ಎಲ್ಲ ಬಗೆಯ ಮನುಷ್ಯ ಚಟುವಟಿಕೆಗಳು ಇದ್ದಕ್ಕಿದ್ದಂತೆ ನಿಂತುಹೋದಂತೆ ಕಾಣುವ ಈ ಊರಿನಲ್ಲಿ ಎಲ್ಲವನ್ನೂ ನೋಡಿ ತಿಳಿದು ಅರಿತು ಬರೆಯುವ ಸಮಾಧಾನವೇನೂ ಸದ್ಯಕ್ಕೆ ಇಲ್ಲ. ತಸ್ಲಿಮಾ ನಸ್ರೀನ್ ಬರೆದ ಲೇಖನವೊಂದು ಕಾರಣವಾಗಿ ಶಿವಮೊಗ್ಗ ನಗರ ಕಳೆದ ಕೆಲವು ದಿನಗಳಿಂದ ನಿಂತುಹೋಗಿದೆ. ಯಾವಾಗಲೂ ಜನಜಂಗುಳಿ, ಗಲಾಟೆ ಗೌಜಿನಿಂದ ತುಂಬಿರುತ್ತಿದ್ದ ಬೀದಿಗಳು ಎಂದಿನ ಜನಜೀವನದ ರೀತಿಯನ್ನು ಮರೆತ ಹಾಗೆ ನಿಶ್ಶಬ್ದವಾಗಿವೆ. ಧೂಳು ಬಿಸಿಲು ತುಂಬಿದ ಈ ನಗರದಲ್ಲಿ ಇದ್ದಕ್ಕಿದ್ದ ಹಾಗೆ ಮಲೆನಾಡಿನ ಕಾಡುಗಳ ದಟ್ಟಮೌನ ಮರುಕಳಿಸಿದ್ದು ನಮ್ಮ ಕಾಲದ ಪುಣ್ಯವೇ ಇರಬೇಕು. ಎಂದಿನಂತೆ ಆ ಸೋಮವಾರದ ಹಗಲು ಕೆಡವುತ್ತಿರುವ ಕಟ್ಟಡಗಳಲ್ಲಿ, ಕಟ್ಟುತ್ತಿರುವ ಸೇತುವೆ-ರಸ್ತೆಗಳಲ್ಲಿ, ಅಗೆಯುತ್ತಿರುವ ಚರಂಡಿಗಳಲ್ಲಿ, ಅದಕ್ಕಾಗಿ ಉರುಳುತ್ತಿರುವ ಮರಗಳಲ್ಲಿ, ಬರಲಿರುವ ಕೈಗಾರಿಕೆ ವಿಮಾನನಿಲ್ದಾಣದ ಕನಸಿನ ಧೂಳಿನಲ್ಲಿ ಮುಳುಗೇಳುತ್ತಿತ್ತು. ಇದಕ್ಕೆಲ್ಲ ಕೈಗೂಡಿಸುವ ರೀತಿಯಲ್ಲಿ ಪೊಲೀಸರ ಗುಂಡಿಗೆ ಸಿಕ್ಕಿ ಇಬ್ಬರು ಮನುಷ್ಯರು ನೆಲಕ್ಕೆ ಒರಗಿದ್ದು, ಹಲವಾರು ಅಂಗಡಿಗಳು ಕಾರು ಬೈಕುಗಳು ಬೂದಿಯಾದದ್ದು ನಮ್ಮ ಪುಣ್ಯದ ಮುಂದುವರಿಕೆಯೇ ಇರಬೇಕು.
ಮುಕ್ಕಾಲು ವಾಸಿ ಅಕ್ಷರ ಬರದವರೇ ಇರುವ ನಮ್ಮ ದೇಶದಲ್ಲಿ ಒಂದು ಲೇಖನದ ಕಾರಣದಿಂದ ತಮ್ಮ ಜೀವಮಾನದ ಶ್ರಮ ಹಾಕಿ ಕಟ್ಟಿಕೊಂಡಿದ್ದ ಮನೆ, ಆಸ್ತಿ, ಅಂಗಡಿ, ವಾಹನ ಎಲ್ಲವನ್ನೂ ಕಳೆದುಕೊಂಡು ಜನ ಬೀದಿಗೆ ಬಂದಿದ್ದರೆ, ಅಕ್ಷರ ಬಲ್ಲ ಮಂದಿ ಇದೆಲ್ಲವನ್ನು ಬರೆದ ಲೇಖಕಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಲ್ಲಾದರು...