂರಾರು ಮನೆಗಳ ಕಿಟಕಿಗಳ ಮುಂದೆ ನಿಂತು
ಎದುರಿಗಿರುವ ಮುಖವನೋದಿ
ತವರ ಹಿತ್ತಲಿಗೊಂದು ಅನೂಹ್ಯ ಕಿಟಕಿ ನೆಡುವವನೆ

ಪದ ಪದದ ಪಾದ ಹಿಡಿದು ಪ್ರೀತಿಯಿಂದ ತಡವಿ ತಬ್ಬಿ
ಕೈಯನಿಡಿದು
ದಾರಿ ತುಂಬಾ ಜತನ ಮಾಡಿ
ಎಡರು ತೊಡರುಗಳನೆಲ್ಲ ದಾಟಿ
ನಮ್ಮ ಮಾತಲ್ಲೆ ಭಾವಲೋಕ ಕಟ್ಟುವ ಮಾಂತ್ರಿಕನೆ

ಹೇಳು
ಯಾವ ಪುಟದ ಯಾವ ಪಂಕ್ತಿಯ
ನಿನ್ನ ದನಿಯಲ್ಲಿ ಉಲಿಯುವಾಗ
ಗಂಟಲಸೆರೆ ಉಬ್ಬಿಬಂದಿದ್ದವು?!
ಯಾವ ಸಾಲಿನ ಯಾವ ಶಬ್ದದ ಯಾವ ಅಕ್ಷರದೊಳಗೆ
ನೀನು ಬೆಚ್ಚಗೆ ಕೊಂಚ ಹೊತ್ತು ಅಡಗಿ ಕುಳಿತೆದ್ದು ಬಂದಿದ್ದೆ?!
ಇದ್ದುದನು ತೆಗೆಯಲು ಆಗದೆ ಹೊಸತನ್ನು ಸೇರಿಸಲೂ ಆಗದೆ
ನಿನ್ನತನದ ಮುದ್ರೆಯೊತ್ತಲು
ಅದೆಷ್ಟು ಒದ್ದಾಡಿದ್ದೆ?!
ಆಗದೆ ಅದೆಷ್ಟು ಕನಲಿಹೋಗಿದ್ದೆ?!

ಹತ್ತಾರು ದೇಶದ ನೂರಾರು ಭಾಷೆ ಬಲ್ಲವನೆ
ಶಬ್ದಸಾಗರದಲ್ಲಿ ಈಜಾಡಲು ಕಲಿತವನೆ
ಒಂದಾದರೂ ಸ್ವಂತ ಸಾಲು ಬರೆ ಗೆಳೆಯಾ
ಅನುವಾದದಲ್ಲೇ ಕಳೆದು ಹೋಗಬೇಡ…

ಎಲ್ಲಾ ಸಾಮೀಪ್ಯಗಳ ಸಂಗ ತೊರೆ
ಧೈರ್ಯವೇ ನೀನಾಗು
ಬರೆ… ಒಂದೇ ಒಂದು ಸಾಲು
ನಿನ್ನದೇ ಒಂದು ಸ್ವಂತ ಸಾಲು

ಭೇಟಿಯಾಗೋಣ
ಮುಂದಿನ ಬಾರಿ ಸಿಕ್ಕಾಗ
ನಾವಿಬ್ಬರೂ ವಿನಿಮಯ ಮಾಡಿಕೊಳ್ಳುವ
ಹಸ್ತಲಾಘವದ ಬಿಸುಪೆ ಹೇಳಲಿ
ನೀನು ಬರೆದ ನಿನ್ನದೇ ಸಾಲು

About The Author

ದಾದಾಪೀರ್ ಜೈಮನ್

ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ 'ಪರ್ದಾ & ಪಾಲಿಗಮಿ' ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch  ಅವರ 'ಬ್ಯಾರೆನ್ ಲ್ಯಾಂಡ್' ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.

1 Comment

  1. ರವಿ

    ಚೆಂದದ ಕವಿತೆ. ಓದಿದಷ್ಟು ತೀವ್ರವಾಗಿ ಕಾಡುವ ಆಳಕ್ಕಿಳಿಯುವ ಕವಿತೆ. ಮೂರನೇ ಬಾರಿ ಓದಿದಮೇಲೂ ಮತ್ತೆ ಮತ್ತೆ ಓದಬೇಕಿನಿಸುತ್ತಿದೆ. ಒಂದೊಳ್ಳೆ ಕವಿತೆ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ದಾದಾಪೀರ್ ಅವರೇ.‌ ಶುಭವಾಗಲಿ.‌

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ