ಸಿದ್ದಾಪುರ ಪೇಟೆಯ ಶಂಕರನ ಕೂದಲು ಕತ್ತರಿಸುವ ಅಂಗಡಿಯ ತುಂಬೆಲ್ಲ ನಾನಾ ದೇವರುಗಳ ಪಟಗಳೂ, ಗಾಂಧಿ, ನೆಹರೂ, ಇಂದಿರಾಗಾಂಧಿ, ಲಾಲ್ ಬಹದೂರ್ ಇವರೆಲ್ಲರ ಚಿತ್ರಗಳೂ, ಬಣ್ಣಬಣ್ಣದ ಹೂಗಳ ಚಿತ್ತಾರ ಬಿಡಿಸಿದ ಕನ್ನಡಿಗಳೂ ಹಾಗೂ ಬೆನ್ನ ಹಿಂದೆ ಕೂದಲು ಕತ್ತರಿಸುವವರಿಗೆ ಕನ್ನಡಿಯಲ್ಲಿ ಕಾಣಿಸುವ ಹಾಗೆ ನರಕದ ನಾನಾ ಶಿಕ್ಷೆಗಳಿರುವ ಪಟವೂ ಇತ್ತು. ಆ ಪಟದಲ್ಲಿ ನರಕದ ಯಮದೂತರು ತಪ್ಪು ಮಾಡಿದವರನ್ನು ಗರಗಸದಲ್ಲಿ ತುಂಡುತುಂಡುಗಳಾಗಿ ಕತ್ತರಿಸುತ್ತಲೂ, ಬೆಂಕಿಯ ಮೇಲಿಟ್ಟ ಬಾಣಲೆಗಳಲ್ಲಿ ಬೇಯಿಸುತ್ತಲೂ, ಅವರ ನಾಲಗೆಗಳನ್ನು ಎಳೆದು ಹಿಡಿದು ಶೂಲಗಳಲ್ಲಿ ಚುಚ್ಚುತ್ತಲೂ ಇರುತ್ತಿದ್ದರು. ಆ ಚಿತ್ರಪಟಗಳ ಮೇಲೆ ಗೂಡುಕಟ್ಟಿರುವ ಗುಬ್ಬಚ್ಚಿಗಳು ಸದಾ ಸದ್ದು ಮಾಡುತ್ತಾ, ಅತ್ತಿಂದಿತ್ತ ಹಾರಾಡುತ್ತಾ, ಹೊರಗಿನಿಂದ ಹುಲ್ಲುಕಡ್ಡಿಗಳನ್ನು ಕೊಕ್ಕಲ್ಲಿ ಹೆಕ್ಕಿ ತಂದು ಇನ್ನಷ್ಟು ಗೂಡುಗಳನ್ನು ಕಟ್ಟುತ್ತಾ, ಇರುವ ಗೂಡುಗಳನ್ನು ಬೀಳಿಸುತ್ತಾ ಯಾವಾಗಲೂ ಆ ಅಂಗಡಿಯಲ್ಲಿ ಚಟುವಟಿಕೆಯಲ್ಲಿ ಇರುವಂತೆ ಕಾಣಿಸುತ್ತಿದ್ದವು. ಶಂಕರನ ಸಾಕುತಂದೆ ಕುಂಞಂಬುವಿನ ಕಾಲದಿಂದಲೂ ಇದು ಹೀಗೇ ಇರುತ್ತಿತ್ತು. ತನ್ನ ಕ್ಷೌರಿಕ ಕೆಲಸವನ್ನು ಜಿಗುಪ್ಸೆಯಿಂದಲೇ ಮಾಡುತ್ತಿದ್ದ ಶಂಕರನು ಇದನ್ನೇನೂ ಸರಿಮಾಡಲು ಹೋಗದೆ ತನ್ನ ಪಾಡಿಗೆ ತಾನು ಕೂದಲು ಕತ್ತರಿಸುತ್ತಾ ಈ ಗುಬ್ಬಚ್ಚಿಗಳ ಜೊತೆ ತಾನೂ ಬದುಕುತ್ತಿದ್ದನು.ಬೆಳಗೆ ಕಂಕುಳಲ್ಲಿ ಮಲಯಾಳದ ಪತ್ರಿಕೆಯೊಂದನ್ನು ಇರುಕಿಸಿಕೊಂಡು ಬಂದಿದ್ದ ಸಣ್ಣ ಉಸ್ತಾದರು ಇಂದು ಸೂರ್ಯಗ್ರಹಣವಾಗುವುದೆಂದು ಹೇಳಿದ್ದರು. ಸೂರ್ಯಗ್ರಹಣದ...