ಉತ್ತರ ಕರ್ನಾಟಕ ಪ್ರವಾಸ ಮಾಡುವಾಗ ಭಾಷೆ ವಿಷಯದಲ್ಲಿ ನನಗೊಂದು ವಿಚಿತ್ರ ಅನುಭವವಾಗುತ್ತದೆ. ನನ್ನೊಡನೆ ಮಾತಾಡುವಾಗ ಕೆಲವು ಹಳ್ಳಿಗರು ‘ನಿಮ್ಮದು ಬೆಂಗಳೂರು ಮೈಸೂರು ಕನ್ನಡ. ನೈಸು. ನಮ್ಮ ಭಾಷೆ ಬಿರುಸು’ ಎನ್ನುತ್ತಾರೆ. ಅವರು ಕನ್ನಡ ಮಾತಿನ ಎರಡು ಪ್ರಾದೇಶಿಕ ರೂಪಗಳ ಫರಕನ್ನೇನೊ ಗುರುತಿಸುತ್ತಿದ್ದಾರೆ. ಆದರೆ, ಅವರಲ್ಲಿ ತಮ್ಮ ಮಾತಿನ ರೂಪದ ಬಗ್ಗೆ ತಪ್ಪೊಪ್ಪಿಗೆಯ ಅಥವಾ ಕೀಳರಿಮೆಯ ದನಿ ಇರುವುದೇಕೆ?
ಈ ತರತಮ ಪ್ರಜ್ಞೆ ಉತ್ತರ ಕರ್ನಾಟಕದವರಲ್ಲಿ ಮಾತ್ರವಲ್ಲ, ಪ್ರಾದೇಶಿಕ ರೂಪಭೇದವುಳ್ಳ ನಿರ್ದಿಷ್ಟ ಭಾಷೆಯನ್ನಾಡುವ ಎಲ್ಲ ಸಮುದಾಯಗಳಲ್ಲಿಯೂ ಕಾಣುವಂತಹುದು. ಲಖನೊವಿನ ಉರ್ದುವನ್ನೇ ಶ್ರೇಷ್ಠರೂಪವೆಂದು ನಂಬಿರುವ ಭಾರತದ ಉಳಿದ ಪ್ರಾಂತ್ಯಗಳ ಉರ್ದು ಭಾಷಿಕರಲ್ಲೂ ಈ ತರತಮಭಾವವಿದೆ. ‘ದಖನಿ’ ಎನಿಸಿಕೊಂಡಿರುವ ಹೈದರಾಬಾದ್ ಉರ್ದು, ಲಖನೊ ಉರ್ದುವಿನ ಮುಂದೆ, ಸಿರಿವಂತರ ಮದುವೆಗೆ ಬಂದಿರುವ ಬಡವರ ತರಹ ಮೈಕೈ ಮುದುಡಿಕೊಂಡಿರರಲು ಯತ್ನಿಸುತ್ತದೆ. ತೆಲಂಗಾಣ ಅಥವಾ ರಾಯಲುಸೀಮೆಯ ತೆಲುಗ ‘ಒರಟು’ ಎಂಬ ಧೋರಣೆ ವಿಜಯವಾಡಾ-ಗೋದಾವರಿ ಭಾಗದವರಲ್ಲಿದೆ. ತೆಲುಗು ಸಿನಿಮಾಗಳಲ್ಲಿ ಈಗಲೂ ಯಜಮಾನಿಕೆ ಮಾಡುತ್ತಿರುವುದು ಇದೇ ಕರಾವಳಿ ಆಂಧ್ರದ ‘ನೈಸು’ ತೆಲುಗೇ. ಈ ಸಿನಿಮಾಗಳು ತೆಲಂಗಾಣದ ನಟರನ್ನು ಇಟ್ಟುಕೊಂಡು ತೆಲಂಗಾಣದ ಹೃದಯಭಾಗದಲ್ಲಿರುವ ಹೈದರಾಬಾದ್ ಸ್ಟುಡಿಯೊಗಳಲ್ಲಿ ತಯಾರಾದರೂ ವಿಜಯವಾಡದ ಸಂಸ್ಕೃತ ಭೂಯಿಷ್ಠವಾದ ಉಚ್ಚಜಾತಿಗಳಾಡುವ ತೆಲುಗನ್ನೇ ಬಳಸುತ್ತವೆ; ತಮಿಳು ಮಲೆಯಾಳ ವಿಷಯದಲ್ಲಿಯೂ ಇಂತಹ ಪ್ರಾದೇಶಿಕ...